ಫೇಸ್‌ಬುಕ್‌ ಸ್ನೇಹಿತನ ಆಹ್ವಾನ ಮೇರೆಗೆ ಉತ್ತಮ ವೇತನದ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಬಿಹಾರ ಮೂಲದ 17 ವರ್ಷದ ಬಾಲಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಡಿ.20) : ಫೇಸ್‌ಬುಕ್‌ ಸ್ನೇಹಿತನ ಆಹ್ವಾನ ಮೇರೆಗೆ ಉತ್ತಮ ವೇತನದ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಬಿಹಾರ ಮೂಲದ 17 ವರ್ಷದ ಬಾಲಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಪಟ್ಟೇಗಾರಪಾಳ್ಯದ ಕನಕನಗರ ನಿವಾಸಿ ಎ.ಪ್ರಭಾತ್‌ (21), ಕುಣಿಗಲ್‌ ನಿವಾಸಿಗಳಾದ ಬಿ.ಕೆ.ರಂಗನಾಥ್‌ ಅಲಿಯಾಸ್‌ ಡಾಲಿ (19) ಹಾಗೂ ಬಿ.ಎಸ್‌.ಕುಶಾಲ್‌ (19) ಬಂಧಿತರು. ಆರೋಪಿಗಳು ಬಿಹಾರದಿಂದ ರೈಲಿನಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದ ಪ್ರವೀಣ್‌ ಕುಮಾರ್‌ (17) ಎಂಬಾತನನ್ನು ಡಿ.12ರಂದು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದರು.

 ಎಂಗೇಜ್‌ಮೆಂಟ್ ದಿನವೇ ಮನೆಗೆ ನುಗ್ಗಿ 100ಕ್ಕೂ ಹೆಚ್ಚು ಜನರಿಂದ ಮಹಿಳೆ ಕಿಡ್ನ್ಯಾಪ್‌..!

ಆರೋಪಿ ಪ್ರಭಾತ್‌ ಬಿಹಾರ ಮೂಲದವನಾಗಿದ್ದು, ಈತನ ಕುಟುಂಬ 25 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದೆ. ಪ್ರಭಾತ್‌ ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದಾನೆ. ಆರೋಪಿ ರಂಗನಾಥ್‌ ಕುಣಿಗಲ್‌ ಕಾಲೇಜಿನಲ್ಲಿ ಪಿಯು ಮಾಡಿದ್ದಾನೆ. ಇನ್ನು ಕುಶಾಲ್‌ ಎಸ್ಸೆಸ್ಸೆಎಲ್ಸಿ ಅರ್ಧಕ್ಕೆ ಮೊಟಕುಗೊಳಿಸಿ ಕೃಷಿ ಮಾಡಿಕೊಂಡಿದ್ದ. ಆರೋಪಿ ಪ್ರಭಾತ್‌ ಕಾಲೇಜಿಗೆ ಹೋಗುವಾಗ ಈ ಇಬ್ಬರು ಆರೋಪಿಗಳು ಪರಿಚಯವಾಗಿದ್ದರು.

ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್‌:

ಬಿಹಾರ ಮೂಲದ ಪ್ರವೀಣ್‌ ಎಸ್ಸೆಸ್ಸೆಎಲ್ಸಿ ಮಾಡಿದ್ದು, ಗುಜರಾತಿನ ಅಹಮದಾಬಾದ್‌ನ ಹೋಟೆಲ್‌ವೊಂದರಲ್ಲಿ ಕ್ಯಾಷಿಯರ್‌ ಆಗಿದ್ದ. ಇತ್ತೀಚೆಗೆ ಪ್ರಭಾತ್‌ ಹಾಗೂ ಪ್ರವೀಣ್‌ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ಬಿಹಾರದಲ್ಲಿ ಪ್ರವೀಣ್‌ ಪೋಷಕರು ಸ್ಥಿತಿವಂತರಾಗಿದ್ದು, ಕೃಷಿ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದಿದ್ದ ಪ್ರಭಾತ್‌, ಪ್ರವೀಣ್‌ನನ್ನು ಬೆಂಗಳೂರಿಗೆ ಕರೆಸಿ ಹಣ ಸುಲಿಗೆಗೆ ಯೋಜಿಸಿದ್ದ. ಈ ವಿಚಾರವನ್ನು ಸ್ನೇಹಿತರಾದ ರಂಗನಾಥ್‌ ಮತ್ತು ಕುಶಾಲ್‌ಗೂ ತಿಳಿಸಿದ್ದ.

ಉತ್ತಮ ಸಂಬಳದ ಕೆಲಸದ ಆಮಿಷ:

ಆರೋಪಿ ಪ್ರಭಾತ್‌, ಬೆಂಗಳೂರಿಗೆ ಬಂದಲ್ಲಿ ಕೈತುಂಬ ಸಂಬಳದ ಉತ್ತಮ ಕೆಲಸ ಕೊಡಿಸುವುದಾಗಿ ಪ್ರವೀಣ್‌ಗೆ ಹೇಳಿದ್ದ. ಈತನ ಮಾತು ನಂಬಿದ ಪ್ರವೀಣ್‌, ಪೋಷಕರಿಗೆ ತಿಳಿಸಿ ಡಿ.12ರ ರಾತ್ರಿ 7.30ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿದ್ದ. ಆರೋಪಿ ಪ್ರಭಾತ್‌, ಪ್ರವೀಣ್‌ನನ್ನು ರೈಲು ನಿಲ್ದಾಣದಿಂದ ಪಟ್ಟೇಗಾರಪಾಳ್ಯದ ರೂಮ್‌ಗೆ ಕರೆದೊಯ್ದು ಕೂಡಿ ಹಾಕಿದ್ದ. ಅಲ್ಲಿಗೆ ಸ್ನೇಹಿತರಾದ ರಂಗನಾಥ ಮತ್ತು ಕುಶಾಲ್‌ನನ್ನು ಕರೆಸಿಕೊಂಡಿದ್ದ. ಅಂದು ರಾತ್ರಿ ಪ್ರವೀಣ್‌ ತಂದೆ ಪ್ರವೀಣ್‌ಗೆ ಕರೆ ಮಾಡಿದಾಗ ಅಪಹರಣದ ವಿಚಾರ ತಿಳಿಸಿದ್ದ.

.2 ಲಕ್ಷಕ್ಕೆ ಡೀಲ್‌:

ಈ ವೇಳೆ ಪ್ರವೀಣ್‌ ತಂದೆಗೆ ಕರೆ ಮಾಡಿದ್ದ ಆರೋಪಿಗಳು .5 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ಮಾತುಕತೆ ನಡೆಸಿ ಅಂತಿಮವಾಗಿ .2 ಲಕ್ಷವನ್ನು ಫೋನ್‌ಪೇ ಮೂಲಕ ಕಳುಹಿಸಲು ಸೂಚಿಸಿದ್ದರು. ಅದರಂತೆ ಪ್ರವೀಣ್‌ ತಂದೆ, ಆರೋಪಿಗಳು ನೀಡಿದ್ದ ಮೊಬೈಲ್‌ ನಂಬರ್‌ಗೆ .40 ಸಾವಿರ ಹಾಕಿದ್ದರು. ಮತ್ತೆ ಕರೆ ಮಾಡಿರುವ ಆರೋಪಿಗಳು .60 ಸಾವಿರ ಫೋನ್‌ ಪೇ ಮಾಡದಿದ್ದರೆ ನಿಮ್ಮ ಮಗನ ಕೈ ಕತ್ತರಿಸುವುದಾಗಿ ಬೆದರಿಸಿದ್ದರು. ಇದರಿಂದ ಆತಂಕಗೊಂಡ ಪ್ರವೀಣ್‌ ತಂದೆ, ಬೆಂಗಳೂರಿಗೆ ಬಂದು ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಲಾಡ್ಜಲ್ಲಿ ಇರಿಸಿ ಹಲ್ಲೆ

ಪ್ರವೀಣ್‌ನನ್ನು ಪಟ್ಟೇಗಾರಪಾಳ್ಯದಿಂದ ದ್ವಿಚಕ್ರ ವಾಹನದಲ್ಲಿ ಕುಣಿಗಲ್‌ಗೆ ಕರೆದೊಯ್ದಿರುವ ಆರೋಪಿಗಳು, ಲಾಡ್ಜ್‌ನಲ್ಲಿ ಇರಿಸಿ ಹಲ್ಲೆ ನಡೆಸಿದ್ದರು. ಬಳಿಕ ತಂದೆಗೆ ಕರೆ ಮಾಡಿಸಿ ಹಣಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ದ್ವಿಚಕ್ರ ವಾಹನದಲ್ಲೇ ಕೂರಿಸಿಕೊಂಡು ನೆಲಮಂಗಲ, ಮಾಗಡಿ ಸೇರಿದಂತೆ ಬೆಂಗಳೂರು ಹೊರವಲಯದಲ್ಲಿ ಪ್ರವೀಣ್‌ನನ್ನು ಸುತ್ತಾಡಿಸಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು, ಮೊಬೈಲ್‌ ಕರೆಗಳ ಟವರ್‌ ಲೊಕೇಷನ್‌ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದ್ದಾರೆ.

Bengaluru Crime: ಟೆಕ್ಕಿಯ ಅಪಹರಿಸಿ 8 ಲಕ್ಷ ಸುಲಿದವರ ಸೆರೆ

ಹೋಟೆಲ್‌ನಲ್ಲಿ ಕೆಲಸದ ಆಮೀಷ

ಆರೋಪಿ ಪ್ರಭಾತ್‌, ಪ್ರವೀಣ್‌ನನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ಹೆಚ್ಚಿನ ವೇತನದ ಕೆಲಸದ ಆಮೀಷವೊಡ್ಡಿದ್ದ. ನಾನೇ ಬೆಂಗಳೂರಿನಲ್ಲಿ ಹೊಸ ಹೋಟೆಲ್‌ ಆರಂಭಿಸುತ್ತಿದ್ದೇನೆ. ಇಲ್ಲಿಗೆ ಕ್ಯಾಶಿಯರ್‌ ಕೆಲಸಕ್ಕೆ ಬಂದರೆ .13 ಸಾವಿರ ವೇತನ, ರೂಮ್‌ ನೀಡುವುದಾಗಿ ಹೇಳಿದ್ದ. .8 ಸಾವಿರ ವೇತನಕ್ಕೆ ಅಹಮದಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್‌, .5 ಸಾವಿರ ಹೆಚ್ಚುವರಿ ವೇತನದ ಆಸೆಗೆ ಬೆಂಗಳೂರಿಗೆ ಬಂದು ಆರೋಪಿಗಳ ಖೆಡ್ಡಾಕ್ಕೆ ಬಿದ್ದಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.