*  ಬೆಂಗಳೂರಿನ ಯಡವನಹಳ್ಳಿ ದಿಣ್ಣೆಯ ಅಬ್ಬಯ್ಯನ ಪಾಳ್ಯದಲ್ಲಿ ನಡೆದ ಘಟನೆ*  ಲಾವಣ್ಯ ಹಾಗೂ ಪತಿ ಸಂಪತ್‌ ಕುಮಾರ್‌ ಮೃತಪಟ್ಟ ದುರ್ದೈವಿಗಳು*  ಈ ಸಂಬಂಧ ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು  

ಆನೇಕಲ್‌(ಮಾ.22):  ಪತ್ನಿಯ ಮೇಲೆ ಅನುಮಾನಗೊಂಡ ಪತಿಯೋರ್ವ ನಿದ್ದೆಯಲ್ಲಿದ್ದ ಪತ್ನಿಯ ಕತ್ತು ಕುಯ್ದು ಕೊಲೆ(Murder) ಮಾಡಿ ನಂತರ, ಅದೇ ಕತ್ತಿಯಲ್ಲಿ ತನ್ನ ಕತ್ತನ್ನು ಸೀಳಿಕೊಂಡು ಸಾವನ್ನಪ್ಪಿದ ದಾರುಣ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಯಡವನಹಳ್ಳಿ ದಿಣ್ಣೆಯ ಅಬ್ಬಯ್ಯನ ಪಾಳ್ಯದಲ್ಲಿ ನಡೆದಿದೆ.

ಕೈವಾರ ಮೂಲದ ಲಾವಣ್ಯ(30) ಹಾಗೂ ಪತಿ ಸಂಪತ್‌ ಕುಮಾರ್‌(38) ಮೃತರು. ಮಕ್ಕಳಾದ ಭಾರ್ಗವ ಮತ್ತು ಅರ್ಜುನನ ಆರ್ತನಾದ ಕೇಳಿ ನೆರೆ ಹೊರೆಯವರು ಧಾವಿಸಿ, ಮೋರಿಯಲ್ಲಿ ಬಿದ್ದಿದ್ದ ಸಂಪತ್‌ ಕುಮಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ, ವಿಪರೀತ ರಕ್ತ ಸ್ರಾವವಾಗಿ ಆತ ಕೊನೆಯುರೆಳೆದ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಮದುವೆಯಾಗದ ಚಿಂತೆ: ವಿಷ ಕುಡಿದು ಯುವಕ ಆತ್ಮಹತ್ಯೆ

12 ವರ್ಷಗಳ ಹಿಂದೆ ಹಿರಿಯರ ಒಪ್ಪಿಗೆಯಂತೆ ಮದುವೆಯಾಗಿದ್ದ ಸಂಪತ್‌ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಸ್ನೀಝರ್‌ ಎಲೆಕ್ಟ್ರಿಕ್‌ ಕಂಪನಿಯಲ್ಲಿ ಕಾರ್ಮಿಕನಾಗಿದ್ದ. ಕಳೆದ ಹತ್ತು ದಿನಗಳಿಂದ ಪತ್ನಿಯ ಶೀಲ ಶಂಕಿಸಿ ಕುಡಿದು ಬಂದು ಜಗಳ ನಡೆಸುತ್ತಿದ್ದ. ಲಾವಣ್ಯಳ ತಂದೆ ಕೈವಾರ ಕೃಷ್ಣಪ್ಪ ಅತ್ತಿಬೆಲೆ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಡಿಕೇರಿ: ಮನೆ ಗ್ಯಾಸ್‌ ಆನ್‌ ಮಾಡಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಕುಟುಂಬ

ಮಡಿಕೇರಿ(Madikeri): ನಗರದಲ್ಲಿ ಕಲಾವಿದನ ಕುಟುಂಬದಿಂದ ಆತ್ಮಹತ್ಯೆ(Suicide) ಹೈಡ್ರಾಮಾ ನಡೆದಿದ್ದು, ಮನೆಯ ಗ್ಯಾಸ್‌ ಸಿಲಿಂಡರ್‌ ಆನ್‌ ಮಾಡಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬ ಬೆದರಿಕೆ(Threat) ಹಾಕಿದ ಘಟನೆ ಸೋಮವಾರ ನಡೆದಿದೆ.

ಚಿತ್ರಕಲಾವಿದ ಸಂದೀಪ್‌ ವಿರುದ್ಧ ಅಕ್ರಮ ಮನೆ ನಿರ್ಮಾಣದ ಆರೋಪ ಇತ್ತು. ನಗರಸಭೆ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಅಕ್ರಮ ಸಕ್ರಮದ ಅಡಿಯಲ್ಲಿ ಮನೆ ಸಕ್ರಮಕ್ಕೆ ಅರ್ಜಿ ಕೂಡ ಹಾಕಲಾಗಿತ್ತು. ಈ ನಡುವೆ ಸಂದೀಪ್‌, ನಗರಸಭೆ ವಿರುದ್ಧ ವ್ಯಂಗ್ಯ ಚಿತ್ರ ಪ್ರಕಟಿಸಿದ್ದರು. ಈ ಸಂಬಂಧ ಸಂದೀಪ್‌ ವಿರುದ್ಧ ಮಡಿಕೇರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಎಲ್ಲ ಬೆಳವಣಿಗೆಯ ನಡುವೆ ನಗರಸಭೆ ಆಯುಕ್ತ ರಾಮದಾಸ್‌, ಜೆಸಿಬಿ ತಂದು ಮನೆ ಒಡೆಯಲು ಮುಂದಾಗಿದ್ದರು. ಈ ವೇಳೆ ಸಂದೀಪ್‌ ಕುಟುಂಬ ಆತ್ಮಹತ್ಯೆ ಬೆದರಿಕೆ ಹಾಕಿದ್ದು, ಮನೆ ಗ್ಯಾಸ್‌ ಆನ್‌ ಮಾಡಿ ಬೆಂಕಿಪೆಟ್ಟಿಗೆ ಹಿಡಿದು ಬೆದರಿಕೆಯೊಡ್ಡಿದ್ದಾರೆ. ಮಡಿಕೇರಿ ನಗರದ ಚೈನ್‌ಗೇಟ್‌ ಬಳಿ ಘಟನೆ ನಡೆದಿದ್ದು, ಕುಟುಂಬಸ್ಥರ ಬೆದರಿಕೆ ಹಿನ್ನೆಲೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವಾಪಾಸಾಗಿದ್ದಾರೆ.

ಯುವಕ ಆತ್ಮಹತ್ಯೆ

ಬಂಟ್ವಾಳ(Bantwal): ವಿಟ್ಲ ಮೂಡ್ನೂರು ಉಜಿರೆಮಾರು ಎಂಬಲ್ಲಿ ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾರೆ ಕೆಲಸ ಮಾಡಿಕೊಂಡಿದ್ದ ದೀಪಕ್‌ ಕುಮಾರ್‌ (20) ಮೃತ ಯುವಕ. ಈ ಕುರಿತು ಯುವಕನ ತಂದೆ ಬಾಲಕೃಷ್ಣ ಎಂಬವರು ವಿಟ್ಲ ಠಾಣೆಗೆ ದೂರು ನೀಡಿದ್ದು, ಮನೆಯ ಎದುರುಗಡೆ ಇರುವ ಗೇರು ಮರದ ಕೊಂಬೆಗೆ ನೇನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

5ನೇ ಮಹಡಿಯಿಂದ ಬಿದ್ದು ನಿರ್ದೇಶಕನ ಪುತ್ರ ಸಾವು; ಆಕಸ್ಮಿಕವಲ್ಲ ಆತ್ಮಹತ್ಯೆ ಎಂದ ಪೊಲೀಸ್

ಹೆಸ್ಕಾಂ ಉದ್ಯೋಗಿ ಆತ್ಮಹತ್ಯೆ

ಗುತ್ತಲ: ವಿವರ್‌(ಯಕೃತ) ಸಮಸ್ಯೆಯಿಂದ ಬಳಲುತ್ತಿದ್ದ ಹೆಸ್ಕಾಂನ ಉದ್ಯೋಗಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುತ್ತಲ ಸಮೀಪದ ಜಮೀನೊಂದರಲ್ಲಿ ಸೋಮವಾರ ಜರುಗಿದೆ. ಮೃತನನ್ನು ಪಟ್ಟಣದ ಚಿದಂಬರ ನಗರದ ನಿವಾಸಿ ಸಂಜೀವ ಅಪ್ಪಾಸಾಹೇಬ ಮಾನಸ(44) ಹೊಸರಿತ್ತಿ ಹೆಸ್ಕಾಂನಲ್ಲಿ(HESCOM) ಸ್ಟೇಶನ್‌ ಆಪರೇಟರ್‌ ಎಂದು ಗುರುತಿಸಲಾಗಿದೆ.

ಕಳೆದ ಅನೇಕ ವರ್ಷಗಳಿಂದ ಲೀವರ್‌ ಸಮಸ್ಯೆಯಿಂದ ಬಳಲುತ್ತಿದ್ದ ಸಂಜೀವ ಮಾನಸ ಹುಬ್ಬಳ್ಳಿ ಸೇರಿದಂತೆ ವಿವಿಧ ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೂ ನಿತ್ಯ ನೋವಿನಿಂದ ಬಳಲುತ್ತಿದ್ದರು. ಅನೇಕ ದಿನಗಳಿಂದ ನೋವು ಗುಣ ಮುಖವಾಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪತ್ನಿ ರಾಜೇಶ್ವರಿ ಮಾನಸ ದೂರಿನಲ್ಲಿ ದಾಖಲಿಸಿದ್ದಾರೆ. ಘಟನೆ ಕುರಿತು ಗುತ್ತಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.