ತುಮಕೂರಿನ ಕುಣಿಗಲ್‌ನಲ್ಲಿ, ಪತ್ನಿಯ ಅಕ್ರಮ ಸಂಬಂಧ ಮತ್ತು ಆಕೆ ಬೆಳೆಸಿದ ಅಕ್ಕನ ಮಗನ ನಂಬಿಕೆ ದ್ರೋಹದಿಂದ ನೊಂದ ವ್ಯಕ್ತಿಯೊಬ್ಬರು, ತಮ್ಮ ಇಬ್ಬರು ಮುದ್ದಾದ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಂಡ ಮನೆಗೆ ಕನ್ನ ಹಾಕಿದ ಈ ಘೋರ ದುರಂತವು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

ತುಮಕೂರು (ಮೇ.2): ಅದು ಒಂದು ಸುಂದರ ಸಂಸಾರ. ಇಬ್ಬರು ಮುದ್ದಾದ ಗಂಡು ಮಕ್ಕಳು. ಆದರೆ, ಅಕ್ಕನ ಮಗ ಅಂತಾ ಮನೆಯಲ್ಲಿಟ್ಕೊಂಡಿದ್ದಕ್ಕೆ ಸಂಸಾರ ಹಾಳುಮಾಡಿ ಕುಟುಂಬದ ಪಾಲಿಗೆ ಯಮನಾದ. ಉಂಡ ಮನೆಗೆ ಕನ್ನ ಹಾಕಿದ ಅಕ್ಕನ ಮಗನ ನಂಬಿಕೆ ದ್ರೋಹಕ್ಕೆ ತಂದೆ, ಇಬ್ಬರು ಮಕ್ಕಳು ಸೇರಿ ಮೂವರು ಬಲಿಯಾಗಿದ್ದಾರೆ. ತುಮಕೂರಿನ ಕುಣಿಗಲ್‌ನಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

ಘಟನೆ ಹಿನ್ನೆಲೆ ಏನು?

ಈ ದುರಂತ ಕಥೆ ಶುರುವಾಗೋದು ಶಿವಣ್ಣ ಎಂಬುವವರ ಉದಾರ ಗುಣದಿಂದ. ತನ್ನ ಅಕ್ಕ ಮೃತಪಟ್ಟ ಬಳಿಕ ಅನಾಥನಾಗಿದ್ದ ಅಕ್ಕನ ಮಗ ಹೇಮಂತನನ್ನು ಶಿವಣ್ಣ ಮಗನಂತೆ ಸಾಕಿ ಸಲಹಿದ್ದರು. ಆದರೆ, ಅದೇ ಹೇಮಂತ್ ದೊಡ್ಡವನಾಗಿ ತನಗೆ ಅನ್ನ ಹಾಕಿದ ಮಾವನ ಬೆನ್ನಿಗೆ ಚೂರಿ ಹಾಕಿದ್ದ. ಶಿವಣ್ಣನ ಪತ್ನಿ ಕಾವ್ಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ!

ಅಕ್ಕನ ಮಗನೇ ವಿಲನ್ ಆದ!

ಈ ವಿಚಾರ ತಿಳಿಯುತ್ತಿದ್ದಂತೆಯೇ ಶಿವಣ್ಣನಿಗೆ ಮುಗಿಲು ಮುರಿದುಬಿದ್ದಂತಾಯ್ತು, ಸಂಸಾರ, ಕುಟುಂಬದ ಬದುಕು ನರಕವಾಯಿತು. ನಂಬಿಕೆ ದ್ರೋಹದಿಂದ ಆಘಾತಕ್ಕೊಳಗಾಗಿ ಅಕ್ಕನ ಮಗನನ್ನು ಮನೆಯಿಂದ ಹೊರಹಾಕಿ, ಮನನೊಂದು ವಿಷ ಸೇವಿಸಿ ಶಿವಣ್ಣ ಆತ್ಮ೧ಹತ್ಯೆಗೂ ಯತ್ನಿಸಿದ್ದರು. ಆಗ ಗ್ರಾಮಸ್ಥರು ಮಧ್ಯಪ್ರವೇಶಿಸಿ ಪಂಚಾಯಿತಿ ಮಾಡಿ, 'ಇನ್ನಾದರೂ ಅನ್ಯೋನ್ಯವಾಗಿರಿ" ಎಂದು ಬುದ್ಧಿ ಹೇಳಿ ಗಂಡ-ಹೆಂಡತಿಯನ್ನು ಒಂದು ಮಾಡಿದ್ದರು.

ಕ್ಷಮೆ ಕೇಳಿ ಮನೆಗೆ ಬಂದವಳು ಚಿನ್ನಾಭರಣ ದೋಚಿದಳು!

ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಕಾವ್ಯ ತನ್ನ ಅಸಲಿ ರೂಪ ತೋರಿಸಿದ್ದಳು. ಕಳೆದ ಒಂದು ವಾರದ ಹಿಂದೆ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರ ಹೇಮಂತನ ಜೊತೆ ಓಡಿಹೋಗಿದ್ದಳು. ಈ ಬಗ್ಗೆ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ, ಪೊಲೀಸರ ಮುಂದೆ ಬಂದು ಕ್ಷಮೆ ಕೇಳಿ ನಾಟಕವಾಡಿ ಮತ್ತೆ ಮನೆಗೆ ಮರಳಿದ್ದಳು.

ಆದರೆ ಅವಳು ಮರಳಿ ಬಂದಿದ್ದು ಸಂಸಾರ ಮಾಡಲಿಕ್ಕಲ್ಲ, ದರೋಡೆ ಮಾಡಲಿಕ್ಕೆ! ಮನೆಗೆ ಬಂದ ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ನೋಡಿ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಮತ್ತೆ ಅದೇ ಹೇಮಂತನ ಜೊತೆ ಪರಾರಿಯಾಗಿದ್ದಳು. ಎಂಥ ಮೋಸಗಾತಿ!

ಪತ್ನಿಯ ಹಾದರ, ಅಕ್ಕನ ಮಗನ ದ್ರೋಹ, ಸಮಾಜದಲ್ಲಿ ಆದ ಅವಮಾನದಿಂದ ಶಿವಣ್ಣ ಸಂಪೂರ್ಣವಾಗಿ ಕುಸಿದುಹೋದರು. ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಎಂದು ನಿರ್ಧರಿಸಿದ ಅವರು, ನಿನ್ನೆ ರಾತ್ರಿ ಕ್ರೂರ ನಿರ್ಧಾರವೊಂದನ್ನು ತೆಗೆದುಕೊಂಡರು. ಮೊದಲು ತನ್ನ ಇಬ್ಬರು ಮುದ್ದಾದ ಗಂಡು ಮಕ್ಕಳನ್ನು ಕೈಯಾರೆ ಉಸಿರುಗಟ್ಟಿಸಿ ಸಾಯಿಸಿ, ನಂತರ ತಾವೂ ನೇಣು ಬಿಗಿದುಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಬೆಳಿಗ್ಗೆ ಅಕ್ಕಪಕ್ಕದವರು ನೋಡಿದಾಗ ಈ ಘೋರ ದುರಂತ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಕುಣಿಗಲ್ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಂಬಿದವರಿಂದಲೇ ವಂಚನೆಗೊಳಗಾದ ಶಿವಣ್ಣನ ಕಥೆ ಈಗ ದುರಂತ ಅಂತ್ಯವಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.