Asianet Suvarna News Asianet Suvarna News

ಅಪರಿಚಿತ ವಾಹನ ಡಿಕ್ಕಿ: ಪತ್ನಿ ಸಾವು, ಪತಿ ಗಂಭೀರ

  • ಅಪರಿಚಿತ ವಾಹನ ಡಿಕ್ಕಿ: ಪತ್ನಿ ಸಾವು, ಪತಿ ಗಂಭೀರ
  • ಸಿನಿಮಾ ನೋಡಿಕೊಂಡು ರಾತ್ರಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ದಂಪತಿ
  • ಬಾಣಸವಾಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ.
Unidentified vehicle collision wife killed, husband seriously in bengaluru
Author
Bengaluru, First Published Aug 22, 2022, 9:45 AM IST

 ಬೆಂಗಳೂರು (ಆ.22) : ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಮೃತಪಟ್ಟು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಾಳ ನಿವಾಸಿ ಶ್ವೇತಾ (23) ಮೃತ ದುರ್ದೈವಿ. ಆಕೆಯ ಪತಿ ಆನಂದ್‌ (30) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ತಡರಾತ್ರಿ 12.50ರ ಸುಮಾರಿಗೆ ಹೆಣ್ಣೂರು ಅಂಡರ್‌ ಪಾಸ್‌ ಬಳಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ಯುವತಿಗೆ ಲೈಂಗಿಕ ಶೋಷಣೆ: ಲಾಡ್ಜ್‌ನಲ್ಲಿ ದಂಧೆ

ಆನಂದ್‌(Anand)ಹಾಗೂ ಶ್ವೇತಾ(Shwetha)  ರಾತ್ರಿ ಸಿನಿಮಾ(Cinema)ನೋಡಿಕೊಂಡು ದ್ವಿಚಕ್ರ ವಾಹನದಲ್ಲಿ ರಾಮಮೂರ್ತಿನಗರ ಕಡೆಯಿಂದ ಹೆಬ್ಬಾಳದ ಕಡೆಗೆ ಬರುತ್ತಿದ್ದರು. ಹೊರವರ್ತುಲ ರಸ್ತೆಯ ಹೆಣ್ಣೂರು ಅಂಡರ್‌ ಪಾಸ್‌ ಬಳಿ ಬರುವಾಗ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದೇ ಸಮಯಕ್ಕೆ ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಿದ್ದ ಲಾರಿಗೆ ದ್ವಿಚಕ್ರ ವಾಹನ ರಭಸವಾಗಿ ಗುದ್ದಿ ದಂಪತಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಹಿಂಬಂದಿ ಕುಳಿತಿದ್ದ ಶ್ವೇತಾ ತಲೆ ಹಾಗೂ ಕೈ-ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಆನಂದ್‌ಗೂ ಸಹ ಗಂಭೀರ ಪೆಟ್ಟು ಬಿದ್ದಿದೆ. ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಶ್ವೇತಾ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಡ್ಯಾನ್ಸರ್ ತುಂಗಭದ್ರಾ ಹೊಳೆಯಲ್ಲಿ ಮುಳುಗಿ ಸಾವು

ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಅಪರಿಚಿತ ವಾಹನ ಚಾಲಕ ಘಟನೆ ಬಳಿಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಲಾರಿ ನಿಲುಗಡೆ ಮಾಡಿದ್ದ ಲಾರಿ ಚಾಲಕ ಸಹ ಘಟನೆ ಬಳಿಕ ತಲೆಮರೆಸಿಕೊಂಡಿದ್ದಾನೆ. ತಲೆಮರೆಸಿಕೊಂಡಿರುವ ಚಾಲಕರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬಾಣಸವಾಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಿಕೆ ಮಾಜಿ ವಿಪಕ್ಷ ನಾಯಕನ ಪುತ್ರನಿಂದ ಆ್ಯಕ್ಸಿಡೆಂಟ್‌

ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್‌ ವಾಜೀದ್‌ ಪುತ್ರ ವೇಗವಾಗಿ ಚಲಾಯಿಸಿದ ಕಾರು ನಿಯಂತ್ರಣ ತಪ್ಪಿ ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಹೈಗ್ರೌಂಡ್‌್ಸ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಯನಗರದ ಯಶ್‌ ಗೌಡ(28) ಮತ್ತು ನಿಖಿತಾ(21) ಗಾಯಗೊಂಡ ದ್ವಿಚಕ್ರ ವಾಹನ ಸವಾರರು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಯಶ್‌ಗೌಡ ಹಾಗೂ ನಿಖಿತಾ ಸ್ನೇಹಿತರಾಗಿದ್ದು, ಈ ಇಬ್ಬರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೋರಾಯನಪಾಳ್ಯ ನಿವಾಸಿ ಜಾಹೀದ್‌ ವಾಜೀದ್‌(24) ಅಪಘಾತ ಎಸಗಿದ ಕಾರು ಚಾಲಕ. ಭಾನುವಾರ ಮಧ್ಯಾಹ್ನ 1.15ರ ಸಮಾರಿಗೆ ಅಲಿ ಅಸ್ಕರ್‌ ರಸ್ತೆಯ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ಜಖಂಗೊಂಡಿದ್ದು, ಎರಡೂ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಘಟನೆ ಸಂಬಂಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ಪೋಷಕರೊಂದಿಗೆ ಚರ್ಚಿಸಿ ದೂರು ನೀಡುವುದಾಗಿ ಗಾಯಾಳುಗಳು ಹೇಳಿದ್ದಾರೆ. ಗಾಯಾಳುಗಳ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೈಗ್ರೌಂಡ್‌್ಸ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios