ನಂಜನಗೂಡು ತಾಲೂಕಿನಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ದಂಪತಿ ಮತ್ತು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಲ್ಲಹಳ್ಳಿ ಸಂಗಮ ಮುಖ್ಯರಸ್ತೆಯ ಜೆಪಿ ಹುಂಡಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ನಂಜನಗೂಡು (ಜೂ.5) : ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಮತ್ತು ಓರ್ವ ಮಹಿಳೆ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಸಂಗಮ ಮತ್ತು ಹುಲ್ಲಹಳ್ಳಿ ಮುಖ್ಯರಸ್ತೆಯ ಜೆಪಿ ಹುಂಡಿ ಗ್ರಾಮದ ಬಳಿ ನಡೆದಿದೆ.

Add Asianetnews Kannada as a Preferred SourcegooglePreferred

ತಾಲೂಕಿನ ಹಂಚೀಪುರ ಗ್ರಾಮದ ಚಿಕ್ಕಸ್ವಾಮಿ (51), ಅವರ ಪತ್ನಿ ರೂಪಾ (45) ರೂಪ ಅವರ ತಾಯಿ ಕಣೇನೂರು ಗ್ರಾಮದ ಚನ್ನಮಲ್ಲಮ್ಮ (65) ಮೃತ ದುರ್ದೈವಿಗಳು.

ಚಿಕ್ಕಸ್ವಾಮಿ, ಪತ್ನಿ ರೂಪಾ ತಾಲೂಕಿನ ಹಂಚಿಪುರ ಗ್ರಾಮದಿಂದ ತನ್ನ ಬೈಕಿನಲ್ಲಿ ಸಂಗಮ ಕ್ಷೇತ್ರದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ನಂತರ ಕಣೆನೂರು ಗ್ರಾಮದಲ್ಲಿರುವ ಚಿಕ್ಕಸ್ವಾಮಿ ಅವರ ಪತ್ನಿ ರೂಪಾ ಅವರ ತಾಯಿ ಚೆನ್ನಮಲ್ಲಮ್ಮ ಅವರಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಸೇರಿಸಲೆಂದು ಚಿಕ್ಕಸ್ವಾಮಿ, ರೂಪಾ ಮತ್ತು ಚನ್ನಮಲ್ಲಮ್ಮ ಒಂದೇ ಬೈಕಿನಲ್ಲಿ ಹುಲ್ಲಹಳ್ಳಿ ಸಂಗಮ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ವೇಳೆ ಜೆ.ಪಿ. ಹುಂಡಿ ಗ್ರಾಮದ ಬಳಿ ತಮಿಳುನಾಡು ನೋಂದಣಿಯ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅತಿ ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಬೈಕ್ ಸವಾರ ಮತ್ತು ಇಬ್ಬರು ಮಹಿಳೆಯರ ಮೇಲೆ ಲಾರಿಯ ಚಕ್ರ ಹರಿದು, ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ರಘು, ಪಿಎಸ್ಐ ಚೇತನ್ ಕುಮಾರ್, ಅಪರಾಧ ವಿಭಾಗದ ರಸೂಲ್ ಪಾಗವಾಲೆ, ಎಸ್ಐ ಶಿವಣ್ಣ, ದೊಡ್ಡಯ್ಯ ಭೇಟಿ ನೀಡಿ ಪರಿಶೀಲಿಸಿದರು. ತಮಿಳುನಾಡು ಮೂಲದ ಲಾರಿ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.