ಮೂವರು ಆರೋಪಿಗಳ ಬಂಧನ, ಇನ್ನೊಬ್ಬ ಪ್ರಮುಖ ಆರೋಪಿ ಪರಾರಿ, ಭಾಗಿಯಾದ ಇತರರ ಪತ್ತೆಗೆ ಜಾಲ ಬೀಸಿದ ಅರಣ್ಯ ಇಲಾಖೆ ಸಿಐಡಿ ತಂಡ 

ಕಲಬುರಗಿ(ನ.30): ಕಲಬುರಗಿ ರೋಜಾ ಠಾಣೆ ವ್ಯಾಪ್ತಿ ಯದುಲ್ಲಾ ಕಾಲೋನಿ ನಜಮೋದ್ದೀನ್‌ ಎಂಬುವವರ ಮನೆಯಲ್ಲಿ ಜಿಂಕೆ ಹಾಗೂ ನವಿಲು ಮಾಂಸ ಮಾರಾಟ ಮಾಡುತ್ತಿರುವ ಪ್ರಕರಣ ಪತ್ತೆಯಾಗಿದೆ. ಇವರು ಅಳಿವಿನ ಅಂಚಲ್ಲಿರುವ ಜಿಂಕೆ ಬೇಟೆಯಾಡಿ ಮಾಂಸ ಮಾರುತ್ತಿದ್ದರು. ಜೊತೆಗೇ ಭಾರತದ ರಾಷ್ಟ್ರೀಯ ಪಕ್ಷಿ ನವಿಲು ಹಿಡಿದು ತಂದು ಮಾಂಸ ಮಾರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಟರಣೆಯಲ್ಲಿ ಜಿಂಕೆ, ನವಿಲು ಬೇಟೆಗೆ ಬಳಸುತ್ತಿದ್ದ 0.22 ರೈಫಲ್‌, ಅದಕ್ಕೆ ಸಂಬಂಧಪಟ್ಟಂತಹ 113 ಕಾಡತೂಸ್‌, 0. 117 ಏರ್‌ಗನ್‌, ತುಂಡರಿಸಲ್ಪಂಟ್ಟತಂಹ ನಾಲ್ಕಕ್ಕಿಂತ ಹೆಚ್ಚು ಜಿಂಕೆ, ಜಿಂಕೆ ಮರಿಗಳ ಮಾಂಸದ ರಾಶಿ, ಮಾಂಸ ಕಡಿಯಲು ಬಳಸುತ್ತಿದ್ದ ಬತಾಯಿ, ಚಾಕು ಸಾಮಗ್ರಿ, 2 ಜೊತೆ ಗಮ್‌ ಬೂಟ್‌, 2 ಮೊಬೈಲ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಬೈಕ್‌ ಕಳ್ಳರ ಸುಳಿವು ಕೊಟ್ಟ ಜಿಪಿಎಸ್‌..!

ಸಿಐಡಿ ಅರಣ್ಯ ಘಟಕದ ಪಿಎಸ್‌ಐ ಜ್ಯೋತಿ ಜಪ್ತಿ ಮಾಡಿ ಆರೋಪಿಗಳಾದ ಸೈಯ್ಯದ್‌ ನಜಮೋದ್ದೀನ್‌, ಮೊಹ್ಮದ್‌ ಅಲ್ತಾಫ್‌, ಸಮೀ ಜುನೈದಿ ವಿರುದ್ಧ ರಾಷ್ಟ್ರೀಯ ವನ್ಯ ಜೀವಿಗಳ ಕಾಯ್ದೆ ಮತ್ತು ಆಯುಧ ನಿಯಮಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂದಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಈ ತಂಡದಲ್ಲಿದ್ದ ಇನ್ನೊಬ್ಬ ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಆತನ ಶೋಧಕ್ಕೆ ಜಾಲ ಬೀಸಲಾಗಿದೆ. ಈ ಜಿಂಕೆ, ನವಿಲು ಬೇಟೆಯಲ್ಲಿ ಭಾಗಿಯಿರುವ ಇತರೆ ಎಲ್ಲರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅರಣ್ಯ ಇಲಾಖೆ ಸಿಐಡಿ ತಂಡ ಮುಂದಾಗಿದ್ದು, ಇದಕ್ಕೆ ನಗರ ಪೊಲೀಸ್‌ ಬೆಂಬಲ ನೀಡುವುದಾಗಿ ಹೇಳಿದೆ. ಸದರಿ ಪೊಲೀಸ್‌ ಕಾರ್ಯಾಚರಣೆಯನ್ನು ನಗರ ಪೊಲೀಸ್‌ ಆಯುಕ್ತ ಡಾ. ರವಿಕುಮಾರ್‌ ಶ್ಲಾಘಿಸಿದ್ದಾರೆ.