ಪಾರ್ಟಿಗೆ ಕರೆದು ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ
ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಪೊಲೀಸ್ ವಶಕ್ಕೆ| ಸಂಬಂಧ ದೂರು ನೀಡಿದ ಸಂತ್ರಸ್ತ ಯುವತಿ| ತಡರಾತ್ರಿಯಾಗಿದ್ದರಿಂದ ಎಲ್ಲ ವಿದ್ಯಾರ್ಥಿಗಳು ಆರೋಪಿಯ ಮನೆಯಲ್ಲೇ ಮಲಗಿದ್ದರು|
ಬೆಂಗಳೂರು(ಡಿ.16): ಸಹಪಾಠಿ ಯುವತಿಯನ್ನು ಔತಣಕ್ಕೆಂದು ಕರೆದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಭಾರತ ಮೂಲದ ತುಷಾರ್ (23) ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ಸಂತ್ರಸ್ತೆ ಹಾಗೂ ಆರೋಪಿ ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜರಾಜೇಶ್ವರಿನಗರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಆರೋಪಿ ವಾಸವಾಗಿದ್ದಾನೆ. ಅದೇ ಫ್ಲ್ಯಾಟ್ನಲ್ಲಿ ಡಿ.9ರಂದು ಔತಣಕೂಟ ಇಟ್ಟುಕೊಂಡಿದ್ದರು. ಯುವತಿ ಸೇರಿ ಎಲ್ಲ ಸಹಪಾಠಿಗಳನ್ನು ಆರೋಪಿ, ಔತಣಕೂಟಕ್ಕೆ ಆಹ್ವಾನಿಸಿದ್ದ. ತನ್ನ ಮನೆಗೆ ಬಂದಿದ್ದ ಸ್ನೇಹಿತರ ಜತೆ ಆರೋಪಿ ತಡರಾತ್ರಿ ಒಂದು ಗಂಟೆಯವರೆಗೂ ಮದ್ಯ ಕುಡಿದು ಊಟ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಪ್ ಬಳಿಕ ಸ್ತ್ರೀಯರು ರೇಪ್ ದೂರು ನೀಡ್ತಾರೆ: ಮಹಿಳಾ ಆಯೋಗ ಅಧ್ಯಕ್ಷೆ!
ಬಳಿಕ ತಡರಾತ್ರಿಯಾಗಿದ್ದರಿಂದ ಎಲ್ಲ ವಿದ್ಯಾರ್ಥಿಗಳು ಆರೋಪಿಯ ಮನೆಯಲ್ಲೇ ಮಲಗಿದ್ದರು. ಯುವತಿ ಪ್ರತ್ಯೇಕ ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದರು. ಆಗ ಕೊಠಡಿಗೆ ಹೋಗಿದ್ದ ಆರೋಪಿ, ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಎಚ್ಚರಗೊಂಡ ಯುವತಿ ಜೋರಾಗಿ ಕೂಗಿಕೊಂಡಿದ್ದಾರೆ. ಅಲ್ಲದೆ, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.