ಕೆ.ಜಿ.ಶ್ರೀನಿವಾಸಪುರದ ದೇವಾಲಯದ ಹುಡಿಯಲ್ಲಿದ್ದ 75 ಸಾವಿರ ಲೂಟಿ| ಶ್ರೀ ಸಿದ್ದೇಶ್ವರ ದೇವಾಲಯ ಹಾಗೂ ಶ್ರೀ ವೀರಭದ್ರೇಶ್ವರ ದೇವಾಲಯಗಳ ಹುಂಡಿ ಒಡೆದು ಹುಂಡಿಯಲ್ಲಿದ್ದ ಹಣ ದೋಚಿದ ಕಳ್ಳರು|

ದಾಬಸ್‌ಪೇಟೆ(ಜು.13): ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಸೋಂಪುರ ಹೋಬಳಿಯ ನರಸೀಪುರ ಗ್ರಾ.ಪಂ.ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀ ದೇವಾಲಯದಲ್ಲಿ ಏಳು ತಾಳಿಗಳನ್ನು ಕಳ್ಳರು ಕದ್ದುಕೊಂಡು ಹೋಗಿರುವ ಬೆನ್ನಲ್ಲೇ ಹೋಬಳಿಯ ಬೇರೆ ಎರಡು ದೇವಾಲಯಗಳಲ್ಲಿ ಕಳ್ಳತನ ನಡೆದಿದ್ದು ಹೋಬಳಿಯ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕೆ.ಜಿ.ಶ್ರೀನಿವಾಸಪುರ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ದೇವಾಲಯ ಹಾಗೂ ಶ್ರೀ ವೀರಭದ್ರೇಶ್ವರ ದೇವಾಲಯಗಳ ಹುಂಡಿ ಒಡೆದು ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಡವಾಗಿ ಬೆಳಕಿಗೆ ಬಂದ ಪ್ರಕರಣ

ಅರ್ಚಕ ಸೋಮಶೇಖರ್‌ ಶುಕ್ರವಾರದಂದು ದೇವರಿಗೆ ಪೂಜೆ ಸಲ್ಲಿಸಿ ದೇವಾಲಯದ ಬೀಗವನ್ನು ಹಾಕಿಕೊಂಡು ಹೋಗಿದ್ದಾರೆ. ಅಂದೇ ರಾತ್ರಿ ದುಷ್ಕರ್ಮಿಗಳು ಎರಡು ದೇವಾಲಯಗಳ ಬಾಗಿಲನ್ನು ಕಬ್ಬಿಣದ ರಾಡು ಹಾಗೂ ತ್ರಿಶೂಲದಿಂದ ಮೀಟಿ ದೇವಾಲಯಗಳ ಒಳಗೆ ಇದ್ದು ಹುಂಡಿಯಲ್ಲಿದ್ದ ಸುಮಾರು 75 ಸಾವಿರ ರೂಗಳನ್ನು ದೋಚಿದ್ದಾರೆ. ಎರಡು ದೇವಾಲಯಗಳು ಪಕ್ಕ ಪಕ್ಕನೇ ಇದ್ದು, ಈ ದೇವಾಲಯಗಳ ಊರಿನ ಹೊರಭಾಗದಲ್ಲಿರುವುದರಿಂದ ಕಳ್ಳತನವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಳ್ಳನಿಗೆ ಅಂಟಿದ ಕೊರೋನಾ: ಪೊಲೀಸರಿಗೆ ಭೀತಿ

ಹೋಬಳಿಯಲ್ಲಿ ಇತ್ತೀಚಿಗೆ ದೇವಾಲಯಗಳು ಸೇರಿದಂತೆ ಹಸು, ಮೇಕೆ, ಕುರಿಗಳ ಕಳ್ಳತನವಾಗುತ್ತಿದ್ದು ಪೊಲೀಸ್‌ ಇಲಾಖೆ ರಾತ್ರಿ ಸಮಯದಲ್ಲಿ ಬೀಟ್‌ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.