ರೈಲ್ವೆ ಸಿಗ್ನಲ್ಗೆ ಬಟ್ಟೆ ಕಟ್ಟಿ ರೈಲು ನಿಲ್ಲಿಸಿ ದರೋಡೆ ಔರಂಗಾಬಾದ್ನ ಪೋತುಲ್ ರೈಲ್ವೆ ನಿಲ್ದಾಣದ ಬಳಿ ಘಟನೆ ಪ್ರಯಾಣಿಕರ ಮೊಬೈಲ್, ಪರ್ಸ್, ಚಿನ್ನಾಭರಣ ಕಳವು
ಔರಂಗಾಬಾದ್: ರೈಲ್ವೆ ಸಿಗ್ನಲ್ಗೆ ಬಟ್ಟೆ ಕಟ್ಟಿ ರೈಲು ನಿಲ್ಲಿಸಿದ ದರೋಡೆಕೋರರು ಬಳಿಕ ರೈಲು ಹತ್ತಿ ರೈಲಿನಲ್ಲಿದ್ದ ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಔರಂಗಾಬಾದ್ನ ಪೋತುಲ್ ರೈಲ್ವೆ ನಿಲ್ದಾಣದ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, 9 ರಿಂದ 10 ಜನರ ಗುಂಪೊಂದು ರೈಲಿನ ಮೇಲೆ ಕಲ್ಲೆಸೆದಿದ್ದಾರೆ. ಇದರ ಬೆನ್ನಲ್ಲೇ ಪ್ರಯಾಣಿಕರ ಮೊಬೈಲ್, ಪರ್ಸ್ ಸೇರಿದಂತೆ ಕೆಲ ಮಹಿಳೆಯರ ಚಿನ್ನಾಭರಣ ದೋಚಿದ್ದಾರೆ.
ದೌಲತಾಬಾದ್ ಮತ್ತು ಪೊತುಲ್ ನಿಲ್ದಾಣದ ನಡುವೆ ಈ ಘಟನೆ ನಡೆದಿದ್ದು, ದರೋಡೆಕೋರರು ಸಿಗ್ನಲ್ ಗೆ ಬಟ್ಟೆ ಕಟ್ಟಿ ರೈಲನ್ನು ನಿಲ್ಲಿಸಿ ನಂತರ ರೈಲಿಗೆ ನುಗ್ಗಿ ಲೂಟಿ ಮಾಡಿದ್ದಾರೆ. ಇಪ್ಪತ್ತು ದಿನಗಳ ಹಿಂದೆಯೂ ಇದೇ ಪ್ರದೇಶದಲ್ಲಿ ರೈಲನ್ನು ನಿಲ್ಲಿಸಿ ಪ್ರಯಾಣಿಕರನ್ನು ಥಳಿಸಿ ದರೋಡೆ ಮಾಡಿದ್ದ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ದರೋಡೆ, ದೃಶ್ಯ ಮೊಬೈಲ್ನಲ್ಲಿ ಸೆರೆ
ಮುಂಬೈನಿಂದ (Mumbai) ಔರಂಗಾಬಾದ್ (Aurangabad) ಮೂಲಕ ನಾಂದೇಡ್ಗೆ (Nanded) ಹೋಗುತ್ತಿದ್ದ ಸಿಕಂದರಾಬಾದ್(Secunderabad) ಮುಂಬೈ ರೈಲು ಪೊತುಲ್ ಸಿಗ್ನಲ್ ಬಳಿ ಲೈಟ್ ಆಫ್ ಆಗಿದ್ದ ಕಾರಣ ಅಲ್ಲಿ ನಿಂತಿತ್ತು. ರೈಲು ನಿಂತ ತಕ್ಷಣವೇ ಕೆಲವೊಂದು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಅಲ್ಲದೇ 9 ರಿಂದ 10 ದರೋಡೆಕೋರರು ರೈಲು ಬೋಗಿಯೊಳಗೆ ನುಗ್ಗಿ ಮಲಗಿದ್ದ ಮಹಿಳೆಯರ ಮೈಮೇಲಿನ ಆಭರಣ ಕದ್ದಿದ್ದಾರೆ. ಜೊತೆಗೆ ಪ್ರಯಾಣಿಕರ ಮೊಬೈಲ್, ಪರ್ಸ್ ಸೇರಿದಂತೆ ಇತರೆ ವಸ್ತುಗಳನ್ನು ದೋಚಿದ್ದಾರೆ. ಈ ವೇಳೆ ಅನೇಕ ಪ್ರಯಾಣಿಕರು ಕೂಗಾಡಿದ್ದಾರೆ. ಆದರೆ, ಇಡೀ ಪ್ರದೇಶದಲ್ಲಿ ಜನವಸತಿ ಇಲ್ಲದ ಕಾರಣ ಇದು ಹೊರಗಿನ ಜನರ ಅರವಿಗೆ ಬಾರದ ಕಾರಣ ಯಾವುದೇ ರೀತಿಯ ಸಹಾಯ ಲಭ್ಯವಾಗಿಲ್ಲ.
ಹಳಿತಪ್ಪಿದ ಚಾಲುಕ್ಯ ಎಕ್ಸ್ಪ್ರೆಸ್: ಮುಂಬೈ-ಗದಗ ರೈಲಿಗೆ ಡಿಕ್ಕಿ!
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಈಗಾಗಲೇ ದೌಲತಾಬಾದ್ (Daulatabad), ಲಾಸೂರ್ (Lasur) ಮತ್ತು ಔರಂಗಾಬಾದ್ (Aurangabad) ನಗರಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಕಳ್ಳರು ಆ್ಯಂಬುಲೆನ್ಸ್ನಲ್ಲಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಿರಿಯ ರೈಲ್ವೇ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದೆ. ಇದೇ ತಿಂಗಳಲ್ಲಿ ನಡೆದ ಎರಡನೇ ಘಟನೆ ಇದಾಗಿರುವುದರಿಂದ ಕಳ್ಳರನ್ನು ಹಿಡಿಯುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ದರೋಡೆಕೋರರು ಏಕಾಏಕಿ ರೈಲನ್ನು ನಿಲ್ಲಿಸಿ ದರೋಡೆಗೆ ಮುಂದಾಗಿದ್ದು, ಪ್ರಯಾಣಿಕರು ಭಯದಿಂದ ಪರದಾಡುವಂತಾಯಿತು. ಹೊರಗಿನಿಂದ ಕಲ್ಲು ತೂರಾಟ ಕೂಡ ನಡೆದಿದ್ದು, ಒಳಗಿದ್ದ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.