ಹರಿಯಾಣದಲ್ಲಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರನ ಪತ್ನಿ ಮತ್ತು ಉತ್ತರಾಖಂಡದಲ್ಲಿ ಸರ್ಕಾರಿ ಶಿಕ್ಷಕಿಯೊಬ್ಬರು ತಮ್ಮ ವೈವಾಹಿಕ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೊದಲ ಪ್ರಕರಣದಲ್ಲಿ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ, ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಶೀಲು ಬಲ್ಹಾರ ಅವರ 23 ವರ್ಷದ ಪತ್ನಿ ಮುಸ್ಕಾನ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಅನಿರೀಕ್ಷಿತ ದುರಂತವು ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದ್ದು, ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ.

ತನಿಖೆಗೆ ಮುಂದಾದ ಪೊಲೀಸ್‌ರು!

ಮೃತ ಮುಸ್ಕಾನ್ ಅವರು ರೋಹ್ಟಕ್‌ನ ಮೆಹಮ್ ಪ್ರದೇಶದ ನಿವಾಸಿಯಾಗಿದ್ದು, ಡಿಸೆಂಬರ್ 2023 ರಲ್ಲಿ ಶೀಲು ಬಲ್ಹಾರ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ಜನಿಸಿದ ಹಾರ್ದಿಕ್ ಎಂಬ ಮುದ್ದಾದ ಗಂಡು ಮಗುವಿದೆ. ಶುಕ್ರವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು, ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಕುಟುಂಬದ ಸದಸ್ಯರು ಸಹ ಸ್ಥಳಕ್ಕೆ ಆಗಮಿಸಿದ್ದು, ಪ್ರಾಥಮಿಕ ತನಿಖೆಯ ಭಾಗವಾಗಿ ಕಬಡ್ಡಿ ಆಟಗಾರ ಶೀಲು ಬಲ್ಹಾರ ಅವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆ!

ಈ ಕಳವಳಕಾರಿ ಘಟನೆ ಮಾಸುವ ಮುನ್ನವೇ, ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಇದೇ ರೀತಿಯ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯ ಯುವ ಶಿಕ್ಷಕಿ ಸೃಷ್ಟಿ ಕಂದರಿ ತಮ್ಮ ವೈವಾಹಿಕ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸಾವಿನ ಹಿಂದೆ ವರದಕ್ಷಿಣೆ ಕಿರುಕುಳ ಮತ್ತು ಮೂಢನಂಬಿಕೆ ಕಾರಣವೆಂದು ಮೃತಳ ಕುಟುಂಬ ಗಂಭೀರ ಆರೋಪ ಮಾಡಿದೆ.

ಕುಟುಂಸ್ಥರ ದೂರೇನು?

ಮೃತ ಸೃಷ್ಟಿ ಅವರು ನವೆಂಬರ್ 2025 ರಲ್ಲಿ ಹರ್ರಾವಾಲಾದ ಸರ್ಕಾರಿ ಉದ್ಯೋಗಿ ಸೌರಭ್ ರಾಟೂರಿ ಅವರನ್ನು ವಿವಾಹವಾಗಿದ್ದರು. ಗರ್ವಾಲ್‌ನ ಶ್ರೀನಗರದಲ್ಲಿ ನೆಲೆಸಿರುವ ಸೃಷ್ಟಿ ಅವರ ಕುಟುಂಬಕ್ಕೆ, ತಾವು ಡೆಹ್ರಾಡೂನ್‌ಗೆ ಬಂದ ನಂತರವಷ್ಟೇ ಈ ದುರಂತದ ಸುದ್ದಿ ತಿಳಿದುಬಂದಿದೆ. ಜುಲೈ 28 ಮತ್ತು 29 ರಂದು ಸೃಷ್ಟಿಯನ್ನು ಫೋನ್ ಮೂಲಕ ಸಂಪರ್ಕಿಸಲು ಸಾಧ್ಯವಾಗದ ಕಾರಣ, ಕುಟುಂಬದವರು ಪರಿಚಯಸ್ಥರನ್ನು ಅವರ ಮನೆಗೆ ವಿಚಾರಿಸಲು ಕಳುಹಿಸಿದ್ದರು. ಆದರೆ ಅತ್ತೆ-ಮಾವಂದಿರು ಸೃಷ್ಟಿಯ ಸಾವಿನ ಬಗ್ಗೆ ತಮ್ಮ ಬಳಿ ಮುಚ್ಚಿಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಅಲ್ಲದೆ, ಪತಿಯ ಕುಟುಂಬದವರು ಕರೆ ಮಾಡಲು ತುಂಬಾ ಕಾರ್ಯನಿರತವಾಗಿದ್ದೇವೆ ಎಂದು ಸಬೂಬು ಹೇಳಿದ್ದರು ಎಂದು ಆರೋಪಿಸಲಾಗಿದೆ.

ಮೂಢನಂಬಿಕೆ ಹಾಗೂ ವರದಕ್ಷಿಣೆ ಕಿರುಕುಳದ ಆರೋಪ:

ಸೃಷ್ಟಿಯ ತಾಯಿ ಸೀಮಾ ಕಂದರಿ ಅವರ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ಮಗಳಿಗೆ ಮಾನಸಿಕ ಹಿಂಸೆ ಆರಂಭವಾಗಿತ್ತು. ವರದಕ್ಷಿಣೆ ಹಾಗೂ ಇತರೆ ಕ್ಷುಲ್ಲಕ ಕಾರಣಗಳಿಗಾಗಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ವಿಶೇಷವಾಗಿ, ಮದುವೆಯಾದ ಸುಮಾರು ಮೂರು ತಿಂಗಳ ಬಳಿಕ ಸೃಷ್ಟಿಯ ಮಾವನಿಗೆ ಹೃದಯಾಘಾತ ಸಂಭವಿಸಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ಪುರೋಹಿತರೊಬ್ಬರು ನವವಧುವಿನ ಆಗಮನದ ಬಳಿಕವೇ ಮನೆಯಲ್ಲಿ ದುರದೃಷ್ಟ ಶುರುವಾಗಿದೆ ಎಂದು ತಪ್ಪು ಸಂದೇಶ ನೀಡಿದ್ದರು ಎನ್ನಲಾಗಿದೆ.

ಕುಟುಂದಲ್ಲಿ ಆವರಿಸಿದ ಸ್ಮಶಾನ ಮೌನ!

ಅಂದಿನಿಂದ ಸೃಷ್ಟಿಯನ್ನು "ಮನ್ಹೂಸ್" (ದುಷ್ಟ ಶಕುನ) ಎಂದು ಕರೆಯುತ್ತಾ, ಮನೆಯಲ್ಲಿ ನಡೆಯುವ ಪ್ರತಿಯೊಂದು ಸಣ್ಣಪುಟ್ಟ ಪ್ರತಿಕೂಲ ಪರಿಸ್ಥಿತಿಗೂ ಆಕೆಯೇ ಕಾರಣವೆಂದು ಹೀಯಾಳಿಸಿ ಮಾನಸಿಕವಾಗಿ ಕುಗ್ಗಿಸಲಾಗುತ್ತಿತ್ತು ಎಂದು ತಾಯಿ ಕಣ್ಣೀರು ಹಾಕಿದ್ದಾರೆ. ಸಾಯುವ ಮುನ್ನ ಸೃಷ್ಟಿ ತನ್ನ ತಾಯಿಗೆ ವೀಡಿಯೊ ಸಂದೇಶವೊಂದನ್ನು ಕಳುಹಿಸಿದ್ದು, ತಾನು ಅನುಭವಿಸುತ್ತಿರುವ ಮಾನಸಿಕ ಯಾತನೆಯನ್ನು ಇನ್ನು ಮುಂದೆ ಭರಿಸಲು ಸಾಧ್ಯವಿಲ್ಲ ಎಂದು ನೋವು ತೋಡಿಕೊಂಡಿದ್ದರು.ಪಸ್ತುತ ಈ ಎರಡೂ ಪ್ರಕರಣಗಳು ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕೌಟುಂಬಿಕ ಹಿಂಸಾಚಾರದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ರೋಹ್ಟಕ್ ಮತ್ತು ಡೆಹ್ರಾಡೂನ್ ಪೊಲೀಸರು ಪ್ರತ್ಯೇಕ ತನಿಖೆಗಳನ್ನು ತೀವ್ರಗೊಳಿಸಿದ್ದು, ಸತ್ಯಾಂಶ ಹೊರಬರಬೇಕಿದೆ.