ಉತ್ತರ ಪ್ರದೇಶದ ಕಾನ್ಪುರದಲ್ಲಿ ಮೂರು ಮಂದಿ ಕಳ್ಳರು ಸೇರಿ ವ್ಯಾನ್‌ ಕಳ್ಳತನ ಮಾಡಿದ್ದಾರೆ. ಆದರೆ, ಕಳ್ಳತನ ಮಾಡುವ ಸಮಯದಲ್ಲಿ ಯಾರಿಗೂ ಕಾರ್‌ ಡ್ರೈವಿಂಗ್‌ ಬರೋದಿಲ್ಲ ಅನ್ನೋದು ಗೊತ್ತಾಗಿದೆ. ಮುಂದಾಗಿದ್ದು ಏನು ಗೊತ್ತಾ?

ನವದೆಹಲಿ (ಮೇ.24): ಇದು ಮೂವರು ಹುಡುಗರ ಕಥೆ. ಅದರಲ್ಲ ಇಬ್ಬರು ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗರು. ತಕ್ಷಣಕ್ಕೆ ಹಣ ಮಾಡಬೇಕು ಎನ್ನುವ ಉದ್ದೇಶದಲ್ಲಿ ಈ ಮೂವರೂ ಸೇರಿ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ದಬೌಲಿ ಪ್ರದೇಶದಲ್ಲಿ ಮಾರುತಿ ವ್ಯಾನ್‌ ಒಂದನ್ನು ಕದಿಯಲು ಸ್ಕೆಚ್ ಹಾಕಿದ್ದರು. ಬಹಳ ಆತ್ಮವಿಶ್ವಾಸದಿಂದಲೇ ಈ ಮೂವರು ಧೈರ್ಯವಾಗಿ ದರೋಡೆ ಮಾಡಲು ಮುಂದಾಗಿದ್ದರು. ಮಾರುತಿ ವ್ಯಾನ್‌ಅನ್ನು ಕಂಡುಕೊಂಡ ಅವರು ಇನ್ನೇನು ಕದಿಯಬೇಕು ಅನ್ನೋವಾಗ ದೊಡ್ಡ ಪ್ರಶ್ನೆ ಎದುರಾಗಿತ್ತು. ಅದೇನೆಂದರೆ, ವ್ಯಾನ್‌ಅನ್ನು ಡ್ರೈವ್‌ ಮಾಡೋದು ಯಾರು ಅನ್ನೋದು. ಮೂವರು ಮುಖ ಮುಖ ನೋಡಲು ಆರಂಭಿಸಿದ್ದರು. ಅಚ್ಚರಿ ಏನೆಂದರೆ, ಈ ಮೂವರಲ್ಲಿ ಯಾರಿಗೂ ಕಾರ್‌ ಡ್ರೈವಿಂಗ್‌ ಬರುತ್ತಿರಲಿಲ್ಲ. ಛೇ.. ಇಷ್ಟೆಲ್ಲಾ ಸಿದ್ಧತೆ ಮಾಡಿ ಕೊನೆಗೆ ಹೀಗಾಯ್ತಲ್ಲ ಎಂದುಕೊಂಡ ಕಳ್ಳರು, ತನ್ನ ಪ್ಲ್ಯಾನ್‌ಅನ್ನು ಅಲ್ಲಿಗೇ ಬಿಡಲಿಲ್ಲ. ಮೂವರು ಸೇರಿ ವ್ಯಾನ್‌ಅನ್ನು ದೂಡಿಕೊಂಡು ಕಳ್ಳತನ ಮಾಡೋ ಪ್ರಯತ್ನ ಮಾಡಿದ್ದಾರೆ.

ಕದ್ದ ವ್ಯಾನ್‌ಅನ್ನು ಎಲ್ಲಿಯವರೆಗೆ ದೂಡಬಹುದು? 1 ಕಿಲೋಮೀಟರ್‌ ಅಥವಾ 2 ಕಿಲೋಮೀಟರ್‌..? ಆದರೆ, ಈ ಕಳ್ಳರು ನಟ್ಟ ನಡುರಾತ್ರಿಯಲ್ಲಿ ಬರೋಬ್ಬರಿ 10 ಕಿಲೋಮೀಟರ್‌ ದೂರು ಗಾಡಿಯನ್ನು ದೂಡಿದ್ದಾರೆ. ಆದರೆ, ಈ ಪ್ರಯಾಸದಲ್ಲಿ ಇವರೆಲ್ಲರೂ ಫುಲ್‌ ಸುಸ್ತಾಗಿ ಹೋಗಿದ್ದರು. ಯಾರಲ್ಲೂ ಮತ್ತೆ ಒಂದು ಮೀಟರ್‌ ವ್ಯಾನ್‌ಅನ್ನು ದೂಡುವ ಶಕ್ತಿಯೂ ಇದ್ದಿರಲಿಲ್ಲ. ಬಳಲಿ ಬೆಂಡಾಗಿ ಹೋಗಿದ್ದ ಮೂವರು ಕಳ್ಳರು, ಮಾರುತಿ ವ್ಯಾನ್‌ಅನ್ನು ಅಲ್ಲಿಯೇ ಬಿಟ್ಟುಹೋಗುವ ತೀರ್ಮಾನ ಮಾಡಿದ್ದರು. ಅದಕ್ಕೂ ಮುನ್ನ ಕಾರ್‌ನ ನಂಬರ್‌ ಪ್ಲೇಟ್‌ಅನ್ನು ಕಿತ್ತು, ಯಾರಿಗೂ ಗೊತ್ತಾಗದ ಸ್ಥಳದಲ್ಲಿ ವ್ಯಾನ್‌ಅನ್ನು ಬಚ್ಚಿಟ್ಟು ಅಲ್ಲಿಂದ ಪರಾರಿಯಾಗಿದ್ದರು.

ಹೀಗಿರುವಾಗ ಪೊಲೀಸರು ಮಂಗಳವಾರ ಈ ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಇವರನ್ನು ಸತ್ಯಂ ಕುಮಾರ್‌, ಅಮಾನ್‌ ಗೌತಮ್‌ ಹಾಗೂ ಅಮಿತ್‌ ವರ್ಮ ಎಂದು ಗುರುತಿಸಲಾಗಿದೆ. ಸತ್ಯಮ್‌ ಮಹಾರಾಜ್‌ಪುರದ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಟೆಕ್‌ ಪದವಿ ವ್ಯಾಸಂಗ ಮಾಡುತ್ತಿದ್ದರೆ, ಅಮನ್‌ ಗೌತಮ್‌ ಡಿಬಿಎಸ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ ಕಾಮ್‌ ಓದುತ್ತಿದ್ದಾರೆ. ಇನ್ನು ಅಮಿತ್‌ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಮೂವರು ಆರೋಪಿಗಳು ಮೇ 7 ರಂದು ದಬೌಲಿ ಪ್ರದೇಶದಿಂದ ವಾಹನವನ್ನು ಕದ್ದಿದ್ದರು ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಭೇಜ್ ನಾರಾಯಣ್ ಸಿಂಗ್ ಹೇಳಿದ್ದಾರೆ. "ಈ ಮೂವರು ಸೇರಿ ವ್ಯಾನ್ ಅನ್ನು ಕದ್ದಿದ್ದಾರೆ. ಆದರೆ, ಅವರಲ್ಲಿ ಯಾರಿಗೂ ಕಾರ್‌ ಡ್ರೈವಿಂಗ್‌ ತಿಳಿದಿರಲಿಲ್ಲ, ಆದ್ದರಿಂದ ಅವರು ವ್ಯಾನ್ ಅನ್ನು ದಬೌಲಿಯಿಂದ ಕಲ್ಯಾಣಪುರಕ್ಕೆ 10 ಕಿಲೋಮೀಟರ್ ದೂರ ತಳ್ಳಿದರು, ಅದರ ನಂಬರ್ ಪ್ಲೇಟ್ ತೆಗೆದು ನಿರ್ಜನ ಸ್ಥಳದಲ್ಲಿ ಬಚ್ಚಿಟ್ಟಿದ್ದರು. ವಾಹನವನ್ನು ಹೇಗೆ ಓಡಿಸಬೇಕೆಂದು ಯಾರಿಗೂ ತಿಳಿದಿರಲಿಲ್ಲ. ಹೇಗಿದ್ದರೂ ಕಾರ್‌ಅನ್ನು ಕದಿದ್ದೇವೆ. ಅದನ್ನು ಮಾರಾಟ ಮಾಡಿದರೆ, ಹಣ ಬರುತ್ತದೆ ಎಂದು ಅವರು ಭಾವಿಸಿದ್ದರು. ಅದಕ್ಕಾಗಿ ಅದನ್ನು ದೂಡಿಕೊಂಡು ಹೋಗಿದ್ದರು' ಎಂದು ಎಸಿಪಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಸಂಸತ್‌ ಭವನ ಉದ್ಘಾಟನೆಯ ಸಮಯ ಸರಿಯಿಲ್ಲ, ಪ್ಲೀಸ್‌ ಬದಲಾಯಿಸಿ ಎಂದು ಜ್ಯೋತಿಷಿಯ ಮನವಿ!

ಇಡೀ ದರೋಡೆಗೆ ಅಮಿತ್ ಯೋಜನೆ ರೂಪಿಸಿದ್ದರು ಎಂದು ಎಸಿಪಿ ತಿಳಿಸಿದ್ದಾರೆ. ಕದ್ದ ವಾಹನಗಳನ್ನು ವೆಬ್‌ಸೈಟ್ ಮೂಲಕ ಮಾರಾಟ ಮಾಡುವ ಯೋಜನೆಯ ಬಗ್ಗೆ ಸತ್ಯಂ ತಿಳಿದುಕೊಂಡಿದ್ದ ಎಂದು ಅವರು ಹೇಳಿದರು. "ಕದ್ದ ವಾಹನಗಳನ್ನು ಮಾರಾಟ ಮಾಡಲು ಸತ್ಯಂ ವೆಬ್‌ಸೈಟ್ ತಯಾರಿಸುತ್ತಿದ್ದ. ವಾಹನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡದಿದ್ದರೆ, ವೆಬ್‌ಸೈಟ್ ಮೂಲಕ ಮಾರಾಟ ಮಾಡುವ ಪ್ರಯತ್ನ ಮಾಡುತ್ತಿದ್ದ" ಎಂದು ಎಸಿಪಿ ಮಾಹಿತಿ ನೀಡಿದ್ದಾರೆ.

Historic Sceptre Sengol: ಕಾಂಗ್ರೆಸ್‌ ಮರೆತಿದ್ದ ರಾಜದಂಡವನ್ನು ಹೊಸ ಸಂಸತ್ತಿನಲ್ಲಿ ಇಡಲಿರುವ ಪ್ರಧಾನಿ ಮೋದಿ!