ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದಲ್ಲಿ ಸ್ಮಾರ್ಟ್ಫೋನ್ ಬಳಸಿ ಹೈಟೆಕ್ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಲಿಂಬೆಹಣ್ಣು, ತೆಂಗಿನಕಾಯಿ ಮೊದಲಾದ ವಸ್ತುಗಳೊಂದಿಗೆ ಸ್ಮಾರ್ಟ್ಫೋನ್ ಅನ್ನು ಬಳಸಿ ವಾಮಾಚಾರ ಮಾಡಲಾಗಿದೆ. ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಬೆಳಗಾವಿ (ಆಗಸ್ಟ್ 4): ಸಾಧಾರಣವಾಗಿ ಲಿಂಬೆ ಹಣ್ಣು, ಅರಿಶಿಣ ಕುಂಕುಮ ಇಟ್ಟು ವಾಮಾಚಾರ ಮಾಡೋದು ಸಾಮಾನ್ಯ. ಆದರೆ ಬೆಳಗಾವಿಯಲ್ಲೊಂದು ಹೈಟೆಕ್ ವಾಮಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದ ಹೊರವಲಯದಲ್ಲಿ ಅಪರೂಪದ ಮತ್ತು ಆಧುನಿಕ ತಂತ್ರದ ವಾಮಾಚಾರ ನಡೆಸಲಾಗಿದೆ. ಲಿಂಬೆಹಣ್ಣು, ಅರಿಶಿಣ, ಕುಂಕುಮದಂತಹ ವಸ್ತುಗಳನ್ನು ಬಳಸಿ ವಾಮಾಚಾರ ನಡೆಸುವುದು ಸಾಮಾನ್ಯವಾದರೂ, ಈ ಬಾರಿ ರೈತ ಸದಾನಂದ ದೇಸಾಯಿ ಅವರ ಜಮೀನಿನಲ್ಲಿ ಸ್ಮಾರ್ಟ್ಫೋನ್ ಸೇರಿದಂತೆ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ.
ಈ ಘಟನೆಯನ್ನು ಹೈಟೆಕ್ ವಾಮಾಚಾರವಾಗಿದೆ. ಗ್ರಾಮಸ್ಥರು ಈ ವಿಚಿತ್ರ ಘಟನೆಯನ್ನು ಗಮನಿಸಿ, ರೈತ ಮುಖಂಡ ರಾಜು ಮರವೆ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ರಾಜು, ಲಿಂಬೆಹಣ್ಣು, ಮೊಸರು, ತೆಂಗಿನಕಾಯಿ, ಎಲೆ-ಅಡಿಕೆ, ಕ್ಯಾರ್ ಬೀಜಗಳ ಜೊತೆಗೆ ಒಂದು ಸ್ಮಾರ್ಟ್ಫೋನ್ ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಈ ವಸ್ತುಗಳನ್ನು ಗಿಡಕ್ಕೆ ಗಂಟು ಕಟ್ಟಿ ಜಮೀನಿನಲ್ಲಿ ಇರಿಸಲಾಗಿತ್ತು. ಕಳೆದ ಕೆಲವು ತಿಂಗಳಿಂದ ಈ ಜಮೀನಿನಲ್ಲಿ ವಾಮಾಚಾರಕ್ಕೆ ಸಂಬಂಧಿಸಿದ ವಸ್ತುಗಳು ಸತತವಾಗಿ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟುಮಾಡಿದೆ. ಸ್ಥಳೀಯರು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದು, ಇದರ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಸಾಂಪ್ರದಾಯಿಕ ವಾಮಾಚಾರಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸಿರುವುದು ಆಶ್ಚರ್ಯಕರವಾಗಿದೆ. ಇದರ ಹಿಂದಿನ ಉದ್ದೇಶವನ್ನು ಕಂಡುಹಿಡಿಯಬೇಕು ಎಂದು ರಾಜು ಮರವೆ ಹೇಳಿದ್ದಾರೆ.
