Shivamogga Savarkar row and assault case: ಮೊಹಮ್ಮದ್ ಜಬೀವುಲ್ಲ ಅಲಿಯಾಸ್ ಚರ್ಬಿ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧನ ವೇಳೆ ಸ್ಥಳದಿಂದ ಕಾಲ್ಕಿತ್ತಿದ್ದ ಜಬೀವುಲ್ಲ ಅವರ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.  

ಶಿವಮೊಗ್ಗ(ಆ.16):  ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧಿಸಿ ಓರ್ವನ ಮೇಲೆ ಪೋಲಿಸರು ಫೈರಿಂಗ್ (Police fires at Shivamogga assault case accused) ನಡೆಸಿದ ಘಟನೆ ಇಂದು ಬೆಳಗಿನ ಜಾವ 4.30ರ ಸುಮಾರಿಗೆ ನಡೆದಿದೆ. ಮೊಹಮ್ಮದ್ ಜಬೀವುಲ್ಲ ಅಲಿಯಾಸ್ ಚರ್ಬಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಜೆ.ಸಿ. ನಗರದ ನದೀಮ್ (25), ಬುದ್ದನಗರದ ಅಬ್ದುಲ್ ರೆಹಮಾನ್ (25) ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಒಟ್ಟು ನಾಲ್ವರು ಭಾಗಿಯಾಗಿದ್ದು ಮೂವರ ಬಂಧನವಾಗಿದೆ. ಓರ್ವ ನಾಪತ್ತೆಯಾಗಿದ್ದಾನೆ. 

Add Asianetnews Kannada as a Preferred SourcegooglePreferred

ಕಸ್ತೂರ್‌ ಬಾ ರಸ್ತೆಯಲ್ಲಿರುವ ನಂದಿ ಸಿಲ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್‌ ಸಿಂಗ್‌ (20) ಗೆ ಚಾಕುವಿನಿಂದ ಇರಿಯಲಾಗಿತ್ತು. ಗಾಂಧಿ ಬಜಾರ್‌ನ ತರಕಾರಿ ಮಾರುಕಟ್ಟೆಯ ಹತ್ತಿರ ಮನೆಯ ಕಡೆ ಹೋಗುತ್ತಿದ್ದ ವೇಳೆಪ್ರೇಮ್‌ ಸಿಂಗ್‌ಗೆ ಚಾಕುವಿನಿಂದ ಇರಿಯಲಾಗಿತ್ತು. ಶಿವಮೊಗ್ಗದ ದೊಡ್ಡ ಪೇಟೆ ಪೋಲಿಸ್ ಠಾಣೆಯಲ್ಲಿ ಕಲಂ 307 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. 

ಇದನ್ನೂ ಓದಿ: ಟಿಪ್ಪು VS ಸಾವರ್ಕರ್‌ ಫೋಟೋ ವಾರ್: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ

ಶಿವಮೊಗ್ಗದಲ್ಲಿ ಮತ್ತೆ ಫೋಟೋ ಗಲಾಟೆ, ಲಾಠಿ ಚಾರ್ಜ್, 144 ಸೆಕ್ಷನ್ ಜಾರಿ

ಶಿವಮೊಗ್ಗ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ರಾಷ್ಟ್ರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದ್ರೆ, ಶಿವಮೊಗ್ಗದಲ್ಲಿ ಅಮೃತ ಮಹೋತ್ಸವದ ಆಚರಣೆ ವೇಳೆ ಸಾವರ್ಕರ್ ಭಾವಚಿತ್ರ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ವೀರ ಸಾವರ್ಕರ್ ಫೋಟೋ ಅಳವಡಿಕೆ ವಿವಾದ ತಾರಕ್ಕೇರುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ 144 ಜಾರಿಗೊಳಿಸಲಾಗಿದೆ.

ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದಾರೆ. ಇದಕ್ಕೆ ವಿರೋಧವಾಗಿ ಮುಸ್ಲಿಂ ಸಮುದಾಯದವರು ಟಿಪ್ಪು ಭಾವಚಿತ್ರ ಹಾಕಿದ್ದಾರೆ. ಅಲ್ಲದೇ ಹಿಂದೂ ಸಂಘಟನೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಪರಸ್ಪರ ಪರ-ವಿರೋಧದ ಘೋಷಣೆ ಕೂಗಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿದರು.
ಅಮೃತ ಮಹೋತ್ಸವ ಅಂಗವಾಗಿ ಮೊನ್ನೇ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿತ್ತು. ಈ ಪ್ರದರ್ಶ ವೇಳೆ ವೀರ ಸಾವರ್ಕರ್ ಫೋಟೋವನ್ನು ಸಹ ಇಡಿಸಲಾಗಿತ್ತು. ಆದ್ರೆ, ಇದಕ್ಕೆ ಮುಸ್ಲಿಂ ಮುಖಂಡನೊಬ್ಬ ವಿರೋಧಿಸಿ ಸಾರ್ವಕರ್ ಫೋಟೋ ತೆಗೆಸಿದ್ದರು. 

ಇದನ್ನೂ ಓದಿ: ಮಂಗಳೂರಿನಲ್ಲೂ ವೀರ ಸಾವರ್ಕರ್ ಪೋಟೋ ಗಲಾಟೆ, ಮಧ್ಯೆ ಪ್ರವೇಶಿಸಿದ ಪೊಲೀಸ್ರು

ಶಿವಮೊಗ್ಗದ ಶಿವಪ್ಪನಾಯಕ ಮಾಲ್‍ನಲ್ಲಿ ಗೊಂದಲ ಏರ್ಪಟ್ಟಿತ್ತು. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು, ಭಗತ್ ಸಿಂಗ್, ಸರ್ದಾರ್ ವಲ್ಲಭಬಾಯ್ ಪಟೇಲ್, ಚಂದ್ರಶೇಖರ್ ಆಜಾದ್, ಅಂಬೇಡ್ಕರ್, ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್ ಭಾವಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಮಾಲ್‍ನಲ್ಲಿ ಛಾಯಾಚಿತ್ರ ಪ್ರದರ್ಶನ ಗಮನಿಸಿದ ಎಸ್‍ಡಿಪಿಐ ಕಾರ್ಯಕರ್ತರು ರೊಚ್ಚಿಗೆದ್ದು, ಫೋಟೋ ತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಹಾಕುವಂತೆ ಆಗ್ರಹಿಸಿದ್ದರು. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಎಸ್‍ಡಿಪಿಐ ಕಾರ್ಯಕರ್ತರ ವಿರುದ್ದ ಪ್ರತಿಭಟನೆ ನಡೆಸಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಎಸ್‍ಡಿಪಿಐ ಕಾರ್ಯಕರ್ತರು ಅವಮಾನ ಮಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಬಳಿಕ ಎಚ್ಚೆತ್ತ ಮಾಲ್ ಸಿಬ್ಬಂದಿ ವೀರ ಸಾವರ್ಕರ್ ಭಾವಚಿತ್ರ ಮತ್ತೆ ಹಾಕುವುದರ ಜೊತೆಗೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಅಳವಡಿಸಿದರು. ಅಲ್ಲದೇ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಕೆಲವು ಮುಸ್ಲಿಂ ಯುವಕರ ವಿರುದ್ದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಭಾವಚಿತ್ರದ ಗೊಂದಲ ಕೆಲಕಾಲ ಅಮೃತ ಮಹೋತ್ಸವದ ಸಂಭ್ರಮಕ್ಕೆ ಅಡ್ಡಿಯಾಗಿತ್ತು.

ಕುವೆಂಪು ವಿವಿಗೆ ರಜೆ ಘೋಷಣೆ

ಚಾಕು ಇರಿತ ಪ್ರಕರಣ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಕುವೆಂಪು ವಿವಿಗೂ ರಜೆ ಘೋಷಿಸಿ ಕುಲಪತಿ ಪ್ರೊ.ನವೀನ್​ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಇಂದು(ಮಂಗಳವಾರ) ನಡೆಯಬೇಕಿದ್ದ ಕುವೆಂಪು ವಿವಿಯ ಪರೀಕ್ಷೆಗಳು ಮುಂದೂಡಲಾಗಿದೆ ಅಂತ ಕುಲಸಚಿವ ಪ್ರೊ.ನವೀನ್​ ಕುಮಾರ್ ಹೇಳಿದ್ದಾರೆ.