ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಎರಡು ಬುಲೆರೋ ವಾಹನಗಳ ನಡುವೆ ನಡೆದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಅಪ್ಪ-ಮಗ ಸೇರಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಯಚೂರು (ಜ.20): ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇಂದು ನಡೆದ ಭೀಕರ ರಸ್ತೆ ಅಪಘಾತವೊಂದು ಐದು ಜೀವಗಳನ್ನು ಬಲಿಪಡೆದಿದೆ. ಎರಡು ಬುಲೆರೋ ವಾಹನಗಳ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿಯ ವಿವರವಾಗಿ ವರದಿ ಇಲ್ಲಿದೆ

Add Asianetnews Kannada as a Preferred SourcegooglePreferred

ಕನ್ಹೇರಿ ಕ್ರಾಸ್ ಭೀಕರ ಅಪಘಾತ

ಸಿಂಧನೂರು ತಾಲೂಕಿನ ಕನ್ಹೇರಿ ಕ್ರಾಸ್ ಬಳಿ ಇಂದು ಎರಡು ಬುಲೆರೋ ವಾಹನಗಳು ಅತಿ ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಒಟ್ಟು ಐದು ಮಂದಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದು, ರಸ್ತೆ ತುಂಬಾ ರಕ್ತಸಿಕ್ತವಾಗಿದೆ.

ಮೃತರ ಗುರುತು ಪತ್ತೆ: ಅಪ್ಪ-ಮಗ ಸಾವು

ಮೃತರು ಸಿರಗುಪ್ಪ ತಾಲೂಕಿನ ತಸಲ್ಲ ಕುದ್ಲೂರು ಗ್ರಾಮದವರು ಎಂದು ಗುರುತಿಸಲಾಗಿದೆ. ಮೃತರ ಪೈಕಿ ಸಣ್ಣ ಯಲ್ಲಯ್ಯ (45) ಹಾಗೂ ಅವರ ಪುತ್ರ ರಂಗನಾಥ (18) ಕೂಡ ಸೇರಿದ್ದಾರೆ. ಉಳಿದಂತೆ ಹರಿ ಮತ್ತು ಮಲ್ಲಯ್ಯ ಆದೋನಿ (35) ಮೃತಪಟ್ಟ ಇತರ ದುರ್ದೈವಿಗಳು. ಇವರೆಲ್ಲರೂ ಆಂಧ್ರ ಮೂಲದ ಕಾರ್ಮಿಕರು ಎಂದು ಶಂಕಿಸಲಾಗಿದ್ದು, ಮೃತರ ಕುಟುಂಬಸ್ಥರ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಮೂರು ಕುರಿಗಳ ಸಾವು

ಅಪಘಾತಕ್ಕೀಡಾದ ಒಂದು ವಾಹನ ಕುರಿಗಳನ್ನು ಸಾಗಿಸುತ್ತಿದ್ದರೆ, ಮತ್ತೊಂದು ವಾಹನ ಕಾರ್ಮಿಕರನ್ನು ಕರೆದೊಯ್ಯುತ್ತಿತ್ತು. ಅಪಘಾತದಲ್ಲಿ ವಾಹನದಲ್ಲಿದ್ದ ಮೂರು ಕುರಿಗಳು ಕೂಡ ಸಾವನ್ನಪ್ಪಿವೆ. ಇನ್ನು ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವನನ್ನು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಹಾಗೂ ಉಳಿದ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ವಹಿಸಲಾಗಿದೆ.

ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ

ವಿಷಯ ತಿಳಿಯುತ್ತಿದ್ದಂತೆ ಸಿಂಧನೂರು ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ನಜ್ಜುಗುಜ್ಜಾಗಿದ್ದ ವಾಹನಗಳಿಂದ ಮೃತದೇಹಗಳನ್ನು ಹೊರತೆಗೆದು ಸಿಂಧನೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಚಾಲಕರ ಅತಿವೇಗವೇ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.