ಶಿವಮೊಗ್ಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯಲದಲ್ಲಿ ಮಗುವಿನ ಶವ ಪತ್ತೆಯಾದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ (ಆ.24): ಶಿವಮೊಗ್ಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯಲದಲ್ಲಿ ಮಗುವಿನ ಶವ ಪತ್ತೆಯಾದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆತ್ತ ತಾಯಿಯೇ 1 ದಿನದ ಗಂಡು ಮಗವನ್ನು ಕತ್ತು ಸೀಳಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಆ.16ರಂದು ಮೆಗ್ಗಾನ್‌ ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯಲದಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು ತನಿಖೆ ನಡೆಸಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಎಂಬಾಕೆಯನ್ನು ಬಂಧಿಸಿದ್ದಾರೆ.

ತನಿಖೆ ಕೈಗೊಂಡ ದೊಡ್ಡಪೇಟೆ ಪೊಲೀಸರಿಗೆ ಆರಂಭದಲ್ಲೇ ಹೆರಿಗೆ ವಾರ್ಡ್‌ನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಶೈಲಾ ಮೇಲೆ ಅನುಮಾನವಿತ್ತು. ಆದರೆ, ದಂಪತಿ ಮಗು ತಮ್ಮದಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಆದರೆ, ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಆ ದಿನ ಹೆರಿಗೆ ವಾರ್ಡ್‌ನಲ್ಲಿ ಆಗಿರುವ ಹೆರಿಗೆ ಮತ್ತು ತಾಯಂದಿರ ಎಲ್ಲ ಮಾಹಿತಿ ಕಲೆ ಹಾಕಿದ್ದರು. ಆ ದಿನ ಶೈಲಾ ಬಳಿ ಮಾತ್ರ ಮಗು ಇರದಿರುವುದು ಕಂಡು ಬಂದಿತ್ತು. 4-5 ದಿನಗಳಿಂದ ದೊಡ್ಡಪೇಟೆ ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ನಡೆಸಿ, ಹೆರಿಗೆ ವಾರ್ಡ್‌ಗೆ ಇಬ್ಬರು ಮಹಿಳಾ ಪೊಲೀಸ್ ಪೇದೆಗಳನ್ನು ಗಸ್ತಿನಲ್ಲಿ ನಿಯೋಜಿಸಿದ್ದರು.

ದಿನಗಳು ಕಳೆದಂತೆ ಪೊಲೀಸರಿಗೆ ಶೈಲಾ ಮೇಲೆ ಅನುಮಾನ ದಟ್ಟವಾಗಿತ್ತು. ಶೈಲಾ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಹೊರ ಬರುತ್ತಿದ್ದಂತೆ ದೊಡ್ಡಪೇಟೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಈಗಾಗಲೇ ಶೈಲಾಗೆ ಇಬ್ಬರು ಮಕ್ಕಳಿದ್ದಾರೆ. ಶೈಲಾಗೆ ನಾಲ್ಕು ವರ್ಷಗಳ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದೆ. ನಂತರವೂ ಶೈಲಾ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿದ್ದನ್ನು ಕುಟುಂಬಸ್ಥರಿಂದ ಮುಚ್ಚಿಟ್ಟಿದ್ದಾಳೆ. ಶೈಲಾಗೆ ಥೈರಾಲ್ಡ್ ಇದೆ. ಇದನ್ನೇ ನೆಪ ಮಾಡಿಕೊಂಡು ಗರ್ಭಿಣಿ ಆಗಿರುವುದನ್ನು ಕುಟುಂಬಸ್ಥರಿಂದ ಮುಚ್ಚಿಟ್ಟಿದ್ದಾಳೆ.

ನಾದಿನಿ ನೋಡಲು ಬಂದವಳಿಗೆ ಹೆರಿಗೆ ನೋವು: ಆ.16 ರಂದು ಶೈಲಾ ನಾದಿನಿಯ ಹೆರಿಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಆಗಿತ್ತು. ಅವರನ್ನು ನೋಡಲು ಆಸ್ಪತ್ರೆಗೆ ಬಂದಾಗ ಶೈಲಾಗೂ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದ ಗಲಿಬಿಲಿಗೊಂಡ ಶೈಲಾ, ಹೊಟ್ಟೆನೋವು ಅಂತ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆ ದಿನ ಶೌಚಾಲಯದಲ್ಲಿ ಒಬ್ಬಳೇ ನಾರ್ಮಲ್ ಹೆರಿಗೆ ಮಾಡಿಕೊಂಡಿದ್ದಾಳೆ. ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ನಿಂದ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾಳೆ. ಶೈಲಾ ಹೇಳಿಕೆ ಮತ್ತು ಕೆಲ ಸಾಕ್ಷಿಗಳ ಆಧಾರ ಮೇಲೆ ದೊಡ್ಡಪೇಟೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.