ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಸ್ ನಿಲ್ದಾಣದಲ್ಲಿ, ಏಕಪಕ್ಷೀಯ ಪ್ರೀತಿಯ ಕಾರಣಕ್ಕೆ ಚೇತನ್ ಎಂಬ ಯುವಕ ಲಾವಣ್ಯ ಎಂಬ ಯುವತಿಯನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳೂರು: ಹಾಡಹಗಲೇ ಪಾಗಲ್ ಪ್ರೇಮಿವೊಬ್ಬ ತಲವಾರಿನಿಂದ ಮಾರಕ ಹಲ್ಲೆ ನಡೆಸಿ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿತ್ತು. ಇದೀಗ ಆರೋಪಿ ಚೇತನನ್ನು ಬಂಧಿಸಲಾಗಿದೆ. ಮಂಗಳೂರು ಹೊರವಲಯದ ವಾಮಂಜೂರಿನ ಪಚ್ಚನಾಡಿಯಲ್ಲಿ ತನ್ನ ಕಾರು ನಿಲ್ಲಿಸಿ ಇಲಿಪಾಷಾಣ ಸೇವಿಸಿ ಅಸ್ವಸ್ಥನಾಗಿದ್ದ ಆತನನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಾವಣ್ಯನನ್ನು ಕೊಂದ ಬಳಿಕ ಆಕೆಯ ತಂದೆಗೆ ಕರೆ ಮಾಡಿ ವಿಷಯ ತಿಳಿಸಿ ನಾನೂ ಸಾವಿಗೆ ಶರಣಾಗುತ್ತೇನೆ ಎಂದು ಹೇಳಿದ್ದ.
ಚೇತನ್ ಬಂಧನದ ಬಗ್ಗೆ ದ.ಕ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಮಾಹಿತಿ ನೀಡಿದ್ದು, ಆರೋಪಿ ಚೇತನ್ ಮೃತ ಲಾವಣ್ಯಗೆ ದೂರದ ಸಂಬಂಧಿಯಾಗಿದ್ದಾನೆ. ಆತ ಏಕಪಕ್ಷೀಯವಾಗಿ ಪ್ರೀತಿ ಮಾಡುತ್ತಿದ್ದ, ಲವ್ ಒಪ್ಪದ ಕಾರಣ ತಲ್ವಾರ್ ನಲ್ಲಿ ಕಡಿದು ಕೊಂದಿದ್ದಾನೆ. ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಇಂದು ಬೆಳಗ್ಗೆ ಮಂಗಳೂರಿನಲ್ಲಿ ವಶ ಪಡಿಸಲಾಗಿದೆ. ವಿಚಾರಣೆ ವೇಳೆ ಆತ ಇಲಿಪಾಷಾಣ ಸೇವಿಸಿರುವ ಬಗ್ಗೆ ಹೇಳಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ
ತಾಲೂಕಿನ ಕಕ್ಯಪದವು ನಿವಾಸಿ ಲಾವಣ್ಯ (22) ಮೃತ ದುರ್ದೈವಿ. ಈಕೆಯ ದೂರದ ಸಂಬಂಧಿ ಚೇತನ್ ಕೊಲೆ ಆರೋಪಿ. ಪ್ರಾಥಮಿಕ ತನಿಖೆ ಪ್ರಕಾರ, ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಉದ್ಯೋಗಿಯಾಗಿದ್ದ ಲಾವಣ್ಯಳನ್ನು ಚೇತನ್ ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ. ಲಾವಣ್ಯ ಗುರುವಾರ ಸಂಜೆ ಕಕ್ಯಪದವು ಕಡೆಗೆ ತೆರಳಲು ಕೆಎಸ್ಆರ್ಟಿಸಿ ಬಸ್ನಲ್ಲಿ ಕುಳಿತಿದ್ದರು. ಈ ವೇಳೆ ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, ನನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ ಎಂದು ತಿಳಿಸಿದ್ದರು. ಬಳಿಕ ಕರೆ ಕಡಿತಗೊಂಡಿದೆ. ಬಸ್ನಿಂದ ಕೆಳಗಿಳಿದ ಬಳಿಕ ಯುವಕ ಆಕೆಯನ್ನು ಬೆನ್ನಟ್ಟಿದ್ದು, ತನ್ನ ಬ್ಯಾಗ್ನಿಂದ ತಲವಾರು ಹೊರತೆಗೆದು ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ವೇಳೆ ಯುವತಿಯ ಮೇಲೆ ತಲವಾರಿನಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮರುಕಳಿಸಿದ ಪ್ರಕರಣ:
ಕೆಲ ದಿನಗಳ ಹಿಂದೆಯಷ್ಟೇ ತಾಲೂಕಿನ ಮಂಚಿಯಲ್ಲಿ ಬಸ್ಗೆ ಕಾಯುತ್ತಿದ್ದ ಅಪ್ರಾಪ್ತೆಗೆ ಯುವಕನೋರ್ವ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ್ದ ಘಟನೆ ನಡೆದಿತ್ತು.


