ಬಾಂಗ್ಲಾದಲ್ಲಿ ಹಿಂದೂ ಸಂಸದ ರಮೇಶ್‌ ಚಂದ್ರ ಸೇನ್‌ ಜೈಲಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅಧಿಕಾರಿ ಇದು ಅನಾರೋಗ್ಯದಿಂದ ಸಂಭವಿಸಿದ ಸಾವು ಎಂದರೆ, ಇದು ಉದ್ದೇಶಪೂರ್ವಕ ಕೊಲೆ. ಹತ್ಯಾಕಾಂಡದ ಭಾಗ ಎಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷ ಆರೋಪಿಸಿದೆ.

ಢಾಕಾ: ಬಾಂಗ್ಲಾದಲ್ಲಿ ಸಾಮಾನ್ಯ ಹಿಂದೂಗಳ ಮಾರಣಹೋಮದ ನಡುವೆಯೇ, ಇದೀಗ ಹಿಂದೂ ಸಂಸದ ರಮೇಶ್‌ ಚಂದ್ರ ಸೇನ್‌ ಜೈಲಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಇದು ಅನಾರೋಗ್ಯದಿಂದ ಸಂಭವಿಸಿದ ಸಾವು ಎಂದರೆ, ಇದು ಉದ್ದೇಶಪೂರ್ವಕ ಕೊಲೆ. 2024ರಿಂದ ನಡೆಯುತ್ತಿರುವ ಹತ್ಯಾಕಾಂಡದ ಭಾಗ ಎಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷ ಆರೋಪಿಸಿದೆ.

5 ಬಾರಿ ಸಂಸದ, ಜಲ ಸಂಪನ್ಮೂಲ ಸಚಿವರಾಗಿಯೂ ಕೆಲಸ

ಅವಾಮಿ ಲೀಗ್‌ ಪಕ್ಷದ ಸೇನ್‌ (83) 5 ಬಾರಿ ಸಂಸದರಾದ, ಜಲ ಸಂಪನ್ಮೂಲ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದರು. ಹಸೀನಾ ಸರ್ಕಾರದ ಪತನ ನಂತರ ಕೊಲೆ ಸೇರಿದಂತೆ ಮೂರು ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗಿದ್ದು, ಅಂದಿನಿಂದ ಜೈಲಿನಲ್ಲಿದ್ದರು.

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ

ಶನಿವಾರ ಅವರನ್ನು ಅನಾರೋಗ್ಯ ಹಿನ್ನೆಲೆ ದಿನಾಜ್‌ಪುರ ಜಿಲ್ಲಾ ಕಾರಾಗ್ರಹದಿಂದ ದಿನಾಜ್‌ಪುರ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಆದರೆ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರದಲ್ಲಿ ಅವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿರಲಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಅವಾಮಿ ಲೀಗ್‌ ಕಾರ್ಯಕರ್ತರು ಇದೊಂದು ಜೈಲಿನಲ್ಲಿ ನಡೆದ ಉದ್ದೇಶಪೂರ್ವಕ ಕೊಲೆ ಎಂದು ಆರೋಪಿಸಿದ್ದಾರೆ. ಜಾಲತಾಣದಲ್ಲಿಯೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ‘2024ರ ಆಗಸ್ಟ್‌ನಿಂದ ನಡೆಯುತ್ತಿರುವ ಹತ್ಯಾಕಾಂಡದ ಮತ್ತೊಂದು ಭಾಗ, ನೂರಾರು ಹತ್ಯೆಗಳು ಈ ಪಟ್ಟಿಯಲ್ಲಿದೆ. ರಮೇಶ್‌ ಅವರದ್ದು ಹೊಸ ಹೆಸರಿನ ಸೇರ್ಪಡೆ’ ಎಂದು ಯೂನಸ್‌ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.