ದರೋಡೆಯಿಂದ ಬಂದ ಹಣದಲ್ಲಿ ವೇಶ್ಯಾವಾಟಿಕೆ, ಇಸ್ಪೀಟು, ಮೋಜು ಮಸ್ತಿಗಾಗಿ ಹಣ ಖರ್ಚು ಮಾಡುತ್ತಿದ್ದ ಆರೋಪಿಗಳು 

ದಾಬಸ್‌ಪೇಟೆ(ಜು.22): ಖಾರದಪುಡಿ ಚಾಕು ಹಿಡಿದು ಜನರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ ಮೂವರು ಖರ್ತನಾಕ್‌ ಆರೋಪಿಗಳನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ದೊಡ್ಡೇರಿ ಗ್ರಾಮದ ಗಿರೀಶ್‌ (20) ವಾಟರ್‌ ಪ್ರೂರೋಪಿಂಗ್‌ ಕೆಲಸ, ಕುಲುವನಹಳ್ಳಿ ಗ್ರಾಮದ ಶರತ್‌ಕುಮಾರ್‌ (21) ರೇಸಿಫಾಮ್‌ರ್‍ನಲ್ಲಿ ಕೆಲಸ, ದೊಡ್ಡೇರಿ ಗ್ರಾಮದ ಶಶಾಂಕ್‌ (18) ಟಯೋಟ ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿಗಳಾಗಿದ್ದಾರೆ.

ಘಟನಾ ವಿವರ: 

ನೆಲಮಂಗಲ ತಾಲೂಕಿನ ಮಹಿಮಾಪುರದ ಪ್ರಸಿದ್ಧ ರಂಗನಾಥ ದೇವಸ್ಥಾನಕ್ಕೆ ಫೋಟೋ ಶೂಟ್‌ಗೆ ಬಂದಿದ್ದ ಬೆಂಗಳೂರು ಮೂಲದ ಡೇವಿಡ್‌ ಹಾಗೂ ಮಣಿ ಎಂಬ ಇಬ್ಬರು ಯುವಕರನ್ನ ಅಡ್ಡಗಟ್ಟಿ ಕುತ್ತಿಗೆಗೆ ಚಾಕು ಇಟ್ಟು, ಅವರ ಬಳಿ ಇದ್ದ ಕೆಟಿಎಂ ಡ್ಯೂಕ್‌ ಬೈಕ್‌, ಎರಡು ಮೊಬೈಲ್‌ ಫೋನ್‌, 40 ಸಾವಿರ ಬೆಲೆ ಬಾಳುವ ಕ್ಯಾಮೆರಾ ಸೇರಿದಂತೆ ನಗದು ದೋಚಿ ಪರಾರಿಯಾಗಿದ್ದರು.

Gadag News: ಅಧಿಕ ಬಡ್ಡಿ, ಸೈಟ್ ಹೆಸರಲ್ಲಿ ಜನರಿಗೆ ಕಲರ್ ಕಲರ್ ಟೋಪಿ ಹಾಕಿದ್ದ ಆರೋಪಿ ಅರೆಸ್ಟ್!

ಮಹಿಮಾಪುರದಲ್ಲಿ ಕಳ್ಳತನ ಮಾಡಿದ ನಂತರ ಕದ್ದಿದ್ದ ಕೆಟಿಎಂ ಬೈಕ್‌ನಲ್ಲಿ ತುಮಕೂರಿನ ಹೆಬ್ಬೂರು ಪೊಲೀಸ್‌ ಠಾಣಾ ವ್ಯಾಪ್ತಿಯ ನಾಗವಲ್ಲಿ ಸಮೀಪದ ಕಟ್ಟೆಗೊಲ್ಲಹಳ್ಳಿ ಗ್ರಾಮದಲ್ಲಿ ಅಂಗಡಿಯೊಂದಕ್ಕೆ ಹೋದವರು, ಅಂಗಡಿಯಲ್ಲಿ ಸಿಗರೇಟ್‌, ಕೆಲ ತಿನಿಸುಗಳನ್ನ ಖರೀದಿಸಿ ಅಂಗಡಿ ಮಹಿಳೆ ಚಿಲ್ಲರೆ ವಾಪಸ್‌ ನೀಡುವ ವೇಳೆ ಆಕೆ ಕಣ್ಣಿಗೆ ಖಾರದ ಪುಡಿ ಎರಚಿ 2 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕದ್ದು ಅಲ್ಲಿಂದ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಹೆಬ್ಬೂರು ಪೊಲೀಸ್‌ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ್ದರು. ಕದ್ದ ಸರವನ್ನು ತುಮಕೂರಿನ ಖಾಸಗಿ ಫೈನಾನ್ಸ್‌ವೊಂದರಲ್ಲಿ ಅಡವಿಟ್ಟು ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಗಸ್ತಿನಲ್ಲಿದ್ದ ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ದರೋಡೆಯಿಂದ ಬಂದ ಹಣದಲ್ಲಿ ವೇಶ್ಯಾವಾಟಿಕೆ, ಇಸ್ಪೀಟು, ಮೋಜುಮಸ್ತಿಗಾಗಿ ಹಣ ಖರ್ಚು ಮಾಡುತ್ತಿದ್ದರು. ಸುಲಭವಾಗಿ ಹಣ ಗಳಿಸಲು ದರೋಡೆಗೆ ಮುಂದಾಗಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರೋ ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿತರಿಂದ ಕೆಟಿಎಂ ಡ್ಯೂಕ್‌ ಬೈಕ್‌, ಚಿನ್ನದ ಸರ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.