ಗುಜರಾತ್ನಲ್ಲಿ, ಪತ್ನಿಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು 12 ಅಡಿ ಆಳದಲ್ಲಿ ಹೂತು, ಎರಡು ವರ್ಷಗಳ ಕಾಲ ಗಂಡ ಆಸ್ಟ್ರೇಲಿಯಾದಲ್ಲಿದ್ದಾನೆ ಎಂದು ಎಲ್ಲರನ್ನೂ ನಂಬಿಸಿದ್ದಾಳೆ. ಅಂತಿಮವಾಗಿ, ಪೊಲೀಸರ ತನಿಖೆಯಿಂದ ಈ ಭಯಾನಕ ಸತ್ಯ ಬಯಲಾಗಿದೆ.
ಕ್ರೈಮ್ ಥ್ರಿಲ್ಲರ್ ಸಿನಿಮಾಗಳನ್ನೂ ಮೀರಿಸುವಂತಹ ಒಂದು ನಿಜ ಜೀವನದ ಕರಾಳ ಹಾಗೂ ಬೆಚ್ಚಿಬೀಳಿಸುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಪತ್ನಿಯೊಬ್ಬಳು, ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಆ ಗಂಡ ಎರಡು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಇಡೀ ಊರಿಗೆ ಹಾಗೂ ಸಂಬಂಧಿಕರಿಗೆ ನಂಬಿಸಿ ವಂಚಿಸಿರುವ ರೋಚಕ ಪ್ರಕರಣ ಈಗ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ!
ಗುಜರಾತ್ನ ಜಾಮ್ನಗರದ ನಿವಾಸಿಯಾದ ಜಿಗ್ನೇಶ್ ಹಾಗೂ ಪೃಥ್ವಿ ದಂಪತಿ. ಕಳೆದ ಕೆಲವು ವರ್ಷಗಳ ಹಿಂದೆ ಇವರ ವಿವಾಹವಾಗಿತ್ತು. ಆದರೆ, ಮದುವೆಗೂ ಮುಂಚೆಯೇ ಪೃಥ್ವಿಗೆ ನೀಲೇಶ್ ಎಂಬಾತನೊಂದಿಗೆ ಪ್ರೇಮ ಸಂಬಂಧವಿತ್ತು. ಮದುವೆಯ ಬಳಿಕವೂ ಈ ಅನೈತಿಕ ಸಂಬಂಧ ಮುಂದುವರಿದಿತ್ತು. ಈ ವಿಚಾರವಾಗಿ ಪತಿ ಜಿಗ್ನೇಶ್ ಹಾಗೂ ಪೃಥ್ವಿ ನಡುವೆ ಆಗಾಗ್ಗೆ ಕಲಹಗಳು ನಡೆಯುತ್ತಿರುತ್ತದೆ. ತಮ್ಮ ಈ ಅಕ್ರಮ ಸಂಬಂಧಕ್ಕೆ ಗಂಡ ಜಿಗ್ನೇಶ್ ದೊಡ್ಡ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಪೃಥ್ವಿ ಮತ್ತು ಆಕೆಯ ಪ್ರಿಯಕರ ನೀಲೇಶ್, ಆತನನ್ನು ಹೇಗಾದರೂ ಮಾಡಿ ದಾರಿಯಿಂದ ತೊಲಗಿಸಲು ಸಂಚು ರೂಪಿಸಿ ಈ ಕುಕೃತ್ಯ ಎಸೆಗಿದ್ದಾರೆ.
ವಿಷ ಪ್ರಾಶನ ಹಾಗೂ 12 ಅಡಿ ಆಳದಲ್ಲಿ ಮಣ್ಣು!
ಪೃಥ್ವಿ ಜಿಗ್ನೇಶ್ ಕುಡಿಯುವ ಮದ್ಯದಲ್ಲಿ ಮಾರಕ ವಿಷವನ್ನು ಬೆರೆಸಿ ನೀಡಿದ್ದಾಳೆ. ವಿಷ ಸೇವನೆಯಿಂದ ಜಿಗ್ನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಂಡನ ಮೃತದೇಹವನ್ನು ಏನು ಮಾಡುವುದೆಂದು ತಿಳಿಯದೆ, ಪ್ರಿಯಕರ ನೀಲೇಶ್ನ ಸಹಾಯದಿಂದ ಜಿಗ್ನೇಶ್ನ ಶವವನ್ನು ತಮ್ಮದೇ ಕಾರ್ಖಾನೆ ಆವರಣಕ್ಕೆ ರಹಸ್ಯವಾಗಿ ಸಾಗಿಸಿದ್ದಾರೆ. ಅಲ್ಲಿ ಸುಮಾರು 12 ಅಡಿ ಆಳದ ಬೃಹತ್ ಗುಂಡಿ ತೋಡಿ, ಶವವನ್ನು ಆಳದಲ್ಲಿ ಹೂತುಹಾಕಿದರು. ಯಾರೂ ಗುರುತಿಸದಂತೆ ಆ ಜಾಗ ಭದ್ರಪಡಿಸಿದ್ದಾರೆ. ಆದರೆ ಕಾಲ ಕಳೆದಂತೆ ಆಗಿದ್ದೆ ಬೇರೆ.
ಎರಡು ವರ್ಷಗಳ ಕಾಲ ಸೃಷ್ಟಿಸಿದ ಸುಳ್ಳಿನ ಕಥೆ!
ಜಿಗ್ನೇಶ್ ನಾಪತ್ತೆಯಾದ ಬಳಿಕ, ಆತನ ಸಂಬಂಧಿಕರು ಮತ್ತು ಸ್ನೇಹಿತರು ಜಿಗ್ನೇಶ್ ಬಗ್ಗೆ ವಿಚಾರಿಸಲು ಆರಂಭಿಸಿದರು. ಆಗ ಚಾಣಕ್ಷತನದಿಂದ ವರ್ತಿಸಿದ ಪೃಥ್ವಿ, ಜಿಗ್ನೇಶ್ ಕಳೆದ ಎರಡು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದಾರೆ, ಅಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿ ಎಲ್ಲರಿಗೂ ನಂಬಿಸಿದಳು. ಯಾರಾದರೂ ವಿಳಾಸ ಅಥವಾ ಸಂಪರ್ಕ ಸಂಖ್ಯೆ ಕೇಳಿದರೆ ಹಾರಿಕೆ ಉತ್ತರಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದಳು.
ಅನುಮಾನ ಮೂಡಿದ್ದು ಹೇಗೆ?
ದಿನಗಳು ಕಳೆದಂತೆ ಜಿಗ್ನೇಶ್ ಸಂಬಂಧಿಕರಿಗೆ ಪೃಥ್ವಿಯ ಪ್ರತಿಕ್ರಿಯೆಗಳ ಬಗ್ಗೆ ಅನುಮಾನ ಮೂಡಿತು. ಜಿಗ್ನೇಶ್ನ ಸಹೋದರ ಅಶೋಕ್ಗೆ ಪೃಥ್ವಿ ನೀಡಿದ ಮಾಹಿತಿಗಳಲ್ಲಿ ವ್ಯತಿರಿಕ್ತತೆ ಕಂಡುಬಂತು. ಇದರಿಂದ ತೀವ್ರ ಅನುಮಾನಗೊಂಡ ಅಶೋಕ್, ತಮ್ಮ ಸಹೋದರ ಕಾಣೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿ, ಪತ್ನಿ ಪೃಥ್ವಿ ಮೇಲಿದ್ದ ಸಂಶಯದಿಂದ ಆಕೆಯನ್ನು ವಶಕ್ಕೆ ಪಡೆದು ಮೌಖಿಕ ಹಾಗೂ ತೀವ್ರವಾದ ವಿಚಾರಣೆ ನಡೆಸಿದರು. ಪೊಲೀಸರ ಖಾಕಿ ಖದರ್ ಮುಂದೆ ಪೃಥ್ವಿ ಸತ್ಯ ಬಾಯ್ಬಿಟ್ಟಳು. ಆಕೆ ನೀಡಿದ ಮಾಹಿತಿ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಪೊಲೀಸರ ತನಿಖೆ ಮತ್ತು ಬಂಧನ!
ಪೃಥ್ವಿ ಹೇಳಿದ ಜಾಗಕ್ಕೆ ಪೊಲೀಸರು ಭೇಟಿ ನೀಡಿ, ಜೆಸಿಬಿ ಹಾಗೂ ಇತರೆ ಪರಿಕರಗಳ ಸಹಾಯದಿಂದ 12 ಅಡಿ ಆಳದ ಗುಂಡಿಯನ್ನು ಅಗೆದು ಜಿಗ್ನೇಶ್ ಅವರ ಅವಶೇಷಗಳು ಹಾಗೂ ಮೂಳೆಗಳನ್ನು ಹೊರತೆಗೆದರು. ವೈಜ್ಞಾನಿಕ ಪರೀಕ್ಷೆಗಾಗಿ ಅವುಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಯಿತು. ಕೊಲೆ ನಡೆದು ಬರೋಬ್ಬರಿ ಎರಡು ವರ್ಷಗಳ ಕಾಲ ಇಡೀ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದ ಪತ್ನಿ ಪೃಥ್ವಿ ಹಾಗೂ ಆಕೆಯ ಪ್ರಿಯಕರ ನೀಲೇಶ್ನನ್ನು ಪೊಲೀಸರು ಈಗ ಅಧಿಕೃತವಾಗಿ ಬಂಧಿಸಿದ್ದು, ಕಾನೂನು ಕ್ರಮ ಜರುಗಿಸುತ್ತಿದ್ದಾರೆ.


