ಅಗ್ನಿ ಅವಘಡದಲ್ಲಿ ತನ್ನ ಕಂಪನಿ ಸುಟ್ಟು ಹೋದ ಬಳಿಕ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾಯಿಯ ಗೆಳತಿ ಮನೆಯಲ್ಲಿ ಕಳ್ಳತನ ಮಾಡಿದ ಎಂಜಿನಿಯರಿಂಗ್ ಪದವೀಧರನೊಬ್ಬ ಜೈಲು ಸೇರಿದ್ದಾನೆ.

ಬೆಂಗಳೂರು (ಫೆ.1): ಅಗ್ನಿ ಅವಘಡದಲ್ಲಿ ತನ್ನ ಕಂಪನಿ ಸುಟ್ಟು ಹೋದ ಬಳಿಕ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾಯಿಯ ಗೆಳತಿ ಮನೆಯಲ್ಲಿ ಕಳ್ಳತನ ಮಾಡಿದ ಎಂಜಿನಿಯರಿಂಗ್ ಪದವೀಧರನೊಬ್ಬ ಜೈಲು ಸೇರಿದ್ದಾನೆ.

ಮಾಗಡಿ ರಸ್ತೆಯ ಟೆಲಿಕಾಂ ಲೇಔಟ್‌ ನಿವಾಸಿ ಮದನ್‌ ಬಂಧಿತನಾಗಿದ್ದು, ಆರೋಪಿಯಿಂದ ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ₹30 ಸಾವಿರ ಬೆಲೆಯ 458 ಗ್ರಾಂ ಬೆಳ್ಳಿ ಹಾಗೂ ₹1.35 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ರವಿಪ್ರಕಾಶ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟ ಆಗದಿದ್ರೆ ರಾಜ್ಯದಿಂದ ಹೊರಹೋಗಲು ಸ್ವತಂತ್ರರು: ಕರವೇ ನಾರಾಯಣಗೌಡ

ಆರ್ಥಿಕ ನಷ್ಟ ತಂದ ಸಂಕಷ್ಟ:

ತನ್ನ ಕುಟುಂಬದ ಜತೆ ಟೆಲಿಕಾಂ ಲೇಔಟ್‌ ನೆಲೆಸಿದ್ದ ಮದನ್ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರ. ಕುಂಬಳಗೋಡು ಬಳಿ ಆತ ಅಲ್ಯೂಮಿನಿಯಂ ಉತ್ಪನ್ನಗಳ ಕಂಪನಿ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿ ಕಂಪನಿ ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಯಿತು. ಆದರೆ ಈ ದುರಂತಕ್ಕೆ ಆತನಿಗೆ ವಿಮೆ ಸಿಗಲಿಲ್ಲ. ಇದರಿಂದ ₹68 ಲಕ್ಷ ನಷ್ಟವಾಗಿತ್ತು. ಹಣಕಾಸು ಸಮಸ್ಯೆಯಿಂದ ಪಾರಾಗಲು ಆತ ಕಳ್ಳತನಕ್ಕಿಳಿದನೆಂದು ತಿಳಿದು ಬಂದಿದೆ.

ಮನೆ ತುಂಬಾ ಖಾರದ ಪುಡಿ:

ಟೆಲಿಕಾಂ ಲೇಔಟ್‌ನಲ್ಲಿ 6ನೇ ಅಡ್ಡರಸ್ತೆಯಲ್ಲಿ ನೆಲೆಸಿದ್ದ ಮದನ್ ತಾಯಿ ಗೆಳತಿ ಐಮಾವತಿ ಅವರ ಪರಿಚಯ ಮದನ್‌ಗೆ ಇತ್ತು. ಹೀಗಾಗಿ ಮನೆಗೆ ಬೀಗ ಹಾಕಿಕೊಂಡು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಅವರು ವಾಯು ವಿಹಾರಕ್ಕೆ ಹೋಗುವ ಸಂಗತಿ ತಿಳಿದ ಮದನ್‌, ಆ ಸಮಯದಲ್ಲಿ ಅವರ ಮನೆಗೆ ಕನ್ನ ಹಾಕಲು ಯೋಜಿಸಿದ್ದ. ಅಂತೆಯೇ ಜ.17ರಂದು ಐಮಾವತಿ ಅವರು ವಾಯು ವಿಹಾರಕ್ಕೆ ತೆರಳಿದ ಬಳಿಕ ಮರ ಕತ್ತರಿಸುವ ಯಂತ್ರದಿಂದ ಮನೆ ಬಾಗಿಲು ಕೊರೆದು ಒಳಗೆ ಹೋಗಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ಬೆಳಗಾವಿ ಡಬಲ್ ಮರ್ಡರ್: ಮದುವೆಯಾಗಿ 30 ದಿನಕ್ಕೆ ಓಡಿಹೋದ ಹೆಂಡ್ತಿಯನ್ನು ಪ್ರಿಯಕರನೊಂದಿಗೆ ಕೊಲೆಗೈದ ಗಂಡ

ತನ್ನ ಗುರುತು ಪೊಲೀಸರಿಗೆ ಸಿಗದಂತೆ ಎಚ್ಚರವಹಿಸಿದ್ದ ಆರೋಪಿ, ಕೈಗವಸು ಹಾಕಿಕೊಂಡು ಮನೆಯಲ್ಲಿ ವಸ್ತುಗಳನ್ನು ಮುಟ್ಟಿದ್ದ. ಕೃತ್ಯ ಎಸಗಿದ ಆ ಮನೆಯ ಸಿಸಿಟಿವಿ ಡಿವಿಆರನ್ನೂ ಕದ್ದಿದ್ದ. ಶ್ವಾನದಳವು ಹೆಜ್ಜೆ ಗುರುತು ಪತ್ತೆ ಹಚ್ಚಬಾರದು ಎಂದು ಆ ಮನೆ ತುಂಬಾ ಖಾರದ ಪುಡಿ ಚೆಲ್ಲಾಡಿ ಆತ ಕಾಲ್ಕಿತ್ತಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ನಗರದಲ್ಲಿ 14 ವರ್ಷಗಳ ಬಳಿಕ ಖಾರದ ಪುಡಿ ಎರಚಿ ಕಳ್ಳತನ ನಡೆದಿರುವ ಹಿಂದೆ ವೃತ್ತಿಪರ ಖದೀಮನ ಕೈವಾಡವಿರಬಹುದು ಎಂದು ಶಂಕಿಸಿದರು. ಆದರೆ ಘಟನಾ ಸ್ಥಳದ ಸಮೀಪ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮದನ್‌ ಜಾಡು ಲಭಿಸಿತು.