Cricket Betting Mafia: ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡ ಗಂಡ, ಹೆಂಡತಿಯಿಂದ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನೇ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹಾಸನದಲ್ಲಿ ಈ ಘಟನೆ ನಡೆದಿದ್ದು, ಕುಟುಂಬಸ್ಥರ ಆರೋಪದ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. 

ಹರೀಶ್, ಹಾಸನ, ಏಷ್ಯಾನೆಟ್‌ನ್ಯೂಸ್ ಸುವರ್ಣ ನ್ಯೂಸ್

ಹಾಸನ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣಕಳೆದುಕೊಂಡಿದ್ದವನ ಪತ್ನಿ ಅನುಮಾನಾಸ್ಪಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಈ ಸಂಬಂಧ ಪತಿಯ ವಿರುದ್ಧ ಕೊಲೆ ಆರೋಪ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಹೆಂಡತಿ ಶವ ನೇಣುಹಾಕಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ಮೃತಳನ್ನು ತೇಜಸ್ವಿನಿ (28) ಎಂದು ಗುರುತಿಸಲಾಗಿದೆ. ಏಳು ವರ್ಷಗಳಿಂದ ತೇಜಸ್ವಿನಿ ಮಧು ಎಂಬಾತನನ್ನು ಮದುವೆಯಾಗಿದ್ದಳು. ಬೆಂಗಳೂರಿನ ಟೊಯೋಟಾ ಕಂಪೆನಿಯಲ್ಲಿ ಮಧು ಕೆಲಸ ಮಾಡುತ್ತಿದ್ದ. ಮೂರು ತಿಂಗಳ ಹಿಂದೆ ಇಡೀ ಕುಟುಂಬ ಹಾಸನಕ್ಕೆ ವಾಪಸ್‌ ಹೋಗಿದೆ. 

ಬೆಟ್ಟಿಂಗ್‌ನಲ್ಲಿ 30 ಲಕ್ಷ ಕಳೆದುಕೊಂಡ ಮಧು:

ಮಧು ಕ್ರಿಕೆಟ್‌ ಬೆಟ್ಟಿಂಗ್‌ ಆಡುತ್ತಿದ್ದ. ಬೆಟ್ಟಿಂಗ್‌ನಲ್ಲಿ ಹಣ ಗಳಿಸಬೇಕು ಎಂಬ ದುರಾಸೆಯಿಂದ ಇದ್ದಬದ್ದ ಹಣವನ್ನೆಲ್ಲಾ ಕಳೆದುಕೊಂಡ. ಜತೆಗೆ ಸ್ನೇಹಿತರು, ಕುಟುಂಬಸ್ಥರ ಹತ್ತಿರ ಸಾಲ ಪಡೆದು ಅದನ್ನೂ ಸೋತ. ಮೂಲಗಳ ಪ್ರಕಾರ ಸುಮಾರು 30 ಲಕ್ಷ ರೂಪಾಯಿಗಳನ್ನು ಬೆಟ್ಟಿಂಗ್‌ನಲ್ಲಿ ಮಧು ಕಳೆದುಕೊಂಡಿದ್ದಾನೆ. ಎಲ್ಲ ದುಡ್ಡನ್ನೂ ಕಳೆದ ನಂತರ ಹಣಕ್ಕಾಗಿ ಹೆಂಡತಿಗೆ ಪೀಡಿಸಲು ಆರಂಭಿಸಿದ್ದ. ಇದೀಗ ತೇಜಸ್ವಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ ಎಂದು ತೇಜಸ್ವಿನಿ ಕುಟುಂಬ ಆರೋಪಿಸಿದೆ. ಆರೋಪದ ಬೆನ್ನಲ್ಲೇ ಸೆಕ್ಷನ್‌ 302ರ ಅಡಿಯಲ್ಲಿ ಕೊಲೆ ಪ್ರಕರಣ ಹಾಸನ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. 

ಮದುವೆ ವೇಳೆ ಕೊಟ್ಟಿದ್ದ 150 ಗ್ರಾ ಚಿನ್ನಾಭರಣಗಳನ್ನು ಮಾರಿಕೊಂಡಿದ್ದನು. ಹಣಕ್ಕಾಗಿ ಪತ್ನಿಗೆ ಹಿಂಸೆ ನೀಡುತ್ತಿದ್ದ. 3 ತಿಂಗಳ ಹಿಂದೆ ಪತಿಯನ್ನು ಹಾಸನಕ್ಕೆ ಕರೆದುಕೊಂಡು ಬಂದಿದ್ದಳು ಪತ್ನಿ. 3 ತಿಂಗಳಿನಿಂದ ದೊಡ್ಡಮಂಡಿಗನಹಳ್ಳಿಯಲ್ಲೆ ವಾಸಿಸುತ್ತಿದ್ದರು. ಕ್ರಿಕೆಟ್ ಬೆಟ್ಟಿಂಗ್ ಬಿಡಿಸಲು ಪತ್ನಿ ಯತ್ನಿಸಿದ್ದಕ್ಕೆ ಜಗಳ ನಡೆದು ಪತ್ನಿ ಮೇಲೆ ಮಧು ಹಲವು ಬಾರಿ ಹೊಡೆದಿದ್ದ. ನಿನ್ನೆಯು ಜಗಳ ಮಾಡಿ ಪತ್ನಿ ತೇಜಸ್ವಿನಿಯನ್ನು ಪತಿ ಮಧು ಹೊಡೆದು ಕೊಲೆ ಮಾಡಿದ್ದಾನೆಂಬುದು ಮೃತಳ ತಾಯಿ ಲಲಿತ ಆರೋಪ

ಘಟನೆಯ ಬೆನ್ನಲ್ಲೇ ಮಧು ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಮಧು ನಾಪಯತ್ತೆಯಾಗಿರುವುದು ಕೂಡ ಆತನ ವಿರುದ್ಧ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಮತ್ತು ಮಧು ಬೆಟ್ಟಿಂಗ್‌ ಚಟದ ಬಗ್ಗೆ ನೆರೆಹೊರೆಯವರೆಲ್ಲರಿಗೂ ತಿಳಿದಿದೆ. ಹಣಕ್ಕಾಗಿ ತೇಜಸ್ವಿನಿಯನ್ನು ಪದೇ ಪದೇ ಪೀಡಿಸುತ್ತಿರುವ ಬಗ್ಗೆ ಆಕೆ ತನ್ನ ಪೋಷಕರಲ್ಲಿ ಹಂಚಿಕೊಂಡಿದ್ದಳು. ಇವೆಲ್ಲವೂ ಮಧು ಹೆಂಡತಿಯನ್ನು ಕೊಲೆ ಮಾಡಿರಲೂಬಹುದು ಎಂದು ನಂಬುವಂತೆ ಮಾಡಿದೆ ಎನ್ನುತ್ತಾರೆ ಪೊಲೀಸ್‌ ಮೂಲಗಳು. 

ಬೆಟ್ಟಿಂಗ್‌ ದಂಧೆ ಹೇಗೆ ನಡೆಯುತ್ತದೆ?:

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಇಡೀ ದೇಶದ ತುಂಬ ಹರಡಿಕೊಂಡಿದೆ. ಈ ಹಿಂದೆಲ್ಲಾ ದುಡ್ಡು ಕೊಟ್ಟು ಆಡಬೇಕಿತ್ತು. ಆದರೆ ಈಗ ನೂರಾರು ಆನ್‌ಲೈನ್‌ ಆಪ್‌ಗಳು ಬಂದಿದ್ದು, ನೇರವಾಗಿ ಯುಪಿಐ ಟ್ರಾನ್ಸ್‌ಫರ್‌ ಮಾಡಿ ಆಡಬಹುದು. ಮುಂಚೆ ಭಾರತದ ಪಂದ್ಯ ನಡೆಯುತ್ತಿದ್ದರೆ, ಅಥವಾ ಐಪಿಎಲ್‌ ಸೀಸನ್‌ನಲ್ಲಿ ಬೆಟ್ಟಿಂಗ್‌ ದಂಧೆ ವಿಪರೀತವಾಗುತ್ತಿತ್ತು. ಆದರೆ ಈಗೀಗ ರಣಜಿ ಮ್ಯಾಚ್‌ನಿಂದ ಹಿಡಿದು ದೇಶವಿದೇಶದ ಸಣ್ಣ ಸಣ್ಣ ಪಂದ್ಯಗಳ ಮೇಲೂ ಬೆಟ್ಟಿಂಗ್‌ ಆಡುತ್ತಾರೆ. ಎಷ್ಟೋ ಪಂದ್ಯಗಳಲ್ಲಿ ಆಡುತ್ತಿರುವವರು ಯಾರು ಎಂಬುದೂ ಗೊತ್ತಿರುವುದಿಲ್ಲ. ಹಾಗಿದ್ದರೂ ಬೆಟ್ಟಿಂಗ್‌ ಹಾಕುತ್ತಾರೆ. ಬೆಟ್ಟಿಂಗ್‌ ಕೂಡ ಕುದುರೆ ರೇಸ್‌, ಇಸ್ಪೀಟ್‌ ರೀತಿಯ ಚಟ. ಇದಕ್ಕಾಗಿಯೇ ಯಾವುದಾದರೊಂದು ಪಂದ್ಯದ ಮೇಲೆ ಬೆಟ್ಟಿಂಗ್‌ ಆಡುತ್ತಲೇ ಇರುತ್ತಾರೆ.

ಇದನ್ನೂ ಓದಿ: ಆನ್‌ಲೈನ್‌ ಬೆಟ್ಟಿಂಗ್‌ ಜಾಹೀರಾತು ಪ್ರಸಾರ ಬೇಡ

ಬೆಟ್ಟಿಂಗ್‌ ಚಟಕ್ಕೆ ಮಗನನ್ನೇ ಕೊಂದ ತಂದೆ:

ಐಪಿಎಲ್​ ಬೆಟ್ಟಿಂಗ್​ ಚಟಕ್ಕೆ (IPL Betting) ಬಿದ್ದು ಸಾಲ ಸೋಲ ಮಾಡಿಕೊಂಡು ಹಾಳಾಗಿದ್ದ ತಂದೆಯನ್ನು ಸಾಲಗಾರರು ಬಂದು ಮಗನ ಎದುರು ಕೊಟ್ಟ ಹಣ ವಾಪಸ್​ ಕೊಡುವಂತೆ ದಬಾಯಿಸಿದ್ದಾರೆ, ಈ ವಿಷಯ ಎಲ್ಲಿ ಮನೆಯಲ್ಲಿ ಹೆಂಡತಿ ಬಳಿ ಮಗ ಹೇಳಿ ಬಿಡ್ತಾನೋ, ನನ್ನ ಬಂಡವಾಳವೆಲ್ಲಾ ಮನೆಲಿ ಬಯಲಾಗುತ್ತದೋ ಅನ್ನೋ ಭಯದಲ್ಲಿ ತಂದೆಯೇ ತನ್ನ ಮಗನನ್ನು ಕೊಲೆ (Murder) ಮಾಡಿದ್ದಾನೆ. ಮಗನ ಶವದ ಎದುರು ಮುಗಿಲು ಮುಟ್ಟುವಂತೆ ತಾಯಿಯ ಆಕ್ರಂದನ, ಐದು ಜನ ಹಿಡಿದರೂ ತಡೆಯಲಾಗದ ನೋವು ಚೀರಾಟ ಕೂಗಾಟ, ಮಗನಿಲ್ಲ ಅನ್ನೋದನ್ನು ಜೀರ್ಣಿಸಿಕೊಳ್ಳಲಾಗದ ತಾಯಿಯ ಸಂಕಟ. ಈ ಘಟನೆ ನಡೆದಿದ್ದು ಕೋಲಾರ ತಾಲ್ಲೂಕು ಶೆಟ್ಟಿಮಾದಮಂಗಲ ಗ್ರಾಮದಲ್ಲಿ.

ಇವತ್ತು ಬೆಳಿಗ್ಗೆ ಶೆಟ್ಟಿಮಾದಮಂಗಲ ಕೆರೆಯಲ್ಲಿ 12 ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದೆ, ಮೃತ ಬಾಲಕ ಯಾರೆಂದು ನೋಡಲಾಗಿ, ಬಾಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾದರಕಲ್ಲು ಗ್ರಾಮದ ಮಣಿಕಂಠ ಎಂಬುವರ ಮಗ ನಿಖಿಲ್​ ಕುಮಾರ್​ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ: Kolar Crime News: IPL ಬೆಟ್ಟಿಂಗ್‌ನಲ್ಲಿ ಹಣ ಕಳ್ಕೊಂಡ, ಗುಟ್ಟು ಹೇಳ್ಬಿಡ್ತಾನೆ ಅಂದ್ಕೊಂಡು ಮಗನನ್ನೇ ಕೊಂದ!

ಆರನೇ ತರಗತಿ ಓದುತ್ತಿದ್ದ ನಿಖಿಲ್​​ ಕುಮಾರ್​ ನಿನ್ನೆ ಎಂದಿನಂತೆ ಪಕ್ಕದೂರಿನ ಹಿರೇಕಟ್ಟಿಗೇನಹಳ್ಳಿ ಗ್ರಾಮಕ್ಕೆ ಶಾಲೆಗೆಂದು ಹೋಗುತ್ತಿದ್ದ. ಈ ವೇಳೆ ತಂದೆ ಮಣಿಕಂಠನನ್ನು ಊರ ಬಳಿ ಸಾಲ ವಾಪಸ್​ ಕೊಡುವಂತೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ನೋಡಿಕೊಂಡು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದ ನಿಖಿಲ್​ ಕುಮಾರ್​ನನ್ನು ಶಾಲೆಗೆ ಬಿಡ್ತೀನಿ ಬಾ ಎಂದು ಹೇಳಿ ತಂದೆ ಮಣಿಕಂಠ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದ.

ಸಂಜೆ ಮನೆಗೆ ಬಾರದ ಮಗ: ಆದರೆ ಸಂಜೆ ವೇಳೆಗೆ ಮಗ ನಿಖಿಲ್​​ ​ಕುಮಾರ್​ ಮನೆಗೆ ಬಂದಿಲ್ಲ, ಮಗ ಮನೆಗೆ ಬಾರದೆ ಇದ್ದ ಹಿನ್ನೆಲೆ ಚಿಂತಾಮಣಿ ಗ್ರಾಮಾಂತರ ಪೊಲೀಸ್​ ಠಾಣೆಗೆ ಮೌಕಿಕ ದೂರು ನೀಡಿದ ಕುಟುಂಬಸ್ಥರು ಮತ್ತು ಸಂಬಂಧಿಕರು,ಗ್ರಾಮದ ಸುತ್ತಮುತ್ತ ಬೆಟ್ಟ ಗುಡ್ಡಗಳು, ಕೆರೆ ಕಟ್ಟೆ ಬಳಿ ಎಲ್ಲಾ ಹುಡುಕಾಡಿದ್ದಾರೆ, ಆದರೆ ನಿಖಿಲ್​​ ​ಕುಮಾರ್​ ಸುಳಿವು ಮಾತ್ರ ಸಿಕ್ಕಿಲ್ಲ. 

ಇದನ್ನೂ ಓದಿ:ಕಾರ್ಪೋರೆಟರ್ ಹತ್ಯೆಗೆ ಪತಿಯಿಂದಲೇ ಯತ್ನ: ದೂರು ದಾಖಲು

ಗ್ರಾಮದ ಕೆರೆಯಲ್ಲಿ ಬಾಲಕನ ಶವ ಪತ್ತೆ: ಹೀಗಿರುವಾಗಲೇ ಇಂದು ಬೆಳಿಗ್ಗೆ ಕೋಲಾರ ತಾಲ್ಲೂಕು ಶೆಟ್ಟಿಮಾದಮಂಗಲ ಗ್ರಾಮದ ಕೆರೆಯಲ್ಲಿ ಬಾಲಕ ನಿಖಿಲ್​​ ಕುಮಾರ್​ ಶವವಾಗಿ ಪತ್ತೆಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ನಿಖಿಲ್​​ ಕುಮಾರ್​ ಮಾವ ಮಾರುತಿ ಹಾಗೂ ತಾತ ಮುನಿಯಪ್ಪ ನೇರವಾಗಿ ನಿಖಿಲ್​​ ಕುಮಾರ್​ನನ್ನು ಅವರ ತಂದೆಯೇ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿದ್ದಾನೆಂದು ನೇರ ಆರೋಪ ಮಾಡಿದ್ದಾರೆ. 

ತಂದೆಯೇ ಕೊಲೆ ಮಾಡಿದ್ದಾರೆ: ಇನ್ನು ಮುನಿಯಪ್ಪ ನೇರವಾಗಿ ನಿಖಿಲ್​​ ಕುಮಾರನನ್ನು ಅವರ ತಂದೆಯೇ ಸಾಯಿಸಿದ್ದಾನೆ ಅನ್ನೋದಕ್ಕೆ ಕಾರಣವೂ ಇದೆ. ನಿನ್ನೆ ಶಾಲೆಗೆಂದು ಹೊರಟಿದ್ದ ಮಗನನ್ನು ತಂದೆ ಮಣಿಕಂಠ ಬೈಕ್​ನಲ್ಲಿ ಕೂರಿಸಿಕೊಂಡು ಶಾಲೆಗೆ ಬಿಡುತ್ತೀನಿ ಎಂದು ಹೇಳಿ ಕರೆದುಕೊಂಡು ಹೋಗಿದ್ದ. ಈ ವೇಳೆ ಹಿರೇಕಟ್ಟಿಗೇನಹಳ್ಳಿ ಗ್ರಾಮದ ಶಾಲೆಗೆ ಬಿಡದೆ, ಜೇಡರಹಳ್ಳಿ ಬಳಿ ಕರೆದುಕೊಂಡು ಬಂದಿದ್ದಾನೆ, ಅವನು ಮಗನೊಂದಿಗೆ ಬೈಕ್​ನಲ್ಲಿ ಹೋಗಿರುವ ಸಿಸಿಟಿವಿ ಕ್ಯಾಮರಾ ದೃಷ್ಯ ಸಿಕ್ಕಿದೆ. 

ಮಗನೊಂದಿಗೆ ಹೋದವನು ಮತ್ತೆ ವಾಪಸ್​ ಬಂದಿಲ್ಲ, ಅಲ್ಲದೆ ಹಿರೇಕಟ್ಟಿಗೇನಹಳ್ಳಿಯಲ್ಲಿರುವ ಶಾಲೆಗೆ ಹೋಗಬೇಕಾದವನು ಜೇಡರಹಳ್ಳಿಗೆ ಕರೆದುಕೊಂಡು ಹೋಗಿದ್ದೇಕೆ ಅನ್ನೋ ಅನುಮಾನ ಮೂಡಿದೆ. ಈ ಬಗ್ಗೆ ತಂದೆ ಮಣಿಕಂಠನನ್ನು ಕೇಳಿದ್ರೆ ನಿಖಿಲ್​​ ಕುಮಾರ್​ ಶೌಚಾಲಯಕ್ಕೆ ಹೋಗಬೇಕು ಎಂದ ಅದಕ್ಕಾಗಿ ಅವನನ್ನು ಕರೆದುಕೊಂಡು ಬಂದು ಜೇಡರಹಳ್ಳಿ ಕೆರೆಯಲ್ಲಿ ಶೌಚ ಮಾಡಿಸಿ ನಂತರ ಅವನನ್ನು ಶಾಲೆಯ ಬಳಿ ಅಂದರೆ ಹಿರೇಕಟ್ಟಿಗೇನಹಳ್ಳಿ ಗೇಟ್​ನಲ್ಲಿ ಬಿಟ್ಟು ಹೋಗಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಬೇರೊಬ್ಬನೊಂದಿಗೆ ಪತ್ನಿ ಚಕ್ಕಂದ, ಕೆರಳಿ ರುಂಡ ಚೆಂಡಾಡಿದ ಗಂಡ

ನಿಖಿಲ್​​ ಕುಮಾರ್​ ಶಾಲೆ ಇರುವ ಹಿರೇಕಟ್ಟಿಗೇನಹಳ್ಳಿಗೂ ನಿಖಿಲ್​​ ಕುಮಾರ್​ ಮೃತದೇಹ ಸಿಕ್ಕಿರುವ ಸ್ಥಳ ಶೆಟ್ಟಿ ಮಾದಮಂಗಲ ಕೆರೆ ಪ್ರದೇಶಕ್ಕೂ ಸುಮಾರು 8 ಕಿ.ಮೀ. ದೂರವಾಗುತ್ತದೆ ಅಷ್ಟೊಂದು ದೂರ ನಿಖಿಲ್​​ ಕುಮಾರ್​ ಬಂದಿದ್ದೇಕೆ ಅನ್ನೋ ಹಲವು ಅನುಮಾನಗಳ ನಡುವೆ ಸ್ಥಳಕ್ಕೆ ಬಂದ ನಿಖಿಲ್​ ತಾತ ಮುನಿಯಪ್ಪ ಹಾಗೂ ಮಾವ ಮಾರುತಿ ನಿಖಿಲ್​ ತಂದೆ ಮಣಿಕಂಠನೆ ಕೊಲೆ ಮಾಡಿರುವುದು ಎಂದು ಹೇಳಿದ್ರು.