ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬಳಿಕ ಅದನ್ನು ಪ್ರೆಶರ್ ಕುಕ್ಕರ್‌ನಲ್ಲಿ ಇರಿಸಿ ಬೇಯಿಸಿದ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬಳಿಕ ಅದನ್ನು ಪ್ರೆಶರ್ ಕುಕ್ಕರ್‌ನಲ್ಲಿ ಇರಿಸಿ ಬೇಯಿಸಿದ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ. 45 ವರ್ಷದ ಗುರುಮೂರ್ತಿ ಎಂಬಾತನೇ ಹೀಗೆ ಪತ್ನಿಯನ್ನು ಭೀಭತ್ಸವಾಗಿ ಕೊಲೆ ಮಾಡಿದ ವ್ಯಕ್ತಿ. ಗುರುಮೂರ್ತಿ ಪತ್ನಿ ಕಾಣೆಯಾದ ಬಗ್ಗೆ ಪೊಲೀಸ್ ಕೇಸ್ ದಾಖಲಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರಿಗೆ ಗುರುಮೂರ್ತಿಯೇ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವುದು ತಿಳಿದು ಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

35 ವರ್ಷದ ವೆಂಕಟ್ ಮಾಧವಿ ಗಂಡನಿಂದಲೇ ಕೊಲೆಯಾದ ಮಹಿಳೆ. ಈಕೆ ಜನವರಿ 16ರಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮಾಡಿದಾಗ ಪೊಲೀಸರಿಗೆ ಆಕೆಯ ಗಂಡ ಗುರುಮೂರ್ತಿಯ ಮೇಲೆಯೇ ಅನುಮಾನ ಬಂದಿದೆ. ಹೀಗಾಗಿ ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಆತ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. 

ಅಂಗ್ಲ ಮಾಧ್ಯಮವೊಂದರ ವರದಿಯ ಪ್ರಕಾರ ಆರೋಪಿ ಗುರುಮೂರ್ತಿ, ಪತ್ನಿ ವೆಂಕಟ ಮಾಧವಿಯ ದೇಹವನ್ನು ಬಾತ್‌ರೂಮ್‌ನಲ್ಲಿ ಹಲವು ಭಾಗಗಳಾಗಿ ಕತ್ತರಿಸಿ ನಂತರ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ್ದಾನೆ. ಬಳಿಕ ಮಾಂಸವನ್ನು ಮೂಳೆಯಿಂದ ಬೇರ್ಪಡಿಸಿದ್ದಾನೆ. ಬಳಿಕ ಮೂಳೆಗಳನ್ನು ಕುಟಾಣಿಯಿಂದ ಹುಡಿಮಾಡಿ ಮತ್ತೆ ಬೇಯಿಸಿದ್ದಾನೆ. ಮೂರು ದಿನಗಳ ಕಾಲ ಆತ ಹಲವು ಬಾರಿ ಮೂಳೆ ಹಾಗೂ ಮಾಂಸವನ್ನು ಬೇಯಿಸಿದ ನಂತರ ಅದನ್ನು ಪ್ಯಾಕ್ ಮಾಡಿ ಬಳಿಕ ಮೀರ್‌ಪೇಟ್ ಬಳಿಯ ಕೆರೆಗೆ ಎಸೆದಿದ್ದಾನೆ. 

ಕೊಲೆ ಮಾಡಿದ ಗುರುಮೂರ್ತಿ ಮಾಜಿ ಯೋಧನಾಗಿದ್ದು, ಪ್ರಸ್ತುತ ಡಿಆರ್‌ಡಿಒ(Defence Research and Development Organisation)ದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ದಂಪತಿಗೆ ಒಂದು ಗಂಡು ಒಂದು ಹೆಣ್ಣು ಇಬ್ಬರು ಮಕ್ಕಳಿದ್ದರು. ಈ ಗಂಡ ಹೆಂಡತಿ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ತಿಳಿದು ಬಂದಿದೆ. ಆದರೆ ಕೊಲೆ ಏಕೆ ಹಾಗೂ ಹೇಗೆ ನಡೆಯಿತು ಎಂಬ ಬಗ್ಗೆ ಮಾಹಿತಿ ಇಲ್ಲ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.