*   ಒಡವೆ ಕದ್ದಿದ್ದಾರೆಂದು ಮನೆ ಮಾಲಿಕ ದೂರು*   ಸುಳ್ಳು ಆರೋಪ ಮಾಡಿದ್ದಾರೆಂದು ಮಹಿಳೆ ಸಾವಿಗೆ ಶರಣು*   ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ  

ಬೆಂಗಳೂರು(ಫೆ.12): ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳ್ಳತನದ(Theft) ಸುಳ್ಳು ಆರೋಪ ಮಾಡಿದರು ಎಂದು ಆರೋಪಿಸಿ ಮಹಿಳೆಯೊಬ್ಬರು(Woman) ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಶುಕ್ರವಾರ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರ ನಿವಾಸಿ ಉಮಾ(40) ಮೃತ ಮಹಿಳೆ. ಇವರು ಕಳೆದ ಮೂರು ತಿಂಗಳಿಂದ ಭಟ್ಟರಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ರೋಹಿತ್‌ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ರೋಹಿತ್‌ ಮನೆಯಲ್ಲಿ 12 ಲಕ್ಷ ರು. ಮೌಲ್ಯದ ಒಡವೆ ಕಳವಾಗಿದ್ದರಿಂದ ರೋಹಿತ್‌, ಮನೆ ಕೆಲಸದಾಕೆ ಉಮಾ ಮತ್ತು ಅಂಜಿನಮ್ಮ ಎಂಬುವರ ಮೇಲೆ ಅನುಮಾನಗೊಂಡು ದೂರು(Complaint) ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು(Police) ಫೆ.10ರಂದು ಎಫ್‌ಐಆರ್‌(FIR) ದಾಖಲಿಸಿ ಮನೆಗೆಲಸ ಮಾಡುವವರನ್ನು ಕರೆದು ವಿಚಾರಣೆ ಮಾಡಿದ್ದರು.

Data On Suicides : ಕೋವಿಡ್-19 ಮೊದಲ ಅಲೆಯ ವೇಳೆ ಆದ ಆತ್ಮಹತ್ಯೆಗಳ ಪ್ರಮಾಣ ಪ್ರಕಟಿಸಿದ ಕೇಂದ್ರ ಸರ್ಕಾರ!

ಈ ಮೊದಲು ಆತ್ಮಹತ್ಯೆಗೆ ಯತ್ನ:

ಇದರಿಂದ ಮಾನಸಿಕವಾಗಿ ನೊಂದಿದ್ದ ಉಮಾ ವಿಷ(Poison) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆ ಬಳಿಕವೂ ಪೊಲೀಸರು ಗುರುವಾರ ಮತ್ತೊಮ್ಮೆ ಠಾಣೆಗೆ ಕರೆಸಿ ಉಮಾ ಅವರನ್ನು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದರು. ಇದರಿಂದ ಉಮಾ ಮತ್ತಷ್ಟು ಬೇಸರಗೊಂಡಿದ್ದರು. ಮನೆ ಮಾಲೀಕ ರೋಹಿತ್‌ ಮತ್ತು ಪೊಲೀಸರು ನನ್ನ ಮೇಲೆ ಸುಳ್ಳು ಆರೋಪ(Allegation) ಮಾಡಿದರೂ ಎಂದು ಶುಕ್ರವಾರ ವಿಡಿಯೋ ಮಾಡಿ ಉಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ಮರುಪಾವತಿಸಲಾಗದೆ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ(Karkala): ಸಾಲ ಮರುಪಾವತಿಸಲಾಗದೆ ಯುವಕನೊಬ್ಬ ಓಮ್ನಿ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಸೋಮೇಶ್ವರ ಘಾಟಿಯ ಎರಡನೇ ತಿರುವಿನಲ್ಲಿ ನಡೆದಿದೆ. ಶೃಂಗೇರಿ ತಾಲೂಕಿನ ಗಿಣಿಕಲ್‌ ನಿವಾಸಿ ಜಿ.ಎನ್‌. ಲೋಕಣ್ಣ (54) ಆತ್ಮಹತ್ಯೆಗೆ ಶರಣಾದವರು. 

ಅಡಕೆ ತೋಟಕ್ಕೆ ರೋಗ ತಗುಲಿ ನಿರೀಕ್ಷಿತ ಫಸಲು ಬಂದಿರಲಿಲ್ಲ. ಹಾಗೆಯೇ ಕೃಷಿಯಲ್ಲಿ ನಷ್ಟವಾಗಿದ್ದ ಕಾರಣ ಬ್ಯಾಂಕ್‌ ಹಾಗೂ ಸೊಸೈಟಿಯಲ್ಲಿ ಮಾಡಿದ ಸಾಲ(Loan) ಮರುಪಾವತಿಸಲು ಸಾಧ್ಯವಾಗದೆ ಸಾಲಬಾಧೆಯಿಂದ ಗುರುವಾರ ಸೋಮೇಶ್ವರ ಘಾಟಿಯ 2ನೇ ತಿರುವಿನಲಿ ತನ್ನ ಓಮ್ನಿ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕಾರಿನ ಹಿಂದುಗಡೆಯ ಸೀಟಿನಲ್ಲಿ ಕುಳಿತು ಲೋಕಣ್ಣ ಅವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಕ್ಕೊಟ್ಟಿನ ಪ್ರಸಿದ್ಧ ಆರ್ಕಿಟೆಕ್ಟ್ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಉಳ್ಳಾಲ(Ullal): ದುಬೈಗೆ ತೆರಳುತ್ತೇನೆಂದು ಹೇಳಿದ್ದ ತೊಕ್ಕೊಟ್ಟಿನ ಪ್ರಸಿದ್ಧ ಆರ್ಕಿಟೆಕ್ಟ್(Architect) ಸೋಮೇಶ್ವರ ಸಮುದ್ರದಲ್ಲಿ ಆತ್ಮಹತ್ಯೆ ನಡೆಸಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಂಗಳವಾರ ಸಂಜೆ ಮೃತದೇಹ ಕಂಡುಬಂದಿದೆ.
ಕುತ್ತಾರು ತೇವುಲ ನಿವಾಸಿ, ಪ್ರಸ್ತುತ ಕೊಲ್ಯದಲ್ಲಿ ವಾಸವಿರುವ ಸುರೇಶ್‌ ಸಾಲಿಯಾನ್‌ (48) ಮೃತರು. ಕೊಲ್ಯ ಮನೆಯಿಂದ ಸೋಮವಾರ ತಡರಾತ್ರಿ ಹೊರಗಡೆ ತೆರಳಿದ್ದು, ರಾತ್ರಿ ದೂರವಾಣಿ ಮೂಲಕ ತನ್ನ ಸಂಬಂಧಿಕರೊಬ್ಬರಿಗೆ ನಾನು ದೂರ ಹೋಗುತ್ತೇನೆ ಇನ್ನು ಬರುವುದಿಲ್ಲ ಎಂದು ಫೋನ್‌ ಮಾಡಿ ಸ್ವಿಚ್‌ಆಫ್‌ ಮಾಡಿದ್ದರು. ಕರೆ ಮಾಡಿದ್ದ ಸಂಬಂಧಿ ಮನೆ ಸೋಮೇಶ್ವರ ಬಳಿಯೇ ಇದ್ದರಿಂದ ಅವರು ಏನಾದರೂ ಸಮಸ್ಯೆಯಿಂದ ಸಮುದ್ರ ಕಿನಾರೆಗೆ ಬಂದಿರುವ ಸಾಧ್ಯತೆಯ ಬಗ್ಗೆ ಹುಡುಕಿ ಯಾರು ಇಲ್ಲದೆ ಇದ್ದಾಗ ಹಿಂದೆ ಹೋಗಿದ್ದರು.

Tumakuru : ವೇಶ್ಯಾವಾಟಿಕೆಗೆ ಪ್ರಚೋದನೆ ಆರೋಪದ ಬೆನ್ನಲ್ಲೇ ನಾಣಿ ಹಂದ್ರಾಳ ಆತ್ಮಹತ್ಯೆಗೆ ಯತ್ನ

ಆರ್ಕಿಟೆಕ್ಟ್ ಎಂಜಿನಿಯರ್‌ ಹಾಗೂ ಭೂವ್ಯವಹಾರ ಹೊಂದಿದ್ದ ಸುರೇಶ್‌ಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅವರಿಗೆ ಪತ್ನಿ ಮತ್ತು ಪುತ್ರ, ಪುತ್ರಿಯಿದ್ದು ಈ ನಡುವೆ ವಿವಾಹಿತ ಮಹಿಳೆಯೊಂದಿಗೆ ಸಂಬಂಧವಿದ್ದ ಕಾರಣ ಪತ್ನಿಯೊಂದಿಗೆ ವಿರಸದಿಂದ ವಿಚ್ಛೇದನ ಹಂತಕ್ಕೆ ತಲುಪಿತ್ತು. ಈ ನಡುವೆ ಸುರೇಶ್‌ ವಿವಾಹಿತ ಮಹಿಳೆಯೊಂದಿಗೆ ಗ್ರಾಮಚಾವಡಿ ಬಳಿಯ ಮನೆಯೊಂದರಲ್ಲಿ ಬಾಡಿಗೆಗಿದ್ದು, ತನ್ನ ಕೊಲ್ಯದ ಮನೆಗೆ ಬರುತ್ತಿರಲಿಲ್ಲ. ಕಳೆದ ಕೆಲವು ತಿಂಗಳಿನಿಂದ ಕೌಟುಂಬಿಕ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿದ್ದ ಅವರು ತಲೆನೋವಿಗೆ ಸಂಬಂಧಿಸಿದಂತೆ ತನ್ನ ಸ್ನೇಹಿತರಿಗೆ ತಿಳಿಸಿ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದಿದ್ದರು.

ವಿದೇಶಕ್ಕೆ ತೆರಳುತ್ತೇನೆ ಎಂದು ಸ್ನೇಹಿತರಲ್ಲಿ ಹೇಳಿ ನೇರವಾಗಿ ಸೋಮೇಶ್ವರ ಕಡಲ ಕಿನಾರೆಗೆ ಆಗಮಿಸಿ ಪಾದರಕ್ಷೆಯನ್ನು ರುದ್ರಪಾದೆಯ ಕೆಳಗಡೆ ಇಟ್ಟು ದೂರವಾಣಿ ಕರೆ ಮಾಡುತ್ತಾ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕರಾವಳಿ ರಕ್ಷಣಾ ಪಡೆಯ ಸ್ಥಳೀಯ ಜೀವರಕ್ಷಕರು ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಮೃತದೇಹ ಕಂಡು ಬಂದಿದ್ದು, ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.