ಹಾಸನ ಜಿಲ್ಲೆಯ ಬೇಲೂರಿನಲ್ಲಿ, ಉಪತಹಸಿಲ್ದಾರ್ ತನ್ವಿರ್ ಅಹಮ್ಮದ್ ಅವರು ಮೇಲಧಿಕಾರಿಯ ಕಿರುಕುಳದಿಂದ ನೊಂದು ಕಚೇರಿ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯು ಸರ್ಕಾರಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಾಸನ (ಜ.22): ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮೇಲಧಿಕಾರಿಯ ಕಿರುಕುಳ ತಾಳಲಾರದೆ ಉಪತಹಸಿಲ್ದಾರ್ ಒಬ್ಬರು ಸರ್ಕಾರಿ ಕಚೇರಿಯ ಆವರಣದಲ್ಲೇ ಆತ್ಮ೧ಹತ್ಯೆಗೆ ಯತ್ನಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಚೇರಿ ಆವರಣದಲ್ಲೇ ಮಾತ್ರೆ ಸೇವನೆ
ಬೇಲೂರು ತಾಲೂಕು ಕಚೇರಿಯಲ್ಲಿ ಉಪತಹಸಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ತನ್ವಿರ್ ಅಹಮ್ಮದ್ ಅವರು ಇಂದು ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ. ಕಚೇರಿಯ ಆವರಣದಲ್ಲೇ ಈ ಘಟನೆ ನಡೆದಿದ್ದು, ಕೂಡಲೇ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದ್ದಾರೆ.
ತಹಸಿಲ್ದಾರ್ ಶ್ರೀಧರ್ ವಿರುದ್ಧ ಗಂಭೀರ ಆರೋಪ
ಬೇಲೂರು ತಹಸಿಲ್ದಾರ್ ಶ್ರೀಧರ್ ಅವರು ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತನ್ವಿರ್ ಅಹಮ್ಮದ್ ಆರೋಪಿಸಿದ್ದಾರೆ. ಉದ್ದೇಶಪೂರ್ವಕವಾಗಿ ಹೆಚ್ಚಿನ ಕೆಲಸದ ಒತ್ತಡ ಹೇರುವ ಮೂಲಕ ಮಾನಸಿಕವಾಗಿ ಹಿಂಸಿಸುತ್ತಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೇಲಧಿಕಾರಿಯ ನಡವಳಿಕೆಯಿಂದ ಮನನೊಂದು ಈ ಹಂತಕ್ಕೆ ಹೋಗಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ
ಆತ್ಮಹತ್ಯೆಗೆ ಯತ್ನಿಸಿದ ತನ್ವಿರ್ ಅಹಮ್ಮದ್ ಅವರನ್ನು ತಕ್ಷಣವೇ ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಕಂದಾಯ ಇಲಾಖೆಯ ಒಳಗಿನ ಈ ಗೊಂದಲವು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಹಸಿಲ್ದಾರ್ ಅವರ ಕಿರುಕುಳದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.


