Asianet Suvarna News Asianet Suvarna News

ಗುಜರಾತ್‌ನಲ್ಲೂ ಕರ್ನಾಟಕ ಪವರ್‌ ಶೋ: ವಿಜಯಪುರ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ

*   ವಿಜಯಪುರ ಖಾಕಿಪಡೆ ನಡೆಸಿದ ರೋಮಾಂಚನಕಾರಿ ಕಾರ್ಯಾಚರಣೆ
*  ಸೂಸೈಡ್ ಮಾಡಿಕೊಳ್ಳಲು ಮುಂದಾಗಿದ್ದ ವ್ಯಾಪಾರಿ
*  ಸಿಬ್ಬಂದಿಗೆ ಬಹುಮಾನ ನೀಡಿದ ಎಸ್ಪಿ

Vijayapura Police Conducted the Operation in Gujarat grg
Author
bengaluru, First Published Jul 5, 2022, 1:02 PM IST

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜು.05):  ವಿಜಯಪುರ ಪೊಲೀಸರು ಬೇಧಿಸಿದ ಅದೊಂದು ಪ್ರಕರಣ ಎಲ್ಲರನ್ನು ಹುಬ್ಬೇರಿಸುವ ಹಾಗೆ ಮಾಡಿದೆ. ಹೊರ ರಾಜ್ಯದ ಖದೀಮರು ಜಿಲ್ಲೆಯ ರೈತರನ್ನ, ಸ್ಟೋರೇಜ್‌ ಮಾಲೀಕರನ್ನ ಯಾಮಾರಿಸಿ ಕೋಟ್ಯಾಂತರ ರು ಮೌಲ್ಯದ ಒಣದ್ರಾಕ್ಷಿಯನ್ನ ಲಪಟಾಯಿಸಿಕೊಂಡು ಹೋಗಿದ್ದರು. ಈ ಪ್ರಕರಣ ಬೆನ್ನಟ್ಟಿದ ವಿಜಯಪುರದ ಸೂಪರ್‌ ಕಾಪ್ಸ್‌ ಗುಜರಾತ್‌ನಿಂದ 2 ಕೋಟಿಗೂ ಅಧಿಕ ಬೆಲೆಬಾಳುವ 117 ಟನ್ ಒಣದ್ರಾಕ್ಷಿಯನ್ನ 10 ಲಾರಿಗಳ ಮೂಲಕ ರಿಕವರಿ ಮಾಡಿಕೊಂಡು ವಾಪಾಸ್‌ ಆಗಿದ್ದಾರೆ.

ಅತಿ ಹೆಚ್ಚು ದ್ರಾಕ್ಷಿ ಬೆಳೆಯೋ ಜಿಲ್ಲೆ

ವಿಜಯಪುರ ಜಿಲ್ಲೆ ದೇಶದಲ್ಲಿಯೇ ಅತಿಹೆಚ್ಚು ದ್ರಾಕ್ಷಿ ಬೆಳೆಯುತ್ತದೆ. ಕೆಲವು ರೈತರು ದ್ರಾಕ್ಷಿ ಮಾರಾಟ ಮಾಡಿದರೆ, ಇನ್ನು ಕೆಲವರು ಅದನ್ನ ಒಣದ್ರಾಕ್ಷಿ ರೂಪದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಒಣದ್ರಾಕ್ಷಿ ಸಂಗ್ರಹಿಸಿಡಲು ಸರಿಯಾದ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲ ಹೀಗಾಗಿ, ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಇವರಿಂದ ಒಣ ದ್ರಾಕ್ಷಿ ಖರೀದಿಸಿರುವ ವ್ಯಾಪಾರಿಗಳು ಮಾರಾಟ ಮಾಡಿ, ರೈತರಿಗೆ ಹಣವನ್ನು ನೀಡುತ್ತಾರೆ.

ಪತಿಯೊಂದಿಗೆ ಕ್ಷುಲ್ಲಕ ಜಗಳ: 7 ತಿಂಗಳ ಮಗನನ್ನು ಕೊಂದು ಮಹಿಳೆ ಆತ್ಮಹತ್ಯೆ

ರೈತರ ಒಣದ್ರಾಕ್ಷಿ ಲಪಟಾಯಿಸಿದ ಖದೀಮರು

ಒಣ ದ್ರಾಕ್ಷಿಯ ಮೇಲೆ ಕಣ್ಣಿಟ್ಟಿದ್ದ ಗುಜರಾತ್ ಮೂಲದ ವ್ಯಾಪಾರಿಗಳ ಗುಂಪೊಂದು ದಾಳಿಯಿಡುತ್ತದೆ. ಪ್ರಾರಂಭದಲ್ಲಿ ನಗದು ವ್ಯಾಪಾರ ಮಾಡುವ ಈ ಗುಂಪು, ಇಲ್ಲಿಯವರ ವಿಶ್ವಾಸಗಳಿಸುತ್ತದೆ. ಜೊತೆಗೆ ಸ್ಥಳದಲ್ಲಿಯೇ ಅವರಿಗೆ ಹಣ ಪೇಮೆಂಟ್ ಮಾಡುತ್ತದೆ. ಹೀಗೆ ಹಣಕಾಸಿನ ವ್ಯವಹಾರಮಾಡಿ, ನಂಬಿಕೆ ಬಂದ ಮೇಲೆ ಒಂದು ರಾತ್ರಿ, ಎಲ್ಲವನ್ನೂ ಖಾಲಿಮಾಡಿಕೊಂಡು ಎಸ್ಕೇಪ್ ಆಗಿಬಿಡುತ್ತದೆ.

ಕಚೇರಿ ನಿರ್ಮಿಸಿಕೊಂಡು ಸ್ಟೋರೆಜ್‌ ಮಾಲೀಕರಿಗೆ ಮೋಸ

ಸುಮಾರು 2 ರಿಂದ 3 ಲಕ್ಷ ಹಣ ಖರ್ಚುಮಾಡಿ, ಸುಸಜ್ಜಿತವಾದ ಕಚೇರಿ ನಿರ್ಮಾಣ ಮಾಡುವ ಈ ವ್ಯಾಪಾರಿಗಳು, ಸ್ಥಳೀಯರಂತೆಯೇ ಬಿಂಬಿಸುತ್ತಾರೆ. ಅದಕ್ಕೆ ಬೇಕಾಗುವ ಎಲ್ಲ ದಾಖಲೆಗಳನ್ನು ನಕಲಿ ಮಾಡಿ, ನಕಲಿ ಅಡ್ರೆಸ್ ಪ್ರುಫ್ ನೀಡುತ್ತದೆ. ಇಲ್ಲಿ ನೀಡುವ ಹೆಸರುಗಳು ಕೂಡಾ ನಕಲಿಯೇ. 2500 ರೂಪಾಯಿ ಕೊಟ್ಟು ಜಿಎಸ್ಟಿ ನೋಂದಣಿ ಮಾಡಿಕೊಳ್ಳುತ್ತಾರೆ. ಹೀಗೆ ನಕಲಿ ವಿಳಾಸದ ಮೇಲೆಯೇ ಸುಮಾರು 2 ಕೋಟಿ ರೂಪಾಯಿಗಳ ಒಣ ದ್ರಾಕ್ಷಿಯನ್ನು ಮೊಸಮಾಡಿ ರಾತ್ರೋರಾತ್ರಿ ಕದ್ದು ಸಾಗಿಸಿದ್ದಾರೆ.

ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಖಾಕಿಪಡೆ

ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರಿಗೆ ತಲೆನೋವು ಶುರುವಾಗಿದ್ದೆ ಇಲ್ಲಿ. ಯಾಕಂದರೆ ಆರೋಪಿಗಳು ನೀಡಿರುವ ಯಾವುದೇ ದಾಖಲೆಗಳು ಅಸಲಿಯಲ್ಲ. ಗುಜರಾತಿನಲ್ಲಿ ಅವರ ಹೆಸರೇ ಬೇರೆ, ಇಲ್ಲಿ ದಾಖಲೆಗಳಲ್ಲಿರುವ ಹೆಸರೇ ಬೇರೆ, ಜೊತೆಗೆ ಅಹಮದಾಬಾದನವರು ಎಂದು ನಂಬಿಸಿದ್ದರು. ಆದರೆ, ಹೋಗಿದ್ದು ಸೂರತ್ ಗೆ. ಇದು ಪ್ರಕರಣವನ್ನು ಮತ್ತಷ್ಟು ಕಗ್ಗಂಟಾಗಿ ಮಾಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ , ಎಸ್ಪಿ ಹೆಚ್.ಡಿ. ಆನಂದಕುಮಾರ್, ಹೆಚ್ಚುವರಿ ಎಸ್ಪಿ ರಾಮ್ ಅರಸಿದ್ಧಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ನಿನ್ನೆಯಷ್ಟೇ ಸಿಐಡಿಗೆ ವರ್ಗಾವಣೆಗೊಂಡ ಡಿವೈಎಸ್ಪಿ ಲಕ್ಷ್ಮೀನಾರಾಯಣ, ಗೋಳಗುಮ್ಮಟ ಸಿಂಗಂ ಸಿಪಿಐ ರಮೇಶ್‌ ಅವಜಿ, ಎಪಿಎಂಸಿ ಪಿಎಸೈ ಸೋಮಶೇಖರ್‌ ಗೆಜ್ಜಿ ಸೇರಿದಂತೆ 15 ಸಿಬ್ಬಂದಿಗಳುಳ್ಳ ತನಿಖಾತಂಡ ಮೊದಲಿಗೆ ಸೂರತ್ ಗೆ ಭೇಟಿ ನೀಡಿ ಪರಸ್ಥಿತಿಯನ್ನು ಅವಲೋಕಿಸಿ

ಗುಜರಾತನಲ್ಲೂ ಪವರ್‌ ತೋರಿಸಿದ ಖಾಕಿ ಪಡೆ

ವಿಜಯಪುರದ ಸಚಿನ್ ಅಂತ ಪರಿಚಯಿಸಿಕೊಂಡಿದ್ದ ವ್ಯಕ್ತಿ, ಅಹಮದಾಬಾದ್ ನಲ್ಲಿ ಕೃನಾಲಕುಮಾರ್ ಆಗಿದ್ದ. ಸಚಿನ್ ಅಂತಲೇ ಹುಡುಕುತ್ತಿದ್ದ ಅವರಿಗೆ ನಿಜವಾದ ಹೆಸರು ಕಂಡುಹಿಡಿಯುವುದು ಕಷ್ಟವಾಗಿತ್ತು. ಸೂರತ್ ಹಾಗೂ ಅಹಮದಾಬಾದ್ ನಲ್ಲಿರುವ ಎಲ್ಲ ಕೋಲ್ಡ್ ಸ್ಟೋರೇಜ್ ಗಳನ್ನು ಸರ್ಚ್ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ಆದರೂ ಅಷ್ಟು ಸುಲಭದ ಮಾತಾಗಿರಲಿಲ್ಲ, ಯಾಕೆಂದರೆ ಯಾವುದೇ ಸರ್ಚ್ ವಾರೆಂಟ್ ಇಲ್ಲದೆ ಸುಖಾಸುಮ್ಮನೆ ಸರ್ಚ್ ಮಾಡುವ ಹಾಗಿಲ್ಲ. ಅಲ್ಲಿಂದಲೇ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪೊಲೀಸರು, ಸರ್ಚ್ ವಾರಂಟ್ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಒಂದು ಗೋಡೌನ್‌ನಲ್ಲಿ 500 ಬಾಕ್ಸ್‌ ಒಣ ದ್ರಾಕ್ಷಿ ಸಂಗ್ರಹಿಸಿಟ್ಟಿರುವುದು ಗಮನಕ್ಕೆ ಬರುತ್ತದೆ. ಆದರೆ ಅದನ್ನ ಮಾರಾಟ ಮಾಡದಂತೆ ತಡೆಯುವುದು ಹೇಗೆ ಎನ್ನುವ ಸಮಸ್ಯೆ.

ಕಳ್ಳರು ಛಾಪೆ ಕೆಳಗೆ, ರಂಗೋಲಿ ಕೆಳಗೆ ನುಗ್ಗಿದ ಪೊಲೀಸರು

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ವಿಜಯಪುರ ನಗರದಲ್ಲಿರುವ ಗುಜರಾತ್ ಮೂಲದ ವ್ಯಾಪಾರಿಗಳನ್ನು ಸಂಪರ್ಕಿಸಿ, ಅವರಿಂದ ವಾಯ್ಸ್ ಮೆಸೇಜ್ ಗಳನ್ನು ಅಹಮದಾಬಾದ್ ಹಾಗೂ ಸೂರತಗಳಲ್ಲಿರುವ ವ್ಯಾಪಾರಿಗಳು, ಅವರ ಸಂಬಂಧಿಕರಿಗೆ  ವಿಜಯಪುರದಿಂದ ಬಂದಿರುವ ಒಣ ದ್ರಾಕ್ಷಿಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡದಂತೆ ಮನವಿ ಮಾಡುತ್ತಾರೆ. ಇದೆ ಅವರ ಸಹಾಯಕ್ಕೆ ಬರುತ್ತದೆ.

ಪೊಲೀಸರು ದಿಕ್ಕು ತಪ್ಪಿಸಲು ಲಾರಿಗಳ ಅದಲು-ಬದಲು

ಕಿಶ್‌ಮಿಶ್‌ ತುಂಬಿದ್ದ ಲಾರಿಗಳನ್ನ ಅದಲು ಮಾಡಿ  ಪತ್ತೇದಾರಿ ಸಿನೆಮಾದಂತೆಯೇ ಕಾರ್ಯನಿರ್ವಹಿಸುವ ಈ ವ್ಯಾಪಾರಿಗಳು, ಸೂರತ್ ಇನ್ನೂ 30 ಕಿ.ಮಿ.ದೂರ ಇರುವಾಗಲೇ, ಲಾರಿಗಳಲ್ಲಿರುವ ಒಣದ್ರಾಕ್ಷಿಯನ್ನು ಇನ್ನೊಂದು ಲಾರಿಗೆ ಶಿಫ್ಟ್ ಮಾಡುತ್ತಾರೆ. ಕಾರಣ ಈ ವಸ್ತುಗಳು ಎಲ್ಲಿಗೆ ಹೋದವು, ಎಲ್ಲಿಂದ ಬಂದವು ಎನ್ನುವುದು ಇಬ್ಬರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಸಿನಿಮೀಯ ರೀತಿಯಲ್ಲಿ ಲಾರಿಗಳ ಅದಲು-ಬದಲಾಗುತ್ತವೆ.

ಪ್ರಿಯಕರನೊಡನೆ ಸೇರಿ ಪತಿ ಕೊಲೆ ಮಾಡಿ ನಾಪತ್ತೆ ಕೇಸ್‌ ದಾಖಲಿಸಿದ್ದ ಪತ್ನಿ ಅಂದರ್!‌

ಸೂಸೈಡ್ ಮಾಡಿಕೊಳ್ಳಲು ಮುಂದಾಗಿದ್ದ ವ್ಯಾಪಾರಿ

ಎರಡು ವರ್ಷಗಳ ಹಿಂದೆಯಷ್ಟೇ ಈ ವ್ಯಾಪಾರಕ್ಕೆ ಕಾಲಿಟ್ಟಿದ್ದ ಯುವಕನೊಬ್ಬನಿಗೂ 70 ಲಕ್ಷಕ್ಕೂ ಅಧಿಕ ವಂಚನೆ ಮಾಡಿದ್ದರು. ಇದರಿಂದ ಬೇಸತ್ತಿದ್ದ ಯುವಕ ಆತ್ಮಹತ್ಯೆಗೆ ಮುಂದಾಗಿದ್ದು ಪೊಲೀಸರ ನಿದ್ದೆಗೇಡಿಸಿತ್ತು. ಅವನ ಪ್ರಾಣ ಕಾಪಾಡುವುದರ ಜೊತೆಗೆ ತನಿಖೆಯನ್ನು ಪೂರ್ಣಗೊಳಿಸಬೇಕಿತ್ತು. ಒಬ್ಬಂಟಿಯಾಗಿ ಬಿಟ್ರೆ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವ ದೃಷ್ಟಿಯಿಂದ ಅವನನ್ನು ತಮ್ಮಜೊತೆಗೆ ಕರೆದೊಯ್ದು ಅವನ ಪ್ರಾಣವನ್ನೂ ಕಾಪಾಡಿದ್ದಾರೆ.

ಸಿಬ್ಬಂದಿಗೆ ಬಹುಮಾನ ನೀಡಿದ ಎಸ್ಪಿ

ಈ ಪ್ರಕರಣವನ್ನು ಭೇದಿಸಲೇಬೇಕು ಎಂದು ಪಣತೊಟ್ಟಿದ್ದ ಜಿಲ್ಲಾ ಪೊಲೀಸರು, ಸಿನಿಮೀಯ ರೀತಿಯಲ್ಲಿಯೇ ಕಾರ್ಯನಿರ್ವಹಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.
 

Follow Us:
Download App:
  • android
  • ios