ವಿಜಯಪುರ ನಗರದ ಲಲಿತ ಮಹಲ್ ಹೋಟೆಲ್ ಬಳಿ ಐದು ಖಾಸಗಿ ಬಸ್‌ಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬಸ್ ನಿಂತಿದ್ದ ಬಸ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.

ವಿಜಯಪುರ (ಜ.20): ವಿಜಯಪುರ ಪಟ್ಟಣದಲ್ಲಿ ಇಂದು ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಹಲವಾರು ಗಾಯಗೊಂಡಿದ್ದು, ರಸ್ತೆಯಲ್ಲಿದ್ದ ಪ್ರಯಾಣಿಕರು ಹಾಗೂ ಸ್ಥಳೀಯರು ಆತಂಕಗೊಂಡ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಲಲಿತ ಮಹಲ್ ಹೋಟೆಲ್ ಎದುರು ಅನಾಹುತ

ವಿಜಯಪುರ ನಗರದ ಲಲಿತ ಮಹಲ್ ಹೋಟೆಲ್ ಎದುರು ಈ ಅಪಘಾತ ಸಂಭವಿಸಿದೆ. ವಿಜಯಪುರದಿಂದ ಮುಂಬೈಗೆ ಸಂಚರಿಸಲು ಸಿದ್ಧವಾಗಿ ನಿಂತಿದ್ದ ಸಾಲು ಸಾಲು ಖಾಸಗಿ ಬಸ್‌ಗಳ ನಡುವೆ ಈ ಡಿಕ್ಕಿ ನಡೆದಿದೆ.

ಐದು ಬಸ್‌ಗಳ ನಡುವೆ ಸರಣಿ ಡಿಕ್ಕಿ

ಬೆಂಗಳೂರು ಹಾಗೂ ಮುಂಬೈಗೆ ಪ್ರಯಾಣಿಕರನ್ನು ಹೊತ್ತೊಯ್ಯಲು ರಸ್ತೆ ಬದಿಯಲ್ಲಿ ನಾಲ್ಕು ಖಾಸಗಿ ಬಸ್‌ಗಳು ಸಾಲಾಗಿ ನಿಂತಿದ್ದವು. ಈ ವೇಳೆ ಅತಿ ವೇಗವಾಗಿ ಬಂದ ಮತ್ತೊಂದು ಖಾಸಗಿ ಬಸ್, ನಿಂತಿದ್ದ ಬಸ್‌ಗಳಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮುಂಭಾಗದಲ್ಲಿದ್ದ ನಾಲ್ಕೂ ಬಸ್‌ಗಳು ಒಂದಕ್ಕೊಂದು ಡಿಕ್ಕಿಯಾಗಿ ಜಖಂಗೊಂಡಿವೆ.

ಚಾಲಕನಿಗೆ ಗಂಭೀರ ಗಾಯ

ಈ ಘಟನೆಯಲ್ಲಿ ಓರ್ವ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಗಾಯಾಳು ಚಾಲಕನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರಾಫಿಕ್ ಜಾಮ್ ನಿವಾರಣೆಗೆ ಪೊಲೀಸರ ಹರಸಾಹಸ

ಅಪಘಾತದಿಂದಾಗಿ ವಿಜಯಪುರದ ಈ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಯ ಮಧ್ಯೆ ಸಿಲುಕಿದ್ದ ಬಸ್‌ಗಳನ್ನು ತೆರವುಗೊಳಿಸಿ, ಕಿಲೋಮೀಟರ್‌ಗಟ್ಟಲೆ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿವಾರಿಸಲು ಪೊಲೀಸರು ಹರಸಾಹಸ ಪಟ್ಟರು.