ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿರುವ ಸೂಚನೆ ದಿನಕ್ಕೊಂದು ಅಪರಾಧ ಸುದ್ದಿಗಳಿಂದ ಸಾಬೀತಾಗುತ್ತಿದೆ. ಭಾನುವಾರ ಪಂಜಾಬ್‌ನ ಜೈಲಿನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಇಬ್ಬರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ. 

ನವದೆಹಲಿ (ಫೆ.26): ಪಂಜಾಬ್‌ ರಾಜ್ಯದ ಜೈಲಿನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಪ್ರಖ್ಯಾತ ಪಂಜಾಬಿ ಸಿಂಗರ್‌ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಹತ್ಯೆ ಮಾಡಲಾಗಿದೆ. ಪಂಜಾಬ್‌ನ ತರನ್ ತರಣ್‌ ಜಿಲ್ಲೆಯ ಗೊಯಿನ್‌ಡ್ವಾಲ್‌ ಜೈಲಿನಲ್ಲಿ ಅಪರಿಚಿತ ಎರಡು ಗ್ಯಾಂಗ್‌ಗಳ ನಡುವೆ ಭಾನುವಾರ ಭೀಕರ ಗ್ಯಾಂಗ್‌ವಾರ್‌ ನಡೆಸಿದೆ. ಈ ವೇಳೆ ಸಿಧು ಮೂಸೆವಾಲಾ ಪ್ರಕರಣದ ಆರೋಪಿಯಾಗಿದ್ದ ಮಂದೀಪ್‌ ಸಿಂಗ್‌ ತೂಫಾನ್‌ ಮತ್ತು ಮನ್‌ಮೋಹನ್‌ ಸಿಂಗ್‌ ಮೋಹ್ನಾ ಅವರ ಹತ್ಯೆ ಮಾಡಲಾಗಿದೆ. ಪ್ರಕರಣದ ಇನ್ನೊಬ್ಬ ಅರೋಪಿಯಾಗಿರುವ ಕೇಶವ ಅವರ ಸ್ಥಿತಿ ಗಂಭೀರವಾಗಿದೆ. ಈ ಮೂವರ ಮೇಲೂ, ತಲೆಗೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ ಜೈಲಿನಿಂದ ಕರೆತರಲಾದ ಮೂವರು ಗಾಯಾಳುಗಳಲ್ಲಿ ಇಬ್ಬರು ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿದ್ದರೆ, ಮೂರನೇ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತರನ್ ತರಣ್‌ನ ತುರ್ತು ವೈದ್ಯಕೀಯ ಅಧಿಕಾರಿ ಡಾ.ಜಗ್ಜಿತ್ ಸಿಂಗ್ ತಿಳಿಸಿದ್ದಾರೆ. ಪ್ರಖ್ಯಾತ ಗಾಯಕ ಮುಸೇವಾಲಾ ಹತ್ಯೆಯ ಸಂದರ್ಭದಲ್ಲಿ ಹತ್ಯೆಗೀಡಾದ ದರೋಡೆಕೋರ ಮನದೀಪ್ ಸಿಂಗ್ ಸ್ಟ್ಯಾಂಡ್‌ಬೈ ಶೂಟರ್‌ ಆಗಿದ್ದರು ಎನ್ನುವ ಆರೋಪವಿತ್ತು. ಈತ ಜಗ್ಗು ಭಗವಾನ್ ಪುರಿಯಾ ಗ್ಯಾಂಗ್ ನ ಸದಸ್ಯನಾಗಿದ್ದ.

Add Asianetnews Kannada as a Preferred SourcegooglePreferred

ಹಿಂಸಾಚಾರಕ್ಕೆ ತಿರುಗಿದ ಗಲಾಟೆ: ಪ್ರಾಥಮಿಕ ಮಾಹಿತಿ ಪ್ರಕಾರ ಗ್ಯಾಂಗ್‌ಸ್ಟರ್‌ ಮನದೀಪ್ ಸಿಂಗ್ ತೂಫಾನ್ ಜೈಲಿನಲ್ಲಿದ್ದ ಕೈದಿಗಳೊಂದಿಗೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆಸಿದ್ದ ಎನ್ನಲಾಗಿದೆ. ಇದರ ನಂತರ, ಕೈದಿಗಳು ಅವನನ್ನು ಹೊಡೆದು ಕೊಂದಿದ್ದಾರೆ. ಘರ್ಷಣೆಯಲ್ಲಿ ಮೂರರಿಂದ ನಾಲ್ಕು ಇತರ ಕೈದಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಜೈಲಿನಲ್ಲಿ ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಎರಡು ಗುಂಪುಗಳನ್ನು ರಚಿಸಲಾಗಿದೆ. ಅಲ್ಲದೇ ಲಾರೆನ್ಸ್ ಮತ್ತು ಜಗ್ಗು ಗ್ಯಾಂಗ್ ಗೆ ಸೇರಿದ ದುಷ್ಕರ್ಮಿಗಳು ಮುಖಾಮುಖಿಯಾಗಿದ್ದಾರೆ ಎಂದೂ ವರದಿಯಾಗಿದೆ.

ಮೂಸೆವಾಲಾ ಕೊಲೆಯ ವೇಳೆ ಮೀಸಲು ಶೂಟರ್‌ ಆಗಿದ್ದ ಮಂದೀಪ್‌: ಸಿಧು ಮೂಸೆವಾಲಾ ಕೊಲೆಯಾದ ದಿನ ಮಂದೀಪ್ ತೂಫಾನ್ ಕೂಡ ಸ್ಥಳದ ಸುತ್ತಮುತ್ತ ಇದ್ದ. ಗೋಲ್ಡಿ ಬ್ರಾರ್‌, ಜಗ್ಗು ಭಗವಾನ್‌ಪುರಿಯ ವಿಶೇಷ ಶೂಟರ್‌ ಮನ್‌ದೀಪ್ ತೂಫಾನ್ ಜೊತೆಗೆ ಮಣಿ ರಾಯರನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದ್ದರು. ಜಗ್ರೂಪ್ ಅಲಿಯಾಸ್ ರೂಪ ಮತ್ತು ಮನ್‌ಪ್ರೀತ್ ಮನ್ನು ಕವರ್ ಮಾಡಲು ಆತನಿಗೆ ತಿಳಿಸಲಾಗಿತ್ತು. ಜಗ್ಗು ಭಗವಾನ್ ಪುರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಮಂದೀಪ್ ತೂಫಾನ್ ಹೆಸರು ಮುಂಚೂಣಿಗೆ ಬಂದಿತ್ತು.

Sidhu Moosewala ಆಸ್ವಸ್ಥಗೊಂಡ ಸಿಧು ಮೂಸೆವಾಲಾ ತಂದೆ, ಪಟಿಯಾಲ ಆಸ್ಪತ್ರೆಗೆ ದಾಖಲು!

ಮೂಸೆವಾಲಾ ಹತ್ಯೆಯ ನಂತರ ಆರೋಪಿಗಳಿಬ್ಬರೂ ಲೂಧಿಯಾನದ ಸಂದೀಪ್ ಎಂಬಾತನ ಜತೆ ಭೂಗತರಾಗಿದ್ದರು. ಸಂದೀಪ್ ಇಬ್ಬರೂ ಆರೋಪಿಗಳಿಗೆ ಲೂಧಿಯಾನದಲ್ಲಿರುವ ತನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ನೀಡಿದ್ದರು ಮತ್ತು ಅವರನ್ನು ಹಲವು ದಿನಗಳವರೆಗೆ ಅಲ್ಲೇ ಇರಿಸಿದ್ದರು. ಕೆಲವು ದಿನಗಳ ಕಾಲ ಲುಧಿಯಾನದಲ್ಲಿ ತಂಗಿದ್ದ ನಂತರ, ಶೂಟರ್‌ಗಳಾದ ಮನದೀಪ್ ಸಿಂಗ್ ತೂಫಾನ್ ಮತ್ತು ಮಣಿ ಇಬ್ಬರೂ ಲೂಧಿಯಾನವನ್ನು ತೊರೆದರೆ, ಪೊಲೀಸರು ಸಂದೀಪ್‌ನನ್ನು ಬಂಧಿಸಿದರು.

ಪುತ್ರ ಶೋಕಂ ನಿರಂತರಂ : ಅಗಲಿದ ಮಗನ ಹಚ್ಚೆ ಹಾಕಿಸಿಕೊಂಡ ಸಿಧು ಮೂಸೆವಾಲಾ ಅಪ್ಪ

ಪೊಲೀಸರ ಪ್ರಕಾರ, ಸಂದೀಪ್ ಅಮೃತಸರದ ಕುದುರೆ ವ್ಯಾಪಾರಿ ಸತ್ಬೀರ್‌ನ ಫಾರ್ಚೂನರ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ನೀಡಿ ಮೂಸೇವಾಲಾನನ್ನು ಕೊಲ್ಲಲು ಬಟಿಂಡಾಗೆ ಕಳುಹಿಸಿದ್ದ. ಇಬ್ಬರೂ ಬಟಿಂಡಾದ ಪೆಟ್ರೋಲ್ ಪಂಪ್‌ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಗಳನ್ನು ಬಟಿಂಡಾಕ್ಕೆ ಕರೆದೊಯ್ದದ್ದು ಸತ್ಬೀರ್ ಎಂಬುದು ಸ್ಪಷ್ಟವಾಗಿತ್ತು.