ಪತಿ ಸುದರ್ಶನ್‌ ರೆಡ್ಡಿ ಹಾಗೂ ಆತನ ತಾಯಿ ವರದಕ್ಷಿಣೆ ಕಿರಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣಪತ್ರ ಬರೆದ ಪಲ್ಲವಿ

ಬೆಂಗಳೂರು(ಮೇ.20): ವರದಕ್ಷಿಣೆ ಕಿರಕುಳ ತಾಳಲಾರದೆ ಮಹಿಳಾ ಟೆಕ್ಕಿಯೊಬ್ಬರು ಮರಣಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆಂಪಾಪುರದ ನಿವಾಸಿ ಪಲ್ಲವಿ (24) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಬುಧವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಸುದರ್ಶನ್‌ ರೆಡ್ಡಿ ಹಾಗೂ ಆತನ ತಾಯಿ ವರದಕ್ಷಿಣೆ ಕಿರಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೌಟುಂಬಿಕ ಕಲಹ ವಿಚಾರ ದೂರು ಪಡೆಯದ ಪೊಲೀಸರು, ಮನನೊಂದು ಅಂಗವಿಕಲ ಆತ್ಮಹತ್ಯೆ

ಆಂಧ್ರಪ್ರದೇಶ ಮೂಲದ ಪಲ್ಲವಿ ಹಾಗೂ ಸುದರ್ಶನ್‌ ರೆಡ್ಡಿ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಹೆಬ್ಬಾಳ ಕೆಂಪಾಪುರದ ಆಪಾರ್ಟ್‌ಮೆಂಟ್‌ವೊಂದರಲ್ಲಿ ದಂಪತಿ ನೆಲೆಸಿದ್ದರು. ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುದರ್ಶನ್‌ ರೆಡ್ಡಿ ಮತ್ತು ಆತನ ತಾಯಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪಲ್ಲವಿಗೆ ಕಾಟ ನೀಡುತ್ತಿದ್ದರು. ಪ್ರತಿ ತಿಂಗಳ ಸಂಬಳವನ್ನು ನಮಗೆ ಕೊಡಬೇಕು ಎಂದು ಕಿರಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.