ಸ್ನೇಹಿತನ ಜೊತೆ ಪತ್ನಿ ಪರಾರಿಯಾದ ದುರಂತವನ್ನು ಸಹಿಸಲಾಗದೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್‌ನಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. 

ತುಮಕೂರು (ಫೆ.18): ಸ್ನೇಹಿತನ ಜೊತೆ ಪತ್ನಿ ಪರಾರಿಯಾದ ದುರಂತವನ್ನು ಸಹಿಸಲಾಗದೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್‌ನಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೃತನನ್ನು ನಾಗೇಶ್ (35) ಎಂದು ಗುರುತಿಸಲಾಗಿದೆ. 12 ವರ್ಷಗಳ ಹಿಂದೆ ಪ್ರೀತಿಸಿ ರಂಜಿತಾ ಎಂಬವರನ್ನು ಮದುವೆಯಾದ ನಾಗೇಶ್, ಇತ್ತೀಚೆಗೆ ತನ್ನ ಮನೆ ಮಾರಾಟ ಮಾಡಿ, ಎರಡು ಮಕ್ಕಳು ಹಾಗೂ ಪತ್ನಿ ಜೊತೆ ಗಟ್ಟಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ.

Add Asianetnews Kannada as a Preferred SourcegooglePreferred

ನಾಗೇಶ್‌ ಸ್ನೇಹಿತ ಭರತ್ ಪರಿಚಯವಾದ ಬಳಿಕ, ಪತ್ನಿ ರಂಜಿತಾ ಆತನೊಂದಿಗೆ ಪ್ರೇಮಾಂಕುರವಾಗಿದ್ದು, ಇಬ್ಬರು ಮಕ್ಕಳನ್ನು ಬಿಟ್ಟು ಭರತ್‌ ಜೊತೆ ಪರಾರಿಯಾಗಿದ್ದಾಳೆ. ಈ ಘಟನೆದಿಂದ ಮನನೊಂದ ನಾಗೇಶ್, ಆತ್ಮಹತ್ಯೆಗೆ ಮೊರೆಹೋಗಿದ್ದು, ಸೆಲ್ಫಿ ವಿಡಿಯೋ ಮಾಡಿ, "ನನ್ನ ಸಾವಿಗೆ ಪತ್ನಿ ರಂಜಿತಾ ಹಾಗೂ ಸ್ನೇಹಿತ ಭರತ್ ಕಾರಣ. ನನಗೆ ನ್ಯಾಯ ಕೊಡಿಸಬೇಕು" ಎಂದು ಹೇಳಿಕೊಂಡು, ಫೇಸ್ಬುಕ್‌ಗೆ ಅಪ್ಲೋಡ್ ಮಾಡಿದ್ದಾರೆ. ನಂತರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

43 ವರ್ಷವಾದರೂ ಹೆಣ್ಣು ಸಿಗಲಿಲ್ಲ ಎಂಬ ಕೊರಗಿನಲ್ಲಿ ಖಿನ್ನತೆ: ಶೂಟ್ ಮಾಡಿಕೊಂಡು ಸಾವಿಗೆ ಶರಣಾದ ವ್ಯಕ್ತಿ!

ಮನನೊಂದು ವ್ಯಕ್ತಿಯೋರ್ವ ನೇಣಿಗೆ ಶರಣು: ಕೌಟುಂಬಿಕ ಕಲಹದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಹಂದಿಗುಂದ ಗ್ರಾಮದಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ 9ಕ್ಕೆ ನಡೆದಿದೆ. ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಮುತ್ತಪ್ಪ ಲಕ್ಕಪ್ಪ ಮೇತ್ರಿ(45) ಮೃತ ದುರ್ದೈವಿ. ಫೆ.11ರಂದು ಗಂಡ- ಹೆಂಡತಿ ಮಧ್ಯೆ ಜಗಳವಾಗಿತ್ತು. ಜಗಳದಲ್ಲಿ ಹೆಂಡತಿ ಮೇಲೆ ಹಲ್ಲೆಗಳಾಗಿದ್ದು, ಮೂಡಲಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಾನಸಿಕವಾಗಿ ನೊಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮುತ್ತಪ್ಪ ಮೇತ್ರಿ, ಸಮೀಪದ ಮಹಾಲಿಂಗಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರವಿವಾರ ಮನೆಗೆ ಬಂದಿದ್ದನೆಂದು ತಿಳಿದು ಬಂದಿದೆ.

ಸಮಾಜದಲ್ಲಿ ನನಗೆ ಹೀಗಾಯಿತಲ್ಲ ಎಂದು ಮಾನಸಿಕವಾಗಿ ಕುಗ್ಗಿ ಸೋಮವಾರ (ಫೆ.17)ರಂದು ಬೆಳಗ್ಗೆ 9ಗಂಟೆಗೆ ನೇಣಿಗೆ ಶರಣಾಗಿದ್ದಾನೆ. ಪಿಎಸ್ಐ ಮಾಳಪ್ಪ ಪೂಜೇರಿ ಮಾರ್ಗದರ್ಶನದಂತೆ ಹಾರೂಗೇರಿ ಠಾಣಾ ಹವಾಲ್ದಾರ್ ಎಸ್.ಕೆ.ಅಸ್ಕಿ, ಸುರೇಶ ಉಗಾರ, ಸಿಬ್ಬಂದಿ ಪ್ರಕಾಶ ಹೆಬ್ಬಾಳ, ಪ್ರವೀಣ ಹೆಬ್ಬಾಳ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವೆಂದು ಸಂಬಂಧಿಕರು ಹಾಗೂ ಸ್ಥಳೀಯರು ಮಾತನಾಡಿ ಕೊಳ್ಳುತ್ತಿದ್ದಾರೆ.