ಹಳಿಯಾಳ ತಾಲೂಕಿನ ಕಾವಲವಾಡ ಗ್ರಾಮದಲ್ಲಿ, ಚಾಲನಾ ತರಬೇತಿ ಇಲ್ಲದ ಚಾಲಕನೊಬ್ಬ ಇಕೋ ವ್ಯಾನ್ ಅನ್ನು ಮನೆಯ ಕಟ್ಟೆಯ ಮೇಲೆ ಹರಿಸಿದ ಪರಿಣಾಮ ಐದು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಬಾಲಕನ ಅಜ್ಜಿಗೂ ಗಂಭೀರ ಗಾಯಗಳಾಗಿದ್ದು, ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.

ಹಳಿಯಾಳ (ಜ.20) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಚಾಲಕನ ಬೇಜವಾಬ್ದಾರಿಗೆ ಐದು ವರ್ಷದ ಹಸುಗೂಸು ಬಲಿಯಾದ ದಾರುಣ ಘಟನೆ ನಡೆದಿದೆ.

ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಮಗು

ಹಳಿಯಾಳ ತಾಲೂಕಿನ ಕಾವಲವಾಡ ಗ್ರಾಮದ ಹಟ್ಟಿ ಓಣಿಯಲ್ಲಿ ಈ ಘೋರ ದುರಂತ ಸಂಭವಿಸಿದೆ. ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಐದು ವರ್ಷದ ಬಾಲಕ ಹುಜೇರ ಸಲೀಂ ಶಿಗಳ್ಳಿ ಮೇಲೆ ನಿಯಂತ್ರಣ ತಪ್ಪಿದ ಇಕೋ ವ್ಯಾನ್ (ಕೆಎ 65 ಎಂ 3351) ಅತಿವೇಗವಾಗಿ ನುಗ್ಗಿದೆ. ಡಿಕ್ಕಿಯ ತೀವ್ರತೆಗೆ ಬಾಲಕ ಹುಜೇರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪಕ್ಕದಲ್ಲಿದ್ದ ಅಜ್ಜಿಗೂ ಗಂಭೀರ ಗಾಯ

ಅಪಘಾತದ ವೇಳೆ ಬಾಲಕನ ಪಕ್ಕದಲ್ಲೇ ಇದ್ದ ಆತನ ಅಜ್ಜಿ ಆಶಾಬಿ ಗಫೂರ್ಸಾಬ್ ಮುಲ್ಲಾ (60)ಗೂ ಗಂಭೀರ ಗಾಯಗಳಾಗಿದ್ದು, ಕೈ ಮೂಳೆ ಮುರಿತವಾಗಿದೆ. ಕೂಡಲೇ ಬಾಲಕನನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಮಗನನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲುಮುಟ್ಟಿದೆ.

ತರಬೇತಿ ಇಲ್ಲದೆ ಸ್ಟೀರಿಂಗ್ ಹಿಡಿದಿದ್ದ ಚಾಲಕ!

ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಆರೋಪಿ ಗೋರೆಸಾಬ್ ವಲಿಸಾಬ್ ಉಗ್ರಾಣಿ ಎಂಬಾತನಿಗೆ ಯಾವುದೇ ಚಾಲನಾ ತರಬೇತಿ ಇರಲಿಲ್ಲ. ತರಬೇತಿ ಇಲ್ಲದಿದ್ದರೂ ಹೊಸದಾಗಿ ಖರೀದಿಸಿದ್ದ ಕಾರನ್ನು ರಸ್ತೆಗೆ ಇಳಿಸಿದ್ದ ಚಾಲಕ, ನಿಯಂತ್ರಣ ಸಿಗದೆ ನೇರವಾಗಿ ಮನೆಯ ಕಟ್ಟೆಯೊಳಗೆ ಕಾರನ್ನು ನುಗ್ಗಿಸಿದ್ದಾನೆ.

ಪೊಲೀಸ್ ವಶಕ್ಕೆ ಆರೋಪಿ

ಘಟನೆ ನಡೆದ ಬೆನ್ನಲ್ಲೇ ಹಳಿಯಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಗೋರೆಸಾಬ್‌ನನ್ನು ಬಂಧಿಸಿದ್ದಾರೆ. ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಅವಿವೇಕದ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.