ಬಿಹಾರದ ಎಂಜಿನಿಯರ್ ಮನೆ ಮೇಲೆ ವಿಚಕ್ಷಣಾ ದಳ ರೇಡ್: ಲೆಕ್ಕಕ್ಕೆ ಸಿಗದ ಕೋಟಿ ಕೋಟಿ ಹಣ ಪತ್ತೆ
ಬಿಹಾರದಲ್ಲಿ ಎಂಜಿನಿಯರ್ ಒಬ್ಬರ ನಿವಾಸದ ಮೇಲೆ ವಿಚಕ್ಷಣಾ ದಳ ರೇಡ್ ಮಾಡಿದೆ. ಈ ವೇಳೆ 4 ಕೋಟಿ ರೂ. ಗೂ ಹೆಚ್ಚು ಹಣ ಪತ್ತೆಯಾಗಿದೆ.
ಬಿಹಾರದ ಎಕ್ಸಿಕ್ಯುಟಿವ್ ಎಂಜಿನಿಯರ್ ಒಬ್ಬರ ನಿವಾಸದ ಮೇಲೆ ವಿಚಕ್ಷಣಾ ದಳದ ಅಧಿಕಾರಿಯೊಬ್ಬರು ರೇಡ್ ಮಾಡಿದ್ದಾರೆ. ಈ ವೇಳೆ ಕೋಟ್ಯಂತರ ರೂ. ಗೂ ಅಧಿಕದ ಮೊತ್ತದ ಲೆಕ್ಕಕ್ಕೆ ಸಿಗದ ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಬಿಹಾರದ ಪಾಟ್ನಾ, ಕಿಶನ್ಗಂಜ್ ಸೇರಿ 3 - 4 ಸ್ಥಳಗಳಲ್ಲಿ ವಿಚಕ್ಷಣಾ ದಳ ಅಧಿಕಾರಿಗಳು ಪರಿಶಿಲನೆ ನಡೆಸಿದ್ದು, ಈ ವೇಳೆ ಸುಮಾರು 1 ಕೋಟಿ ರೂ. ನಗದು ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬಿಹಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕಿಶನ್ಗಂಜ್ ವಿಭಾಗದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿರುವ ಸಂಜಯ್ ಕುಮಾರ್ ರಾಯ್ ಅವರಿಗೆ ಸೇರಿದ ಸ್ಥಳಗಳ ಮೇಲೆ ರೇಡ್ ನಾಡೆಸಲಾಗಿದೆ.
ಹಾಗೂ, ನಗದಿನ ಜತೆಗೆ ಕೆಲವು ದಾಖಲೆಗಳು ಹಾಗೂ ಒಡವೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ವಿಚಕ್ಷಣಾ ಇಲಾಖೆ ಶನಿವಾರ ಮಾಹಿತಿ ನೀಡಿದೆ. ನಗದು ಹಣವನ್ನು ಎಣಿಸಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದು, ಕ್ಯಾಶ್ ಕೌಂಟಿಂಗ್ ಮಷಿನ್ ಅನ್ನು ತೆಗೆದುಕೊಂಡು ಬಂದ ನಂತರ ಒಟ್ಟಾರೆ ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ವಿಚಕ್ಷಣಾ ಇಲಾಖೆಯ ಪಾಟ್ನಾದ ಡಿಎಸ್ಪಿ ಸುಜಿತ್ ಸಾಗರ್ ಮಾಹಿತಿ ನೀಡಿದ್ದಾರೆ. ಇನ್ನು, ಆರೋಪಿ ಎಕ್ಸಿಕ್ಯುಟಿವ್ ಎಂಜಿನಿಯರ್ ವಿರುದ್ಧ ತನಿಖೆ ನಡೆದಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದೂ ಸುಜಿತ್ ಸಾಗರ್ ತಿಳಿಸಿದ್ದಾರೆ.
ಇದನ್ನು ಓದಿ: ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಸಿಎಂ ಸಹಾಯಕನ ನಿವಾಸದಲ್ಲಿ 2 ಎಕೆ-47, 60 ಬುಲೆಟ್ ವಶಕ್ಕೆ..!
ಕಿರಿಯ ಎಂಜಿನಿಯರ್ ಹಾಗೂ ಕ್ಯಾಶಿಯರ್ಗಳ ವಿರುದ್ಧ ಲಂಚ ಪಡೆದ ಆರೋಪದ ಹಿನ್ನೆಲೆ ವಿಚಕ್ಷಣಾ ಇಲಾಖೆ ಸಂಜಯ್ ಕುಮಾರ್ ರಾಯ್ ಅವರ ನಿವಾಸ ಹಾಗೂ ಅವರಿಗೆ ಸೇರಿದ ಸ್ಥಳಗಳ ಮೇಲೆ ರೇಡ್ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ಅವರ ಪಾಟ್ನಾದ ಇಂದ್ರಪುರಿ ರಸ್ತೆಯ ನಂ. 10 ನಿವಾಸದ ಮೇಲೆ ವಿಚಕ್ಷಣಾ ಇಲಾಖೆಯ ಅಧಿಕಾರಿಗಳು ರೇಡ್ ಮಾಡಿದ ಬಳಿಕ ಸುಮಾರು 1 ಕೋಟಿ ರೂ. ನಗದು ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ತನಿಖಾ ತಂಡ ನೋಟುಗಳನ್ನು ಹೊಂದಾಣಿಕೆ ಮಾಡಲು ಆರಂಭಿಸಿದ್ದು, ರೇಡ್ನಲ್ಲಿ ಇನ್ನೂ ಹಲವು ದಾಖಲೆಗಳು ಪತ್ತೆಯಾಗಿವೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈ ರೇಡ್ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಒಟ್ಟಾರೆ 4 ಕೋಟಿ ರೂ. ಗೂ ಹೆಚ್ಚು ಹಣ ಪತ್ತೆ
ಇನ್ನೊಂದೆಡೆ, ಪಾಟ್ನಾದ ವಿಚಕ್ಷಣಾ ದಳ, ಡಿಎಸ್ಪಿ, ಸುಜಿತ್ ಸಾಗರ್ ಪ್ರಕಾರ, ಸಂಜಯ್ ಕುಮಾರ್ ರಾಯ್ ಅವರನ್ನು ಒಳಗೊಂಡ ಲಂಚಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಹಲವಾರು ದಾಳಿಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ವಿವಿಧ ಸ್ಥಳಗಳಲ್ಲಿ ಹಲವಾರು ದಾಳಿಗಳನ್ನು ನಡೆಸಲಾಯಿತು ಮತ್ತು ಈ ರೇಡ್ಗಳ ವೇಳೆ ಸಂಜಯ್ ಕುಮಾರ್ ರಾಯ್ ಅವರಿಗೆ ಸಂಬಂಧಿಸಿದ 4 ಕೋಟಿ ರೂ. ಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ ಎಂದೂ ಪಾಟ್ನಾದ ವಿಚಕ್ಷಣಾ ದಳ, ಡಿಎಸ್ಪಿ, ಸುಜಿತ್ ಸಾಗರ್ ಮಾಹಿತಿ ನೀಡಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ವಿರುದ್ಧ ಕೇಸ್ ದಾಖಲಿಸುವ ಮೊದಲು ಈ ಎಲ್ಲ ರೇಡ್ಗಳು ನಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಆಸ್ಪತ್ರೆ, ಪಾರ್ಟಿ ಹಾಲ್ಗಳಲ್ಲಿ ಕ್ಯಾಶ್ ಬಳಸಿದ್ದೀರಾ..? ನಿಮ್ಮ ಮೇಲೂ ಕಣ್ಣಿಡುತ್ತೆ ಐಟಿ ಇಲಾಖೆ..!