ಕಲಬುರಗಿಯಲ್ಲಿ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರಿಂದ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಬೈಕ್‌ನಲ್ಲಿ ಡ್ರಾಪ್‌ ಮಾಡಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ರೀತಿಯ ಘಟನೆ ಬೆಂಗಳೂರಿನ ಬಿಡದಿಯಲ್ಲೂ ನಡೆದಿತ್ತು.

ಕಲಬುರಗಿ (ಜೂ.28): ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರಿಂದ ಪೊಲೀಸ್ ನೈತಿಕಗಿರಿ ಪ್ರಕರಣ ದಾಖಲಾಗಿದೆ. ಕಲಬುರಗಿ ನಗರದ ಸಂತ್ರಾಸವಾಡಿ ಪ್ರದೇಶದಲ್ಲಿ ಘಟನೆ ನಡೆದಿದೆ. ಎಂಬಿ ನಗರ ಠಾಣೆ ಪೊಲೀಸರಿಂದ ಆರು ಜನರನ್ನು ಈ ಪ್ರಕರಣದಲ್ಲಿ ಈವರೆಗೂ ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ಮೊಹಮದ್‌ ಸಲ್ಮಾನ್, ಮಹ್ಮದ್ ಆದಿಲ್, ಮಹ್ಮದ್ ರೆಹಾನ್, ಮಹ್ಮದ್ ಉಜೈರ್, ಮಹ್ಮದ್ ಫೈಜ್, ಮಹ್ಮದ್ ಆಸಿಫ್ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೆ ಕಾರಣವೇನು?: ಮುಸ್ಲಿಂ ಯುವಕರಿಂದ ಹಲ್ಲೆಗೆ ಒಳಗಾಗಿದ್ದ ಬೈಲಪ್ಪ ಎನ್ನುವ ವ್ಯಕ್ತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವರಿಗೆ ಬೈಕ್‌ ಅಲ್ಲಿ ಬೈಲಪ್ಪ ಡ್ರಾಪ್‌ ಮಾಡಿದ್ದ. ಈ ವೇಳೆ ಬೈಕ್ ಅಡ್ಡಗಟ್ಟಿ ಹದಿನೈದು ಜನರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಘಟನೆಯ ಬಗ್ಗೆ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹೆಡೆಮುರಿಕಟ್ಟಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

ಇದಕ್ಕೂ ಮುನ್ನ ಬೆಂಗಳೂರಿನ ಬಿಡದಿಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಬೈಕ್‌ನಲ್ಲಿ ಹೋಗುತ್ತಿದ್ದ ಅಪರಿಚಿತ ಯುವಕ-ಯುವತಿಯನ್ನು ಅಡ್ಡಗಟ್ಟಿ ನೈತಿಕ ಪೊಲೀಸ್‌ ಗಿರಿ ತೋರಿದ ಆರೋಪದ ಮೇಲೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿತ್ತು. ಮಂಡ್ಯ ಜಿಲ್ಲೆ ಮದ್ದೂರು ಮೂಲದ ಯಾಸಿನ್‌ ರಜಾಕ್‌, ರಾಮನಗರದ ಅಕ್ಮಲ್‌ ಪಾಷ ಮತ್ತು ಮುಕ್ಸುದ್‌ ಎಂಬುವರು ಬಂಧಿತ ಆರೋಪಿಗಳು.

ಬೆಂಗಳೂರು ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಯುವಕನೊಬ್ಬ ತನ್ನ ಹಿಂಬದಿಯಲ್ಲಿ ಬುರ್ಕಾ ಧರಿಸಿದ ಯುವತಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಬಿಡದಿಯ ಭೈರಮಂಗಲ ಕ್ರಾಸ್‌ ಸಮೀಪದದಲ್ಲಿ ಮೂವರು ಮುಸ್ಲಿಂ ಯುವಕರು ಬೈಕ್‌ ತಡೆದು ನಿಲ್ಲಿಸಿ ಯುವಕನಿಗೆ ಧಮಿಕಿ ಹಾಕಿದ್ದಲ್ಲದೆ ಯುವತಿಗೆ ನಾನಾ ಪ್ರಶ್ನೆಗಳನ್ನು ಕೇಳುವ ಮೂಲಕ ಯುವತಿಯನ್ನು ಸಾರ್ವಜನಿಕವಾಗಿ ಮಾನಹಾನಿ ಮಾಡುವ ರೀತಿಯಲ್ಲಿಪ್ರಯತ್ನಿಸಿರುವುದು ಕಂಡುಬಂದಿತ್ತು. ಈ ವಿಡಿಯೋವನ್ನು ಯಾಸಿನ್‌ ರಜಾಕ್‌ ಎಂಬಾತ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಕೂಡ ಮಾಡಿದ್ದ.

ಬೈಕ್‌ನಲ್ಲಿ ಹೋಗುತ್ತಿದ್ದ ಯುವಕ ಯುವತಿಯನ್ನು ತಡೆದು ಎಲ್ಲಿಗೆ ಹೋಗುತ್ತಿದ್ದೀರಿ? ಯಾವ ಊರು? ಏ.. ನಿಂತ್ಕೋ ಬೇಕು ಇಲ್ಲೆ.. ನಿನಗೂ ಇವನಿಗೂ ಏನು ಸಂಬಂಧ? ಬುರ್ಕಾ ತೊಟ್ಟು ಈ ಹುಡುಗನ ಜತೆ ಏಕೆ ಹೋಗುತ್ತಿರುವೆ? ನಿಮ್ಮಪ್ಪ ಯಾರು? ಅವರ ಫೋನ್‌ ನಂಬರ್‌ ಕೊಡು ? ಹೀಗೆ ಯುವತಿಗೆ ನಾನಾ ರೀತಿಯ ಪ್ರಶ್ನೆಗಳನ್ನು ಇವರುಗಳು ಕೇಳಿದ್ದರು ಎನ್ನಲಾಗಿದೆ.