* ಯುವತಿ ಸಾವಿನ ಸುತ್ತ ಅನುಮಾನದ ಹುತ್ತ * ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ? * ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದಲ್ಲಿ ಯುವತಿ ನಿಗೂಢ ಸಾವು

ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ‌ ಚಾಮರಾಜನಗರ

ಚಾಮರಾಜನಗರ, (ಏ.28):
ಚಾಮರಾಜನಗರ ತಾಲೋಕಿನ ಕಾಗಲವಾಡಿಮೋಳೆ ಗ್ರಾಮದಲ್ಲಿ ಯುವತಿಯೊಬ್ಬಳು ನಿಗೂಢ ವಾಗಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಯುವತಿಯ ಶವವನ್ನು ಹೂಳದೆ ಸುಟ್ಟುಹಾಕಿರುವುದರಿಂದ ಇದು ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಗ್ರಾಮದ ಸುಮಿತ್ರಾ ಎಂಬ ಯುವತಿ ಅದೇ ಗ್ರಾಮದ ಸೋಮೇಶ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದಕ್ಕೆ ಯುವತಿ ಮನೆಯವರ ವಿರೋಧವಿದ್ದು, ಕಳೆದ ವಾರ ಯುವತಿ ಸುಮಿತ್ರ ನಿಗೂಢ ಸಾವನಪ್ಪಿದ್ದಾಳೆ. ಇನ್ನೊಂದೆಡೆ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಸೋಮೇಶ್‌ಗೆ ಗ್ರಾಮಸ್ಥರು 4 ಲಕ್ಷ ರೂಪಾಯಿ ದಂಡ ಹಾಕಿದ್ದು ಇದರಿಂದ ಬೇಸತ್ತ ಯುವಕ ಸೋಮೇಶ್ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಈ ಬಗ್ಗೆಯು ಪೊಲೀಸರಿಗೆ ವಿಷಯ ತಿಳಿಸದೆ ಈತನನ್ನು ಚಾಮರಾಜನಗರ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.

ಬಾಡೂಟಕ್ಕೆ ಹೋದವನ ಬರ್ಬರ ಹತ್ಯೆ, ಜಿಮ್ ಬಾಡಿಗೆ ಚಾಕುವಿನಿಂದ ಚುಚ್ಚಿ ಕೊಲೆ

ಗ್ರಾಮದ ಕಟ್ಟುಪಾಡುಗಳಿಗೆ ಹೆದರಿ ಯುವಕ ಹಾಗು ಆತನ ಪೋಷಕರು ಸತ್ಯ ಬಾಯಿ ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದಲ್ಲಿ ಮುಖಂಡರು ತಮ್ಮದೇ ನ್ಯಾಯಪಂಚಾಯ್ತಿ ನಡೆಸಿ ಇಡೀ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಪೊಲೀಸ್ ಅಧಿಕಾರಿ ಗಳು ಗೊತ್ತಿಲ್ವ ಎನ್ನುತ್ತಿದ್ದಾರೆ ಮಾಧ್ಯಮ ದವರು ತಿಳಿಸಿದ ಮೇಲೆ ಯುವತಿ ಸಾವಿನ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ಯುವತಿ ಸಾವಿನ ಘಟನೆ ಮರೆಮಾಚಿ, ಸಾಕ್ಷ್ಯ ನಾಶ ಮಾಡಿದ ಆರೋಪ ಮೇರೆಗೆ ಯುವತಿಯ ಪೋಷಕರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಘಟನೆ ಬಗ್ಗೆ ಚಾಮರಾಜನಗರ ಎಸ್ಪಿ ಶಿವಕುಮಾರ್ ತಿಳಿಸಿದ್ದಾರೆ.

ನಮಗೆ ಬಂದ ಮಾಹಿತಿ ಪ್ರಕಾರ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಮರ್ಯಾದೆ ಹತ್ಯೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ
ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಗೊತ್ತಿಲ್ಲ, ಯಾವುದೇ ದೂರು ಬಂದಿಲ್ಲ ದೂರು ಬಂದರೆ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ...