ಮಾನವ ಹಕ್ಕು ಸಂಘಟನೆಯೊಂದರ ಮುಖ್ಯಸ್ಥೆ ಸೇರಿದಂತೆ ಮೂವರನ್ನು ಬಂಧಿಸಿದ ಹೈಗ್ರೌಂಡ್ಸ್‌ ಠಾಣೆ ಪೊಲೀಸರು 

ಬೆಂಗಳೂರು(ಆ.21):  ಕೆಲಸ ಕೊಡಿಸುವುದಾಗಿ ನಂಬಿಸಿ ಬಳಿಕ ಅಕ್ರಮ ಬಂಧನದಲ್ಲಿಟ್ಟು ಯುವತಿಯೊಬ್ಬಳನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇರೆಗೆ ಮಾನವ ಹಕ್ಕು ಸಂಘಟನೆಯೊಂದರ ಮುಖ್ಯಸ್ಥೆ ಸೇರಿದಂತೆ ಮೂವರನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿ ನಗರದ ಎಸ್‌.ಮಂಜುಳಾ ಅಲಿಯಾಸ್‌ ಸಂಗೀತಾ ಪ್ರಿಯಾ, ಆಕೆಯ ಸಹಚರ ಬ್ರಹ್ಮೇಂದ್ರ ಹಾಗೂ ಲಾಡ್ಜ್‌ ಮಾಲಿಕ ಸಂತೋಷ ಬಂಧಿತರಾಗಿದ್ದು, ಇತ್ತೀಚೆಗೆ ಮಂಡ್ಯ ಜಿಲ್ಲೆಯ 20 ವರ್ಷದ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು ಆರೋಪಿರು ಶೋಷಿಸಿದ್ದರು. ನಗರದ ಶಿವಾನಂದ ಸರ್ಕಲ್‌ ಸಮೀಪದ ಲಾಡ್ಜ್‌ನಲ್ಲಿ ಅಕ್ರಮ ಬಂಧನಲ್ಲಿಟ್ಟಿದ್ದ ಯುವತಿ, ಕೊನೆಗೆ ತನ್ನ ಸ್ನೇಹಿತನನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಳು. ಕೂಡಲೇ ಪೊಲೀಸರಿಗೆ ಆತ ವಿಷಯ ತಿಳಿಸಿದ ಮೇರೆಗೆ ಲಾಡ್ಜ್‌ ಮೇಲೆ ದಾಳಿ ನಡೆಸಿ ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದ್ಯಾರ್ಥಿನಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ: ವಾಟ್ಸಾಪ್‌ ಮೂಲಕ ಅಶ್ಲೀಲ ಮೆಸೇಜ್‌ ಕಳಿಸಿದ ಕಾಮುಕ

ರಾಜಾಜಿ ನಗರದ ಮಂಜುಳಾ, ತನ್ನನ್ನು ಮಾನವ ಹಕ್ಕು ಹೋರಾಟ ಹಾಗೂ ಸಾಮಾಜಿಕ ಕಾರ್ಯಕರ್ತೆ ಎನ್ನುವಂತೆ ಬಿಂಬಿಸಿಕೊಂಡಿದ್ದಳು. ರಾಜಾಜಿ ನಗರದಲ್ಲಿ ನವ ಭಾರತ ಎಂಬ ಹೆಸರಿನಲ್ಲಿ ಮಾನವ ಹಕ್ಕು ರಕ್ಷಣೆ ಸಂಘಟನೆಯನ್ನು ಸಹ ಆಕೆ ಸ್ಥಾಪಿಸಿದ್ದಳು. ಕೆಲ ದಿನಗಳ ಹಿಂದೆ ಆಕೆಗೆ ಸಂತ್ರಸ್ತೆ ಪರಿಚಯವಾಗಿದೆ. ಆಗ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಕೃತ್ಯಕ್ಕೆ ಆಕೆಯನ್ನು ಮಂಜುಳಾ ಬಳಸಿಕೊಂಡಿದ್ದಳು. ಈ ದಂಧೆಗೆ ಆಕೆಯ ಸಹಚರ ಬ್ರಹ್ಮೇಂದ್ರ ಹಾಗೂ ಲಾಡ್ಜ್‌ ಮಾಲಿಕ ಸಂತೋಷ್‌ ನೆರವು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.