ಗ್ರೆನೇಡ್ ಪ್ರಕರಣದಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಅರ್ಷಾದ್ ಖಾನ್‌ನನ್ನು ಎನ್‌ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ನ್ಯಾಯಾಲಯದ ವಾರೆಂಟ್ ಮೇರೆಗೆ ಕಾರ್ಯಾಚರಣೆ ನಡೆಸಿದ ಎನ್‌ಐಎ, ಆರೋಪಿಯನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬೆಂಗಳೂರು (ಫೆ.21): ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಅರ್ಷಾದ್ ಖಾನ್‌ನನ್ನು ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಗ್ರೆನೇಡ್ ಪ್ರಕರಣದ ಕಿಂಗ್‌ಪಿನ್ ಶಂಕಿತ ಉಗ್ರ

ಬಂಧಿತ ಆರೋಪಿ ಅರ್ಷಾದ್ ಖಾನ್ ಈ ಹಿಂದೆ ಬೆಂಗಳೂರು ಸಿಸಿಬಿ(CCB) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ನಗರದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಮತ್ತು ಗ್ರೆನೇಡ್‌ಗಳನ್ನು ಹೊಂದಿದ್ದ ಗಂಭೀರ ಆರೋಪದ ಮೇಲೆ ಈತನನ್ನು ಬಂಧಿಸಲಾಗಿತ್ತು. ಪ್ರಕರಣದ ತೀವ್ರತೆಯನ್ನು ಪರಿಗಣಿಸಿ, ತನಿಖೆಯನ್ನು ನಂತರ ಎನ್ಐಎ (NIA) ಗೆ ವರ್ಗಾಯಿಸಲಾಗಿತ್ತು.

ಜಾಮೀನು ಪಡೆದು ನಾಪತ್ತೆಯಾಗಿದ್ದ ಆರೋಪಿ!

ಗ್ರೆನೇಡ್ ಪ್ರಕರಣದಲ್ಲಿ ಜೈಲು ಸೇರಿದ್ದ ಅರ್ಷಾದ್ ಖಾನ್, ಕೆಲವು ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ಆದರೆ, ಬೇಲ್ ಸಿಕ್ಕ ನಂತರ ನಿಯಮದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಎನ್ಐಎ ಅಧಿಕಾರಿಗಳು ಸತತ ಹುಡುಕಾಟ ನಡೆಸುತ್ತಿದ್ದರು.

ಇದನ್ನೂ ಓದಿ: Delhi High Alert: ಕೆಂಪು ಕೋಟೆ ಬಳಿಯ ದೇವಸ್ಥಾನ ಗುರಿಯಾಗಿಸಿ ಉಗ್ರರ ದಾಳಿ ಸಾಧ್ಯತೆ, ದೆಹಲಿ ಪೊಲೀಸರು ಹೈಅಲರ್ಟ್!

ನ್ಯಾಯಾಲಯದ ವಾರೆಂಟ್; ಎನ್ಐಎ ಬಲೆಗೆ ಶಂಕಿತ

ಸತತವಾಗಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ, ಎನ್ಐಎ ವಿಶೇಷ ನ್ಯಾಯಾಲಯವು ಅರ್ಷಾದ್ ಖಾನ್ ವಿರುದ್ಧ ವಾರೆಂಟ್ ಮತ್ತು ಪ್ರಕ್ಲೊಮೇಷನ್ (ಘೋಷಿತ ಅಪರಾಧಿ) ಆದೇಶ ಹೊರಡಿಸಿತ್ತು. ನ್ಯಾಯಾಲಯದ ಈ ಕಠಿಣ ಆದೇಶದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಎನ್ಐಎ ತಂಡ, ಇಂದು ಆತನನ್ನು ಬಂಧಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಅಧಿಕಾರಿಗಳು

ಬಂಧಿತ ಶಂಕಿತ ಉಗ್ರನನ್ನು ಎನ್ಐಎ ಅಧಿಕಾರಿಗಳು ಇಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಲೆಮರೆಸಿಕೊಂಡ ಅವಧಿಯಲ್ಲಿ ಈತ ಯಾರ ಸಂಪರ್ಕದಲ್ಲಿದ್ದ ಮತ್ತು ಮತ್ತೆ ಯಾವುದಾದರೂ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದನೇ ಎಂಬ ಬಗ್ಗೆ ಅಧಿಕಾರಿಗಳು ಈಗ ತನಿಖೆ ಚುರುಕುಗೊಳಿಸಿದ್ದಾರೆ.

YouTube video player