Asianet Suvarna News Asianet Suvarna News

Udupi: ಫುಡ್ ಡೆಲಿವರಿ ಜೊತೆ ಗಾಂಜಾ ಡೆಲಿವರಿಗೂ ಸೈ, ಮೂವರು ಡೆಲಿವರಿ ಬಾಯ್ಸ್ ವಶಕ್ಕೆ!

ಫುಡ್ ಡೆಲಿವರಿ ಹುಡುಗರ ಮೂಲಕ ಗಾಂಜಾ ಸರಬರಾಜು ಮಾಡುತ್ತಿದ್ದ ತಂಡವನ್ನು ಉಡುಪಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ನೂರಕ್ಕೂ ಅಧಿಕ ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಡ್ರಗ್ಸ್ ಸೇವನೆ ಪ್ರಕರಣಗಳು ಪತ್ತೆಯಾಗಿವೆ.

three food delivery boys were arrested for delivering ganja gow
Author
First Published Sep 19, 2022, 4:42 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.19): ಫುಡ್ ಡೆಲಿವರಿ ಹುಡುಗರ ಮೂಲಕ ಗಾಂಜಾ ಸರಬರಾಜು ಮಾಡುತ್ತಿದ್ದ ತಂಡವನ್ನು ಉಡುಪಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ನೂರಕ್ಕೂ ಅಧಿಕ ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಡ್ರಗ್ಸ್ ಸೇವನೆ ಪ್ರಕರಣಗಳು ಪತ್ತೆಯಾಗಿವೆ. ದೇವಾಲಯಗಳ ನಗರಿ ಎಂದು ಕರೆಸಿಕೊಳ್ಳುವ ಉಡುಪಿ ಜಿಲ್ಲೆಯ, ಈ ಕರಾಳ ಮುಖ ಜನತೆಯನ್ನು ಬೆಚ್ಚಿ ಬೀಳಿಸಿದೆ! ಡ್ರಗ್ ಪೆಡ್ಲರ್ ಗಳಿಗೆ ಮತ್ತು ಗ್ರಾಹಕರಿಗೆ ಗಾಂಜಾ ಸರಬರಾಜು ಮಾಡಲು, ಫುಡ್ ಡೆಲಿವರಿ ಹುಡುಗರನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಉಡುಪಿ ನಗರದ ಇಂದ್ರಾಳಿಯಿಂದ ಮಂಚಿ ಕಡೆಗೆ ಹೋಗುವ ರಸ್ತೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಕೇರಳದ ಪಾಲಕ್ಕಾಡಿನಿಂದ ರೈಲ್ ನಲ್ಲಿ ಗಾಂಜಾ ಸರಬರಾಜು ಆಗುತ್ತಿದ್ದು, ಉಡುಪಿ ನಗರದಲ್ಲಿ ಗಾಂಜಾ ಸೇವಿಸುವವರಿಗೆ ಈ ಡೆಲಿವರಿ ಹುಡುಗರ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಸದ್ಯ ಫುಡ್ ಡೆಲಿವರಿ ಬ್ಯಾಗನಲ್ಲಿ ಗಾಂಜಾ ಇಟ್ಟುಕೊಂಡು ಗಿರಾಕಿಗಳು ಹಾಗೂ ಪೆಡ್ಲರ್ ಗಳಿಗಾಗಿ ಕಾಯುತ್ತಿದ್ದ ಮೂವರನ್ನು ಉಡುಪಿ ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾ ನಗರಿ ಎಂದು ಕರೆಸಿಕೊಳ್ಳುವ ಮಣಿಪಾಲದಲ್ಲಿ, ಅತಿ ಹೆಚ್ಚು ವಿದ್ಯಾರ್ಥಿಗಳಿದ್ದು, ದೈನಂದಿನ ಆಹಾರಕ್ಕೆ ಅವರು ಫುಡ್ ಡೆಲಿವರಿ ಹುಡುಗರನ್ನೇ ಅವಲಂಬಿಸಿರುತ್ತಾರೆ. ಇದರ ಲಾಭ ಪಡೆದು, ಅವರ ಮೂಲಕವೇ ಗಾಂಜಾ ಸರಬರಾಜು ಕೂಡ ನಡೆಲಾಗುತ್ತಿತ್ತು. ಇದೀಗ ಈ ಜಾಲ ಬಯಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಣೆ ಹಾಗೂ ಡ್ರಗ್ಸ್ ಸೇವನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಕಳೆದ ಒಂದು ತಿಂಗಳಿಂದ ವಿಶೇಷ ಗಮನಹರಿಸಿದೆ. ಜಿಲ್ಲೆಯ ನೂತನ ಎಸ್ಪಿ ಆಗಿ ಅಕ್ಷಯ್ ಮಚ್ಚೀಂದ್ರ ಜಿಲ್ಲೆಗೆ ಬಂದ ಬಳಿಕ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ಭರವಸೆ ನೀಡಿದ್ದರು. ಇದೀಗ ಅವರು ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 100 ಮಂದಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಿಗಾ ಇರಿಸಲಾಗಿದೆ .

ಅಗಸ್ಟ್ 20 ರಂದು ಒಂದೇ ದಿನ 11 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಗಸ್ಟ್ 21ರಂದು ಬೈಂದೂರಿನಲ್ಲಿ 6 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಆಗಸ್ಟ್ 22ರಂದು ಕಾಪು ತಾಲೂಕು ಹಾಗೂ ಮಣಿಪಾಲದ ವಿವಿಧಡೆ ಕಾರ್ಯಚರಣೆ ನಡೆಸಲಾಗಿತ್ತು.

22ರಂದು ಬೆಳಪು ಗ್ರಾಮದ ಪಣಿಯೂರು, ಉಳಿಯಾರಗೋಳಿ ಗ್ರಾಮದ ಪೊಲಿಪು ಜಂಕ್ಷನ್, ಮಣಿಪಾಲದ ಆರ್‌ಟಿಓ ಕಚೇರಿ ರಸ್ತೆ, ಕಾಯಿನ್‌ ಸರ್ಕಲ್‌, ಮಣಿಪಾಲ ಪೆರಂಪಳ್ಳಿ ರಸ್ತೆ, ಕಾಪು ತಾಲ್ಲೂಕು ನಡ್ಸಾಲು ಗ್ರಾಮದ ಕಂಚಿನಡ್ಕ ಸುಬ್ಬಪ್ಪನ ಕಾಡು, ಬ್ರಹ್ಮಾವರ ತಾಲ್ಲೂಕಿನ ಮಣೂರು ಬಳಿ ಗಾಂಜಾ ಸೇವನೆ ಮಾಡಿದವರನ್ನು ವಶಕ್ಕೆ ಪಡೆಯಲಾಗಿತ್ತು.

23ರಂದು 92ನೇ ಹೇರೂರು, ಮಣಿಪಾಲದ ಶೀಂಬ್ರಾ ಪ್ರಗತಿ ನಗರ, 24ರಂದು ಪೆರಂಪಳ್ಳಿ ಶೀಂಬ್ರ ಸೇತುವೆ, ಉಡುಪಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್ ಬಳಿ, ಹೆರ್ಗಾ ಗ್ರಾಮದ ಈಶ್ವರ ನಗರ, 26ರಂದು ಬೈಂದೂರಿನ ಶಿರೂರು ಸಮುದ್ರ ತೀರ, ಸೊಮೇಶ್ವರ ಬೀಚ್, ಕಾರ್ಕಳದ ಬಂಗ್ಲೆಗುಡ್ಡೆ ಪರನೀರು ಮೈದಾನ, 27ರಂದು ಉಡುಪಿಯ ಕುಕ್ಕಿಕಟ್ಟೆ, ಮಂಚಿಕೆರೆ, ಗಂಗೊಳ್ಳಿಯ ತ್ರಾಸಿ ಪ್ರವಾಸಿ ಮಂದಿರ ಬಳಿಯ ಬೀಚ್‌, 28ರಂದು ಬೈಂದೂರಿನ ಶಿರೂರು ಸಮುದ್ರ ಕಿನಾರೆ, ಹಡವಿನಕೋಣೆ ಶಾಲೆಯ ಬಳಿ, 29ರಂದು ಕಾಪು ಪಡುವಿನ ಬಂಗ್ಲೆಗುಡ್ಡೆ, 30ರಂದು ತ್ರಾಸಿ ಬೀಚ್‌, ಉಡುಪಿಯ ಕಡಿಯಾಳಿ ದೇವಸ್ಥಾನ ಸಮೀಪ, ಕಾಪುವಿನ ಬಡಾ, ನಾಡ್ಸಾಲು ಕಂಚಿನಡ್ಕ ಸಮೀಪ ಕಾರ್ಯಾಚರಣೆ ನಡೆಸಲಾಗಿತ್ತು.

ಸೆ.7ರಂದು ತ್ರಾಸಿ ಪ್ರವಾಸಿ ಮಂದಿರ, ಬೀಚ್‌ನ ಪಾರ್ಕ್, 8ರಂದು ಕಾರ್ಕಳದ ನಿಟ್ಟೆ ಗರಡಿ, ಕುಂದಾಪುರದ ಫೇರಿ ರಸ್ತೆ, ಬೈಂದೂರಿನ ಶಿರೂರು ಮಾರುಕಟ್ಟೆ, 9ರಂದು ಸಾಲಿಗ್ರಾಮ ಬಸ್ ನಿಲ್ದಾಣ, ಪೆರಂಪಳ್ಳಿ, ಹೆಜಮಾಡಿ ಕೋಡಿ, ಹಿರಿಯಡ್ಕ ಬಸ್ ನಿಲ್ದಾಣ, 52ನೇ ಹೇರೂರು ಗ್ರಾಮದ ಕೆ.ಇ.ಬಿ ಕ್ವಾಟ್ರಸ್‌, ಉಪ್ಪೂರು ಗ್ರಾಮದ ಕೊಳಲಗಿರಿ, ತೆಂಕನಿಡಿಯೂರಿನ ಗರಡಿಮಜಲು, 10ರಂದು ಕಾರ್ಕಳ ಸಾಲ್ಮರ ಗ್ಯಾಲಕ್ಸಿ ಹಾಲ್, 12ರಂದು ವಾರಂಬಳ್ಳಿ, ನೀಲಾವರ ಚರ್ಚ್‌, ನೀಲಾವರ ಜಂಕ್ಷನ್‌, 13ರಂದು ಆತ್ರಾಡಿ ಗ್ರಾಮದ ಶ್ರೀನಿಧಿ ಬಾರ್, ಬೈಂದೂರಿನ ಶಿರೂರು ಮಾರ್ಕೆಟ್ ಬಳಿ ಕಾರ್ಯಾಚರಣೆ ನಡೆಸಲಾಗಿತ್ತು.

14ರಂದು ಗುಡ್ಡೆಯಂಗಡಿ ಪೂಪಾಡಿಕಲ್ಲು ಬಸ್ ನಿಲ್ದಾಣ, ಮಣಿಪುರ ಸೇತುವೆ ಬಳಿ, 15ರಂದು ತ್ರಾಸಿ ಬೀಚ್‌, ಕುಂದಾಪುರ ತಾಲ್ಲೂಕಿನ ಕಂದಾವರ ಗ್ರಾಮದ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದ ಬಳಿ, ಮೂಡ್ಲಕಟ್ಟೆ ಕಾಲೇಜು, ಹೂಡೆ ಜಂಕ್ಷನ್ ಬಳಿ ಗಾಂಜಾ ಸೇವಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮದ್ರಸಾ, ಆಲಿಘರ್‌ ಮುಸ್ಲಿಂ ವಿವಿ ಸ್ಫೋಟಿಸಲು ಕರೆ: Yati Narsinghanand ವಿರುದ್ಧ ಕೇಸ್‌

ಹೀಗೆ ಪ್ರತಿ ದಿನ ಜಿಲ್ಲೆಯ ಆಯಕಟ್ಟಿನ ಸ್ಥಳಗಳು, ಪ್ರವಾಸಿ ತಾಣಗಳು, ಬೀಚ್, ಪ್ರವಾಸಿ ಮಂದಿರಗಳು ವಿವಿಧಡೆ ದಾಳಿ ನಡೆಸಲಾಗಿದೆ. ಗಾಂಜಾ ಪೂರೈಕೆ ಮತ್ತು ಮಾರಾಟ ಹಾಗೂ ಸೇವನೆಯನ್ನು ತಡೆಯಲು ಇನ್ನು ಮುಂದೆಯೂ ದಾಳಿಗಳು ಮುಂದುವರೆಯಲಿವೆ ಎಂದು ಎಸ್ ಪಿ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ ಗಾಂಜಾ ಸೇವನೆಯನ್ನೇ ತಡೆದರೆ ಸಹಜವಾಗಿ ಗಾಂಜಾ ಪೂರೈಕೆ ಹಾಗೂ ಮಾರಾಟ ನಿಲ್ಲುತ್ತೆ ಅನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಠಾಣೆಯಲ್ಲಿಯೇ ಎಣ್ಣೆ ಪಾರ್ಟಿ, ಪೊಲೀಸರ ಪುಂಡಾಟದ ವೀಡಿಯೋ ವೈರಲ್

ಜಿಲ್ಲೆಯಲ್ಲಿ ಹೊರ ರಾಜ್ಯ ಹಾಗೂ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದು ಗಾಂಜಾ ಪೂರೈಕೆ ಹಾಗೂ ಸೇವನೆಯ ಪ್ರಕರಣಗಳು ಹೆಚ್ಚಾಗುತ್ತಿದೆ. ಗಾಂಜಾ ಸೊಪ್ಪಿನಿಂದ ಹಿಡಿದು ಡಿಸೈನರ್ ಡ್ರಗ್ ಎಂದು ಕರೆಸಿಕೊಳ್ಳುವ ಎಂಡಿಎಂಎ ಮಾತ್ರೆ, ಎಲ್ ಎಸ್ ಡಿ ಸ್ಟ್ಯಾಂಪ್, ಬ್ರೌನ್ ಶುಗರ್ ಸೇವನೆ ಮಾಡಲಾಗುತ್ತಿದೆ.

Follow Us:
Download App:
  • android
  • ios