ಮಂಗಳೂರು ಸ್ಫೋಟದ ಸ್ಥಳದಲ್ಲಿ ರೈಲ್ವೇ ಇಲಾಖೆಯ ನೌಕರನ ಆಧಾರ್‌ ಕಾರ್ಡ್‌ ಪತ್ತೆ. ರೈಲ್ವೇ ಇಲಾಖೆಯ ಪ್ರೇಮ್‌ ರಾಜ್‌ ಎಂಬುವರ ಆಧಾರ್‌ ಕಾರ್ಡ್‌ ಬಳಸಿದರಾ ಆಗುಂತಕರು?

ತುಮಕೂರು (ನ.20) : ಮಂಗಳೂರು ಆಟೋ ಸ್ಫೋಟ ಪ್ರಕರಣದಲ್ಲಿ ರೈಲ್ವೇ ಇಲಾಖೆಯ ನೌಕರನ ಆಧಾರ್‌ ಕಾರ್ಡ್‌ ಬಳಸಿಕೊಂಡಿರುವುದು ಪತ್ತೆಯಾಗಿದೆ. ರೈಲ್ವೇ ಇಲಾಖೆ ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ನೌಕರ ಪ್ರೇಮ್‌ ರಾಜ್‌ ಹುಟಗಿಯ ಆಧಾರ್‌ ಕಾರ್ಡ್‌ ಸ್ಫೋಟದ ಜಾಗದಲ್ಲಿ ಪತ್ತೆಯಾಗಿದೆ.

ಹುಬ್ಬಳ್ಳಿ ಮೂಲದ ಪ್ರೇಮ್‌ ರಾಜ್‌ ಹುಟಗಿ ಕಳೆದ ಮೂರು ವರ್ಷದಿಂದ ರೈಲ್ವೇ ಇಲಾಖೆಯಲ್ಲಿ ಟ್ರ್ಯಾಕ್‌ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರೇಮ್‌ ರಾಜ್‌ ಹುಟಗಿ ಕಳೆದ ಒಂದೂವರೆ ವರ್ಷದಲ್ಲಿ ಎರಡು ಬಾರಿ ಆಧಾರ್‌ ಕಾರ್ಡ್‌ ಕಳೆದುಕೊಂಡಿದ್ದಾರೆ. ಪರೀಕ್ಷೆ ಬರೆಯುವ ಸಲುವಾಗಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುವಾಗ ಹಾಗೂ ಹುಬ್ಬಳ್ಳಿಯಿಂದ ಹಾವೇರಿಗೆ ಹೋಗುವ ಮತ್ತೊಂದು ಬಾರಿ ಆಧಾರ್‌ ಕಾರ್ಡ್‌ ಕಳೆದುಕೊಂಡಿದ್ದಾರೆ. 

ಮಂಗಳೂರು ಸ್ಫೋಟ ಭಯೋತ್ಪಾದನಾ ಕೃತ್ಯ: ಡಿಜಿಪಿ ಪ್ರವೀಣ್‌ ಸೂದ್‌ ಸ್ಪಷ್ಟನೆ

ಹೀಗೇ ಕಳೆದುಕೊಂಡಿರುವ ಆಧಾರ್‌ ಕಾರ್ಡ್‌ ಸ್ಫೋಟದ ಸ್ಥಳದಲ್ಲಿ ಪತ್ತೆಯಾಗಿದೆ. ಇನ್ನೊಂದೆಡೆ ಆಧಾರ್‌ ಕಾರ್ಡ್‌ ಕಳೆದುಕೊಂಡ ಪ್ರೇಮ್‌ ರಾಜ್‌ ಹೊಸ ಆಧಾರ್‌ ಕಾರ್ಡ್‌ ಅನ್ನು ಡೌನ್‌ ಲೌಡ್‌ ಮಾಡಿಕೊಂಡಿದ್ದಾರೆ. ಬೆಳಗ್ಗೆ ಪೊಲೀಸರು ಕರೆ ಮಾಡಿ ತಿಳಿಸಿದಾಗ ಪ್ರೇಮ್‌ ರಾಜ್‌ ಹುಟಗಿಗೆ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ತನ್ನ ಆಧಾರ್‌ ಕಾರ್ಡ್‌ ಪತ್ತೆಯಾಗಿರುವುದು ಗೊತ್ತಾಗಿದೆ. ಅಲ್ಲದೆ ಎಡಿಜಿಪಿ ಅಲೋಕ್‌ ಕುಮಾರ್‌ ಪ್ರೇಮ್‌ ರಾಜ್‌ ಹುಟಗಿಗೆ ಕರೆ ಮಾಡಿ ತುಮಕೂರು ಪೊಲೀಸ್‌ ವರಿಷ್ಠಾಧೀಕಾರಿಯನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ. ಹೀಗಾಗಿ ಎಸ್ಪಿ ಕಚೇರಿಗೆ ಪ್ರೇಮ್‌ ಕುಮಾರ್‌ ಆಗಮಿಸಿ ಎಸ್ಪಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌ ಅವರನ್ನು ಭೇಟಿ ಮಾಡಿದ್ದಾರೆ.