Asianet Suvarna News Asianet Suvarna News

ಮಂಡ್ಯ: ಮಗಳಿಗೆ ಹೆಚ್ಚು ಆಸ್ತಿ ಹಂಚಿಕೆ, ತಂದೆಯನ್ನೇ ಕೊಂದ ಪಾಪಿ ಮಗ..!

ಆಸ್ತಿಯಲ್ಲಿ ಮಗಳಿಗೆ ಹೆಚ್ಚು ಪಾಲು ನೀಡಿದ ತಂದೆಯನ್ನು ಪುತ್ರನೇ ಕಲ್ಲಿನಿಂದ ಜಜ್ಜಿ ಹತ್ಯೆಗೈದ ಘಟನೆ ಮಂಡ್ಯ ತಾಲೂಕಿನ ಸುಂಡಹಳ್ಳಿಯಲ್ಲಿ ನಡೆದ ಘಟನೆ. 

Son Killed His Father in Mandya grg
Author
First Published Feb 28, 2024, 6:13 AM IST

ಮಂಡ್ಯ(ಫೆ.28):  ಆಸ್ತಿಯಲ್ಲಿ ಮಗಳಿಗೆ ಹೆಚ್ಚು ಪಾಲು ನೀಡಿದ ತಂದೆಯನ್ನು ಪುತ್ರನೇ ಕಲ್ಲಿನಿಂದ ಜಜ್ಜಿ ಹತ್ಯೆಗೈದ ಘಟನೆ ತಾಲೂಕಿನ ಸುಂಡಹಳ್ಳಿಯಲ್ಲಿ ನಡೆದಿದೆ. ಇದನ್ನು ತಡೆಯಲು ಬಂದ ತಾಯಿ ಮೇಲೂ ಮಾರಣಾಂತಿಕ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ನಂಜಪ್ಪ (೬೫) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಆರೋಪಿ ಪುತ್ರ ಮಹದೇವ (೪೦) ಘಟನೆ ಬಳಿಕ ಪರಾರಿಯಾಗಿದ್ದಾನೆ.

ಮೂಲತಃ ರಾಮನಗರದ ಜಿಲ್ಲೆ, ಅರ್ಚಕರಹಳ್ಳಿ ಗ್ರಾಮದವರಾದ ನಂಜಪ್ಪ ಅವರು ನಂತರ ಮಗಳು-ಅಳಿಯ ಇದ್ದ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಬಂದು ನೆಲೆಸಿದ್ದರು. ಸ್ವಂತ ಮನೆ ಮತ್ತು ಜಮೀನು ಮಾಡಿಕೊಂಡಿದ್ದರು. ಈ ಮಧ್ಯೆ ಅರ್ಚಕರಹಳ್ಳಿಯಲ್ಲಿದ್ದ 2 ಎಕರೆ ಜಮೀನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಮಗಳು ಮತ್ತು ಮಗನಿಗೆ ಹಂಚಿದ್ದರು. ಜೊತೆಗೆ ತಮ್ಮ ಮನೆ ಬಳಿ ಇದ್ದ ನಿವೇಶವನ್ನು ಮಗಳ ಹೆಸರಿಗೆ ಬರೆದುಕೊಟ್ಟಿದ್ದರು. ಸುಂಡಹಳ್ಳಿಯ ಬಳಿ ಇದ್ದ ಜಮೀನು ಮಾರಾಟ ಮಾಡಲು ಮುಂದಾದಾಗ ಮಗಳು ತಕರಾರು ತೆಗೆದಿದ್ದಳು. ನಂತರ ಆಕೆಗೆ ಸ್ವಲ್ಪ ಹಣಕಾಸು ಸಹಾಯ ಮಾಡಿದ್ದರು. ಇದರಿಂದ ಕುಪಿತಗೊಂಡಿದ್ದ ಪುತ್ರ ಮಹದೇವ ಈ ವಿಷಯವಾಗಿ ಆಗಾಗ್ಗೆ ತಂದೆ ಜತೆಗೆ ಜಗಳ ಮಾಡುತ್ತಿದ್ದ. ಇದರ ನಡುವೆ ಇತ್ತೀಚೆಗೆ ಅರ್ಧ ಎಕರೆ ಜಮೀನು ಮಾರಾಟ ಮಾಡಿ ಬಂದ ಹಣವನ್ನೂ ಮಗಳಿಗೆ ನೀಡಿದ್ದರು. ಇದರಿಂದ ಸಿಟ್ಟುಗೊಂಡಿದ್ದ ಪುತ್ರ ಸೋಮವಾರ ಬೆಳಗ್ಗೆ ತಂದೆ ನಂಜಪ್ಪನೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿದ್ದ.

ಆನ್‌ಲೈನ್ ಗೇಮ್‌ನಿಂದ ಕಳ್ಕೊಂಡ ಹಣ ಹಿಂದಿರುಗಿಸಲು ತಾಯಿಯನ್ನೇ ಕೊಂದ ಮಗ!

ಆತನಿಂದ ತಪ್ಪಿಸಿಕೊಳ್ಳಲು ಮನೆಯಿಂದ ಹೊರ ಬಂದ ನಂಜಪ್ಪನನ್ನು ಗ್ರಾಮದಲ್ಲೆಲ್ಲ ಅಟ್ಟಾಡಿಸಿ ಹಲ್ಲೆ ಮಾಡಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಮಹದೇವಮ್ಮಳ ತಲೆಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ತಂದೆ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾನೆ.

ಘಟನೆಯಲ್ಲಿ ಗಾಯಗೊಂಡಿರುವ ಮಹದೇವಮ್ಮರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios