ಮಂಡ್ಯ: ನಕಲಿ ಕೀಲಿ ಬಳಸಿ ಬೈಕ್ ಕಳ್ಳತನ, ಆರೋಪಿಗಳ ಬಂಧನ
ಇಬ್ಬರು ಬಾಲಕರ ಬಂಧನ, ಬಂಧಿತರಿಂದ ಸುಮಾರು 15 ಲಕ್ಷ ರು. ಮೌಲ್ಯದ 30 ಬೈಕ್ಗಳ ವಶಕ್ಕೆ
ಮದ್ದೂರು(ಅ.09): ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ನಕಲಿ ಕೀಲಿ ಬಳಸಿ ಅಪಹರಿಸುತ್ತಿದ್ದ ಆರೋಪದ ಮೇರೆಗೆ ಓರ್ವ ಯುವಕ ಹಾಗೂ ಇಬ್ಬರು ಬಾಲಕರನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 15 ಲಕ್ಷ ರು. ಮೌಲ್ಯದ 30 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ತಾಲೂಕಿನ ಸಿ.ಎ.ಕೆರೆ ಹೋಬಳಿ ಮುಟ್ಟನಹಳ್ಳಿ ಸಿದ್ದರಾಮೇಗೌಡ ಪುತ್ರ ಎಂ.ಎಸ್.ಅಭಿಷೇಕ್ ಅಲಿಯಾಸ್ ಅಭಿ (24) ಹಾಗೂ ಕಾನೂನು ಸಂಘರ್ಷಕ್ಕೊಳಗಾಗಿರುವ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ.
ಮದ್ದೂರು ತಾಲೂಕು ಮೆಳ್ಳಹಳ್ಳಿ ತಗಡೇಗೌಡ ಕಳೆದ ಸೆ. 28ರಂದು ತಾಲೂಕು ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಹೀರೋ ಬೈಕ್ ಅನ್ನು ಆರೋಪಿಗಳು ಕಳವು ಮಾಡಿದ್ದರು. ಈ ಸಂಬಂಧ ತಗಡೇಗೌಡ ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಮದ್ದೂರು ವೃತ್ತದ ಇನ್ಸ್ ಪೆಕ್ಟರ್ ಎಸ್.ಸಂತೋಷ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ಮಳವಳ್ಳಿ ಪಿಎಸ್ಐ ಆರ್.ನರೇಶ್ಕುಮಾರ್, ಮದ್ದೂರು ಪಿಎಸ್ಐ ಆರ್.ಬಿ.ಉಮೇಶ್, ಅಪರಾಧ ವಿಭಾಗದ ಪಿಎಸ್ಐ ಪಿ. ರವಿ, ಕೆಸ್ತೂರು ಠಾಣೆ ಎಎಸ್ಐ ರಾಜು, ಮದ್ದೂರು ಠಾಣೆ ಅಪರಾಧ ವಿಭಾಗದ ಸಿಬ್ಬಂದಿಗಳಾದ ಗುರುಪ್ರಸಾದ್, ಗಿರೀಶ್, ಓಂಕಾರಪ್ಪ ಗಾಯನ್ನನವರ್, ಎಸ್ಪಿ ಕಚೇರಿಯ ಸಿಡಿಆರ್ ವಿಭಾಗದ ರವಿಕಿರಣ್ ಹಾಗೂ ಲೋಕೇಶ್ ಅವರಗಳ ವಿಶೇಷ ತಂಡ ರಚನೆ ಮಾಡಲಾಗಿತ್ತು.
ತಂಡ ಸತತ 15 ದಿನಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸಿ ಪ್ರಥಮ ಆರೋಪಿ ಎಂ.ಎಸ್.ಅಭಿಷೇಕ್Üನನ್ನು ಉಪ್ಪಿಕೆರೆ ಗೇಟ್ ಬಳಿ ವಶಕ್ಕೆ ತೆಗೆದುಕೊಂಡ ನಂತರ ಇಬ್ಬರು ಬಾಲಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ನಂತರ ಆರೋಪಿಗಳನ್ನು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಪೊಲೀಸ್ ಕಸ್ಟಡಿಗೆ ಪಡೆದು ನಕಲಿ ಕೀಲಿಗಳನ್ನು ಬಳಸಿ ಕಳವು ಮಾಡಿದ್ದ ಬೈಕ್ಗಳನ್ನು ಖರೀದಿ ಮಾಡಿದ್ದ ವ್ಯಕ್ತಿಗಳಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಆರೋಪಿಗಳು ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5, ಮಂಡ್ಯ ಸೆಂಟ್ರಲ್ ವ್ಯಾಪ್ತಿಯಲ್ಲಿ 4, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1, ಕೆ.ಎಂ. ದೊಡ್ಡಿ ಠಾಣೆ ವ್ಯಾಪ್ತಿಯಲ್ಲಿ 4, ಬೆಸಗರಹಳ್ಳಿ ಠಾಣೆಯಲ್ಲಿ 3, ಕೆಸ್ತೂರು ಠಾಣೆಯಲ್ಲಿ 2, ಮಳವಳ್ಳಿ ಠಾಣೆಯಲ್ಲಿ 2, ಮಳವಳ್ಳಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 2, ಬೆಳಕವಾಡಿಯಲ್ಲಿ 2, ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1 ಸೇರಿದಂತೆ ಒಟ್ಟು 15 ಲಕ್ಷ ರು. ಮೌಲ್ಯದ 30 ಬೈಕ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಎಸ್ಪಿ ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.