ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಎಸ್. ಬಿಂಗೀಪುರ ಕೆರೆಯ ಬಳಿಯ ಸ್ಕ್ರಾಪ್ ಶೆಡ್‌ಗಳಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇತ್ತೀಚೆಗೆ ಶಂಕಿತ ಬಾಂಗ್ಲಾ ವಲಸಿಗರ ವಾಸಸ್ಥಳವೆಂದು ವಿವಾದಕ್ಕೆ ಕಾರಣವಾಗಿದ್ದ ಈ ಶೆಡ್‌ಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಆನೇಕಲ್ (ಜ20): ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಇಂದು ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸ್ಕ್ರಾಪ್ ಶೆಡ್‌ಗಳು ಬೆಂಕಿಗೆ ಆಹುತಿಯಾಗಿವೆ.

Add Asianetnews Kannada as a Preferred SourcegooglePreferred

ಧಗ ಧಗ ಹೊತ್ತಿ ಉರಿದ ಸ್ಕ್ರಾಪ್ ಶೆಡ್‌ಗಳು

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಎಸ್. ಬಿಂಗೀಪುರ ಕೆರೆಯ ಪಕ್ಕದಲ್ಲಿರುವ ಸ್ಕ್ರಾಪ್ ಶೆಡ್‌ಗಳಲ್ಲಿ ಇಂದು ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಇಡೀ ಪ್ರದೇಶ ಹೊಗೆಮಯವಾಗಿದೆ.

ಎಸ್ ಬಿಂಗೀಪುರ ಕೆರೆ ಸಮೀಪ ಅನಾಹುತ

ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ಎಸ್ ಬಿಂಗೀಪುರ ಕೆರೆಯ ಬಳಿಯ ಸ್ಕ್ರಾಪ್ ಶೆಡ್‌ಗಳು ಬೆಂಕಿಗಾಹುತಿಯಾಗಿವೆ. ಸ್ಕ್ರಾಪ್ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ದಹನಕಾರಿ ವಸ್ತುಗಳು ಇದ್ದಿದ್ದರಿಂದ ಬೆಂಕಿಯ ಕೆನ್ನಾಲಿಗೆ ಅತಿ ವೇಗವಾಗಿ ಹರಡಿದೆ. ಸ್ಥಳದಲ್ಲಿ ಧಗ ಧಗ ಉರಿಯುತ್ತಿರುವ ಬೆಂಕಿಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡರು.

ಬಾಂಗ್ಲಾ ವಲಸಿಗರು ವಾಸವಿದ್ದ ಶೆಡ್‌ಗಳು

ಈ ಸ್ಕ್ರಾಪ್ ಶೆಡ್‌ಗಳು ಇತ್ತೀಚೆಗೆ ಸುದ್ದಿಯಾಗಿದ್ದವು. ಇಲ್ಲಿ ಶಂಕಿತ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸುಮಾರು ಒಂದು ವಾರದ ಹಿಂದೆಯಷ್ಟೇ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಈ ಸ್ಥಳಕ್ಕೆ ಭೇಟಿ ನೀಡಿ ಶೆಡ್‌ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಈ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಇಲ್ಲಿ ನೆಲೆಸಿದ್ದ ಶಂಕಿತ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದಿದ್ದರು.

ಮುಗಿಲೆತ್ತರಕ್ಕೆ ಎದ್ದ ದಟ್ಟ ಹೊಗೆ

ಇಂದು ಸಂಜೆ ದಿಢೀರನೆ ಸ್ಕ್ರಾಪ್ ತುಂಬಿದ ಶೆಡ್‌ಗಳಿಗೆ ಬೆಂಕಿ ಬಿದ್ದಿದ್ದು, ಕಪ್ಪು ದಟ್ಟ ಹೊಗೆ ಆಗಸದ ಎತ್ತರಕ್ಕೆ ಚಾಚಿದೆ. ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲಿನ ಕಿಲೋಮೀಟರ್‌ಗಳವರೆಗೆ ದಟ್ಟ ಹೊಗೆ ಆವರಿಸಿ ಸುತ್ತಮುತ್ತಲಿ ಪ್ರದೇಶದಲ್ಲಿ ಉಸಿರುಗಟ್ಟುವ ರೀತಿ ಹೊಗೆ ಆವರಿಸಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಕ್ರಾಪ್ ವಸ್ತುಗಳು ಹೆಚ್ಚಾಗಿರುವುದರಿಂದ ಬೆಂಕಿ ಹತೋಟಿಗೆ ತರುವುದು ಸವಾಲಾಗಿ ಪರಿಣಮಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ಬೇರೆಡೆ ಹರಡದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ.