Threat letter to Salman Khan updates: ಸಿದು ಮೂಸೆವಾಲಾ ಹತ್ಯೆ ಬಳಿಕ ಲಾರೆನ್ಸ್ ಬಿಷ್ನೋಯಿ ಜೈಲಿನಲ್ಲಿದ್ದರೂ ಎಲ್ಲರಲ್ಲೂ ಭಯ ಹುಟ್ಟಿಸಿದ್ದಾನೆ. ಈ ಹಿಂದೆ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಬಿಷ್ನೋಯಿ ಈಗ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಪತ್ರ ಕಳಿಸಿದ್ದಾನೆ ಎಂಬ ಅನುಮಾನದ ಮೇಲೆ ವಿಚಾರಣೆ ನಡೆಸಲಾಗಿದೆ. ಆದರೆ ಈ ಘಟನೆಗೂ ನನಗೂ ಸಂಬಂಧವಿಲ್ಲ ಎಂದು ಗ್ಯಾಂಗ್ಸ್ಟರ್ ಬಿಷ್ನೋಯಿ ಹೇಳಿದ್ದಾನೆ.
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಮತ್ತು ಅವರ ತಂದೆ ಸಲೀಂ ಖಾನ್ರನ್ನು (Saleem Khan) ಹತ್ಯೆಮಾಡುವುದಾಗಿ ಭಾನುವಾರ ಬೆದರಿಕೆ ಪತ್ರ ಬಂದಿತ್ತು (Threat to Salman Khan and Saleem Khan). ಇದರ ಬೆನ್ನಲ್ಲೇ ಮಾಹಾರಾಷ್ಟ್ರ ಪೊಲೀಸ್ ಇಲಾಖೆ (Maharashtra Police Department) ಸಲ್ಮಾನ್ ಖಾನ್ಗೆ ಹೆಚ್ಚಿನ ಭದ್ರತೆ ಒದಗಿಸಿದ್ದರು. ನಂತರ ಸಿಬಿಐ (Central Bureau of Investigation) ತಂಡ ಕೂಡ ಸಲ್ಮಾನ್ ಖಾನ್ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದರು. ಬೆದರಿಕೆಯ ಹಿಂದೆ ಸಿದು ಮೂಸೆವಾಲ ಹತ್ಯೆಯ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ನೋಯಿ ಇದ್ದಾನೆ ಎಂಬ ಅನುಮಾನಗಳಿದ್ದವು. ಆದರೆ ತಿಹಾರ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಬಿಷ್ನೋಯಿ, ತಮಗೂ ಬೆದರಿಕೆ ಪತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ಸಲ್ಮಾನ್ ಖಾನ್ಗೆ ಬೆದರಿಕೆ ನನ್ನ ಸಹಚರರು ಹಾಕಿಲ್ಲ ಎಂದಿದ್ದಾರೆ.
ಭಾನುವಾರ ಬೆಳಗಿನ ಜಾಗಿಂಗ್ ಮುಗಿಸಿ ಎಂದಿನಂತೆ ಬಾಂದ್ರಾದ ಬ್ಯಾಂಡ್ಸ್ಟ್ಯಾಂಡ್ನಲ್ಲಿ ಕುಳಿತಿದ್ದ ಸಲ್ಮಾನ್ ಖಾನ್ರಿಗೆ ಆಗಂತುಕನೊಬ್ಬ ಪತ್ರವೊಂದನ್ನು ಕೊಟ್ಟು ಹೋಗಿದ್ದ. ಅದರಲ್ಲಿ ನೀನು ಮತ್ತು ನಿನ್ನ ತಂದೆ ಇಬ್ಬರೂ ಸಿದು ಮೂಸೆವಾಲಾ ರೀತಿಯೇ ಸಾವನ್ನಪ್ಪುತ್ತೀರಿ ಎಂದು ಹತ್ಯೆ ಮಾಡುವ ಬೆದರಿಕೆ ಹಾಕಲಾಗಿತ್ತು. ಅದಾದ ನಂತರ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಿದು ಮೂಸೆವಾಲ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ನೋಯಿ ಹೊತ್ತುಕೊಂಡಿದ್ದಾನೆ. ಜತೆಗೆ ವಿಚಾರಣೆ ವೇಳೆ ಈ ಹಿಂದೆ ಸಲ್ಮಾನ್ ಖಾನ್ ಹತ್ಯೆಗೂ ಸ್ಕೆಚ್ ಹಾಕಿದ್ದಾಗಿ ಮತ್ತು ಶೂಟರ್ ಕಳಿಸಿದ್ದಾಗಿ ಬಿಷ್ನೋಯಿ ಹೇಳಿದ್ದ. ಅದಾದ ನಂತರ ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೊಂದು ಬೆದರಿಕೆ ಪತ್ರ ಬಂದಿರುವುದರಿಂದ ಸಾಮಾನ್ಯವಾಗಿ ಲಾರೆನ್ಸ್ ಬಿಷ್ನೋಯಿ ಗ್ಯಾಂಗ್ನ ಮೇಲೆ ಎಲ್ಲರ ಕಣ್ಣೂ ಬಿದ್ದಿವೆ.
ಇದನ್ನೂ ಓದಿ: Threat letter ಸಿಧು ಮೂಸೆವಾಲ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಹಾಗೂ ತಂದೆಗೆ ಬೆದರಿಕೆ ಪತ್ರ!
ಸಲ್ಮಾನ್ ಕೊಲೆಗೆ ಸ್ಕೆಚ್ ಹಾಕಿದ್ದ ಬಿಷ್ನೋಯಿ:
2018ರಲ್ಲಿ ಸಲ್ಮಾನ್ ಖಾನ್ ಹತ್ಯೆಗೆ ಲಾರೆನ್ಸ್ ಬಿಷ್ನೋಯಿ (Lawrence Bishnoi) ಪ್ರಯತ್ನಿಸಿದ್ದ ಎಂಬ ಮಾಹಿತಿಯನ್ನು ಬಿಷ್ನೋಯಿಯೇ ಸಿದು ಮೂಸೆವಾಲ ಹತ್ಯೆಯ (Sidhu Moosewala Assassination) ವಿಚಾರಣೆ ವೇಳೆ ಹೇಳಿದ್ದ. ಲಾರೆನ್ಸ್ ಬಿಷ್ನೋಯಿ ಸಲ್ಮಾನ್ ಖಾನ್ ಸುಪಾರಿಯನ್ನು ರಾಜಸ್ಥಾನದ ಗ್ಯಾಂಗ್ಸ್ಟರ್ ಸಂಪತ್ ನೆಹ್ರಾ ಎಂಬಾತನಿಗೆ ನೀಡಿದ್ದನಂತೆ. ಬಿಷ್ನೋಯಿ ಆದೇಶದ ಮೇರೆಗೆ ನೆಹ್ರಾ ಸಲ್ಮಾನ್ ಖಾನ್ರ ಬಾಂದ್ರ ಮನೆಯ ಸುತ್ತ ಕೆಲ ದಿನ ಹೊಂಚು ಹಾಕಿ ಕಾದಿದ್ದನಂತೆ. ಈ ಸ್ಫೋಟಕ ಮಾಹಿತಿ ಬಹಿರಂಗವಾಗಿ ವಾರ ಕಳೆಯುವ ಮೊದಲೇ ಮತ್ತೊಂದು ಬೆದರಿಕೆ ಪತ್ರ ಬಂದಿದ್ದನ್ನು ಮಹಾರಾಷ್ಟ್ರ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಕಾರಣಕ್ಕಾಗಿಯೇ ಸಲ್ಮಾನ್ ಖಾನ್ ಕುಟುಂಬಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಬಿಐ ಅಧಿಕಾರಿಗಳು ಕೂಡ ನಟನೊಂದಿಗೆ ಮಾತನಾಡಿದ್ದು, ಯಾರ ಮೇಲಾದರೂ ಸಂಶಯವಿದೆಯಾ ಎಂಬ ಬಗ್ಗೆ ವಿಚಾರಿಸಿದ್ದಾರೆ. ಯಾರಾದರೂ ಹಣ ಕೊಡುವಂತೆ ಇತ್ತೀಚೆಗೆ ಕರೆ ಮಾಡಿದ್ದರಾ ಎಂಬ ಬಗ್ಗೆಯೂ ಅಧಿಕಾರಿಗಳು ಸಲ್ಮಾನ್ ಖಾನ್ಗೆ ಕೇಳಿದ್ದಾರೆ.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಹತ್ಯೆ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಭದ್ರತೆ ಹೆಚ್ಚಳ
ಬಾಲಿವುಡ್ - ಅಂಡರ್ವಲ್ಡ್ ನಂಟು:
ಬಾಲಿವುಡ್ಗೂ ಅಂಡರ್ವಲ್ಡ್ಗೂ (Bollywood Underworld Relationship) ಬೇರೆಯದ್ದೇ ಆದ ಲಿಂಕ್ ಇದೆ. ಒಂದು ಕಾಲದಲ್ಲಿ ಬಾಲಿವುಡ್ ನಡೆಸುತ್ತಿದ್ದವರೇ ಅಂಡರ್ವಲ್ಡ್ನವರು ಎಂಬಷ್ಟು ಮಟ್ಟಿಗೆ ಬಾಲಿವುಡ್ ಭೂಗತ ಲೋಕಕ್ಕೆ ಅಂಟಿಕೊಂಡಿತ್ತು. ದಾವೂದ್ ಇಬ್ರಾಹಿಂ (Underworld Don Dawood Ibrahim) ತರದ ಭೂಗತ ಲೋಕದ ಡಾನ್ಗಳು ಬಾಲಿವುಡ್ ಚಿತ್ರಗಳ ಮೇಲೆ ಹಣ ಹೂಡಿಕೆ ಮಾಡುತ್ತಿದ್ದರು ಎಂಬ ವರದಿಗಳೂ ಸಾಕಷ್ಟು ಬಾರಿ ಕೇಳಿಬಂದಿವೆ. ಜತೆಗೆ, ಕೇಳಿದಾಗ ಹಣ ನೀಡದಿದ್ದರೆ ಕೊಲೆ ಬೆದರಿಕೆಯನ್ನೂ ಹಾಕಿದ ಪ್ರಕರಣಗಳು ಸಾಕಷ್ಟಿವೆ. ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
