ಕ್ಯಾಮ್ಸ್ ಕಾರ್ಯದರ್ಶಿ ಮೇಲೆ ಹಲ್ಲೆ : ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ
- ಕರ್ನಾಟಕ ರಾಜ್ಯ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಕಾರ್ಯದರ್ಶಿ ಕೊಲೆ ಯತ್ನ
- ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ
- ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ
ಬೆಂಗಳೂರು (ಜು.30): ಕರ್ನಾಟಕ ರಾಜ್ಯ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಕಾರ್ಯದರ್ಶಿ ಡಿ. ಶಶಿಕುಮಾರ್ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ ಮಾಡಲಾಗಿದೆ.
ಗುರುವಾರ ತಡರಾತ್ರಿ ಜಾಲಹಳ್ಳು ಸಮೀಪದ ಶಶಿಕುಮಾರ್ ನಿವಾಸದ ಮುಂದೆ ಘಟನೆ ನಡೆದಿದೆ. ಈ ವೇಳೆ ಶಶಿಕುಮಾರ್ ಕೈ ಮತ್ತು ಕಾಲಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಂಧನೂರು: ಮನೆ ಮಾರಾಟ ವಿಚಾರ, ಸ್ವಂತ ಮಗನನ್ನೇ ಕೊಲೆಗೈದ ಪಾಪಿ ತಂದೆ
ಹೊಂಚು ಹಾಕಿ ಕೃತ್ಯ : ಶಶಿಕುಮಾರ್ ಜಾಲಹಲ್ಳಿ ಸಮೀಪ ತಮ್ಮ ಕುಟುಂಬದ ಜೊತೆ ನೆಲೆಸಿದ್ದಾರೆ. ಬಾಗಲುಹುಂಟೆಯಲ್ಲಿ ಖಾಸಗಿ ಶಾಲೆ ನಡೆಸುತ್ತಿದ್ದಾರೆ. ಇತ್ತೀಚೆಗೆ ರಜ್ಯ ಸರ್ಕಾರದ ಮಟ್ಟದಲ್ಲಿ ಖಾಸಗಿ ಶಾಲೆಗಳ ಪರವಾಗಿ ಶಶಿಕುಮಾರ್ ಹೋರಾಟ ನಡೆಸಿದ್ದರು. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಶಶಿಕುಮಾರ್ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಮರಳಿದ್ದಾರೆ. ಆಗ ಮನೆ ಮುಂದೆ ಕಾರು ನಿಲ್ಲಿಸಿ ಇಳಿಯುತ್ತಿದ್ದಂತೆ ಹಲ್ಲೆ ಮಾಡಲಾಗಿದೆ.
ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಶಶಿಕುಮಾರ್ ಮೇಲೆ ಲಾಂಗ್ ಬೀಸಿದ್ದಾರೆ. ಕೂಡಲೇ ಶಶಿಕುಮಾರ್ ಪಿಸ್ತೂಲ್ ತೆಗೆದಿದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.
ಭೂ ವಿವಾದ : ಶಿಕ್ಷಣ ಸಂಸ್ಥೆ ಜೊತೆ ರಿಯಲ್ ಎಸ್ಟೇಟ್ನಲ್ಲಿ ಕೂಡ ಶಶಿಕುಮಾರ್ ತೊಡಗಿದ್ದಾರೆ. ಭೂ ವ್ಯವಹಾರ ಸಂಬಂಧ ಕೆಲವರೊಂದಿಗೆ ಅವರಿಗೆ ವಿವಾದವಿತ್ತು. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರಬಹುದೆನ್ನಲಾಗಿದೆ.
ಶಶಿಕುಮಾರ್ ಹೇಳಿಕೆ : ಹಲ್ಲೆಗೆ ಯತ್ನಿಸಿದ್ದು ಯಾರು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಬೆದರಿಕೆ ಇದ್ದಿದ್ದು ನಿಜ. ಆರ್ ಟಿ ಐ, ಆರ್ ಟಿ ಇ. ಪೋಷಕರ ಸಂಘ, ಕೆಲ ಖಾಸಗಿ ಶಾಲ ಒಕ್ಕೂಟದ ಹೆಸರಿನಲ್ಲಿ ಬೆದರಿಕೆ ಈಗಲೂ ಇದೆ. ಇವತ್ತು ಏಕಾಏಕಿ ನಾಲ್ವರು ದುಷ್ಕರ್ಮಿಗಳಿಂದ ದಾಳಿ ನಡೆದಿದೆ. ಕತ್ತಲು ಇದ್ದಿದ್ದರಿಂದ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದರು.
ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಹೇಳಿಕೆ : ಜಾಲಹಳ್ಳಿ ವ್ಯಾಪ್ತಿಯ ಮುತ್ಯಾಲನಗರದ ಶಶಿಕುಮಾರ್ ಮನೆ ಬಳಿಯೇ ಹಲ್ಲೆ ನಡೆದಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರುವ ಶಂಕೆ ಇದೆ. ಆರ್.ಟಿ.ಐ ಕಾರ್ಯಕರ್ತರೊಬ್ಬರ ಜೊತೆ ಶಶಿಕುಮಾರ್ ವೈಷಮ್ಯ ಹೊಂದಿದ್ದರು. 2 ವರ್ಷಗಳ ಹಿಂದೆಯೂ ಶಶಿಕುಮಾರ್ ಹತ್ಯೆಗೆ ಸ್ಕೆಚ್ ಹಾಕಿದ್ದ ಬಗ್ಗೆ ಕೇಳಿ ಬಂದಿತ್ತು. ಸದ್ಯ ಮೂರು ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಗಳ ಪತ್ತೆ ಕಾರ್ಯ ಆಗಲಿದೆ ಎಂದರು.