ಮಂಗಳೂರು ಸ್ಫೋಟ: ಬಾಂಬ್ ಸರಿಯಾಗಿ ಫಿಟ್ ಆಗಿರಲಿಲ್ಲ, ಅರ್ಧಂಬರ್ಧ ಕಲಿತಿದ್ದ ಶಾರೀಕ್
ಆತನ ಲೆಕ್ಕಾಚಾರ ಕೂಡ ಸಂಪೂರ್ಣ ಬುಡಮೇಲಾಗಿದ್ದು, ಉದ್ದೇಶಿತ ಸ್ಥಳಕ್ಕಿಂತ ಮೊದಲೇ ಬಾಂಬ್ ಸ್ಫೋಟವಾಗಿದೆ. ಸರಿಯಾಗಿ ಬಾಂಬ್ ತಯಾರಿ ಮಾಡದೆ ಇದ್ದುದರಿಂದ ಸ್ಫೋಟದ ತೀವ್ರತೆ ತೀರ ಕಡಿಮೆಯಾಗಿತ್ತು.
ಮಂಗಳೂರು(ನ.22): ಉಗ್ರ ಶಾರೀಕ್ ಇಂಟರ್ನೆಟ್ ಸೇರಿ ವಿವಿಧ ಮೂಲಗಳಿಂದ ಬಾಂಬ್ ತಯಾರಿ ಕಲಿತುಕೊಂಡಿದ್ದರೂ, ಶಿವಮೊಗ್ಗ ಸಮೀಪ ಟ್ರಯಲ್ ಬಾಂಬ್ ಸ್ಫೋಟ ಮಾಡಿದ್ದರೂ, ಇದರಲ್ಲಿ ಎಕ್ಸ್ಪರ್ಟ್ ಆಗಿರಲಿಲ್ಲ. ಹೀಗಾಗಿ, ಮಂಗಳೂರಿಗೆ ತಂದ ಕುಕ್ಕರ್ ಬಾಂಬ್ ಅನ್ನು ಸರಿಯಾದ ಕ್ರಮದಲ್ಲಿ ಜೋಡಿಸಿರಲಿಲ್ಲ. ಅರ್ಧಂಬರ್ಧ ಬಾಂಬ್ ತಯಾರಿಸಿ ಬಂದಿದ್ದ. ಆತನ ಲೆಕ್ಕಾಚಾರ ಕೂಡ ಸಂಪೂರ್ಣ ಬುಡಮೇಲಾಗಿದ್ದು, ಉದ್ದೇಶಿತ ಸ್ಥಳಕ್ಕಿಂತ ಮೊದಲೇ ಬಾಂಬ್ ಸ್ಫೋಟವಾಗಿದೆ. ಸರಿಯಾಗಿ ಬಾಂಬ್ ತಯಾರಿ ಮಾಡದೆ ಇದ್ದುದರಿಂದ ಸ್ಫೋಟದ ತೀವ್ರತೆ ತೀರ ಕಡಿಮೆಯಾಗಿತ್ತು. ಒಂದು ವೇಳೆ ಸರಿಯಾದ ಕ್ರಮದಲ್ಲಿ ಬಾಂಬ್ ಮಾಡಿರುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಹೇಳಲಾಗಿದೆ.
ಅರಾಫತ್, ಮತೀನ್ ಮಾಸ್ಟರ್ಮೈಂಡ್?:
ಮಂಗಳೂರಿನಲ್ಲಿ ಉಗ್ರ ಪರ ಗೋಡೆ ಬರಹ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅರಾಫತ್ ಆಲಿ ಆಗಿನಿಂದಲೂ ತಲೆಮರೆಸಿಕೊಂಡಿದ್ದು, ದುಬೈನಲ್ಲಿರುವುದಾಗಿ ತಿಳಿದು ಬಂದಿದೆ.
ಮಂಗ್ಳೂರು ಬಾಂಬರ್ ಬಳಿ ಇದ್ದ ಭಾರೀ ಸ್ಫೋಟಕ ಕಂಡು ದಂಗಾದ ಪೊಲೀಸರು..!
ಇನ್ನೊಬ್ಬ ಶಂಕಿತ ಉಗ್ರ ಮತೀನ್ ಅಹ್ಮದ್ ಎಂಬಾತ ಕೂಡ ತಲೆಮರೆಸಿಕೊಂಡಿದ್ದಾನೆ. ಎನ್ಐಎ ಪಟ್ಟಿಯಲ್ಲಿ ಮತೀನ್ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದು, ಈತನ ಪತ್ತೆಗೆ ಎನ್ಐಎ 2 ಲಕ್ಷ ರು. ಬಹುಮಾನ ಘೋಷಿಸಿದೆ. ಇವರಿಬ್ಬರೂ ಶಾರೀಕ್ಗೆ ಉಗ್ರ ಪ್ರಚೋದನೆ ನೀಡಿರುವ ಶಂಕೆಯಿದೆ. ಈ ಮೂವರೂ ತೀರ್ಥಹಳ್ಳಿಯವರೇ ಆಗಿದ್ದಾರೆ.