ಮಂಗಳೂರಿನಲ್ಲಿ ಗ್ಯಾಂಗ್ ರೇ*ಪ್: ಗೂಗಲ್ ಪೇ ನೀಡಿದ ಸುಳಿವು, ಮೂವರ ಬಂಧನ

Synopsis
ಕಡಲ ತಡಿ ಮಂಗಳೂರಿನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳ ಮೇಲೆ ಭೀಕರ ಗ್ಯಾಂಗ್ ರೇಪ್ ನಡೆದಿದೆ. ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಬಲಾತ್ಕಾರ ಎಸಗಲಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಏ.17): ಕಡಲ ತಡಿ ಮಂಗಳೂರಿನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳ ಮೇಲೆ ಭೀಕರ ಗ್ಯಾಂಗ್ ರೇಪ್ ನಡೆದಿದೆ. ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಬಲಾತ್ಕಾರ ಎಸಗಲಾಗಿದೆ. ಗೆಳೆಯನ ಜೊತೆಗೆ ಮುನಿಸಿಕೊಂಡು ಬಂದ ಯುವತಿಯನ್ನ ಮದ್ಯಪಾನ ಮಾಡಿಸಿ ಬಲಾತ್ಕಾರ ಮಾಡಿದ್ದು, ಮಂಗಳೂರಿನ ಸ್ಥಳೀಯ ಆಟೋ ಚಾಲಕ ಸೇರಿ ಮೂವರ ಬಂಧನವಾಗಿದೆ. ಮುಲ್ಕಿ ನಿವಾಸಿ 10 ವರ್ಷಕ್ಕಿಂತ ಹೆಚ್ಚು ಕಾಲ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪ್ರಭುರಾಜ್ (38), ಕುಂಪಲ ನಿವಾಸಿ ಇಲೆಕ್ಟಿಷಿಯನ್ ಕಾರ್ಯನಿರ್ವಹಿಸುವ ಮಿಥುನ್ (30) ಹಾಗೂ ಮಂಗಳೂರಿನಲ್ಲಿ ವಾಸ ಮಾಡುವ ಮತ್ತೋರ್ವ ಗೆಳೆಯ ಮಣಿಯನ್ನು ಬಂಧಿಸಲಾಗಿದೆ.
ಮಧ್ಯರಾತ್ರಿ ಬಂದು ಸ್ಥಳೀಯ ಮನೆಯ ಬಾಗಿಲು ಬಡಿದಿದ್ದ ಯುವತಿ: ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಕುತ್ತಾರು ಎನ್ನುವ ಊರು ದಾಟಿ ಸಾಗಿದಾಗ ಇಳಿಜಾರಿನಂತಿರೋ ಬಂಗ್ಲೆ ಕೊಟ್ಟಾರಿಮೂಲೆ ಎನ್ನುವ ನಿರ್ಜನ ಪ್ರದೇಶದಲ್ಲಿ ನಡೆದ ಈ ಘಟನೆ ಇಡೀ ಮಂಗಳೂರಿಗರನ್ನ ಅಕ್ಷರಶಃ ಬೆಚ್ಚಿ ಬೀಳಿಸಿದೆ. ಮುನ್ನೂರು ಗ್ರಾಮದ ಜನರು ಇನ್ನೇನು ನಿದ್ದೆಗೆ ಜಾರಬೇಕು ಎನ್ನುವಷ್ಟರಲ್ಲಿ ಗ್ರಾಮದ ರಾಜೇಶ್ ಎಂಬವರ ಮನೆಯ ಬಾಗಿಲು ಬಡಿದ ಸದ್ದು ಕೇಳಿಸಿದೆ. ಮನೆಯವರು ಹೊರಗೆ ಬಂದು ನೋಡಿದಾಗ ಯುವತಿಯೊಬ್ಬಳು ನಶೆಯಲ್ಲಿದ್ದು, ಕಣ್ಣೀರು ಹಾಕುತ್ತಲೇ ಮನೆಯವರ ಬಳಿ ನೀರು ಕೇಳಿದ್ದಾಳೆ. ನೀರು ಕೇಳಿದ ತಕ್ಷಣ ಆಕೆ ಪ್ರಜ್ಞೆ ತಪ್ಪಿದ್ದು, ಸೇರಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ವಕ್ಫ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ: ರಸ್ತೆ ಸಂಚಾರ ನಿರ್ಬಂಧಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!
ಹಿಂದಿ ಭಾಷೆ ಮಾತನಾಡ್ತಿದ್ದ ಯುವತಿಯ ಕೈ ಮತ್ತು ಕತ್ತಿನ ಮೇಲೆ ಗಾಯಗಳಿದ್ದು, ವಿಪರೀತ ಮದ್ಯ ಸೇವಿಸಿ ನಶೆ ಹೆಚ್ಚಾಗಿ ಪ್ರಜ್ಞೆ ತಪ್ಪಿದ್ದಳು. ಬಳಿಕ ಸ್ಥಳೀಯರು ನೀರು ಕುಡಿಸಿ ಎಬ್ಬಿಸಿ ವಿಚಾರಿಸಿದಾಗ ತಾನು ಪಶ್ಚಿಮ ಬಂಗಾಳ ಮೂಲದವಳಾಗಿದ್ದು, ಕೇರಳದ ಉಪ್ಪಳದಲ್ಲಿ ವಾಸವಿರೋ ಬಗ್ಗೆ ಮಾಹಿತಿ ನೀಡಿದ್ದಾಳೆ. ಅಲ್ಲದೇ ಯಾರೋ ಆಟೋ ಚಾಲಕ ಈ ನಿರ್ಜನ ಜಾಗಕ್ಕೆ ತಂದು ಬಿಟ್ಡಿದ್ದಾಗಿಯೂ ಆತನ ಜೊತೆಗೆ ಮತ್ತಿಬ್ವರು ಇದ್ದ ಬಗ್ಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಪೊಲೀಸರು ಆಕೆಯನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಯುವತಿ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರೋದು ಗೊತ್ತಾಗಿದೆ. ಸದ್ಯ ಪೊಲೀಸ್ ತನಿಖೆ ಪ್ರಕಾರ ಉಪ್ಪಳದಲ್ಲಿ ಗೆಳೆಯನ ಜೊತೆಗೆ ಕಳೆದ ಎರಡು ವರ್ಷಗಳಿಂದ ಕೆಲಸಕ್ಕಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿ ಎನ್ನಲಾಗಿದೆ.
ನಿನ್ನೆ ಸಂಜೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಮುನಿಸಿಕೊಂಡಿದ್ದಳು. ಇದರಿಂದ ಬೇಸರಗೊಂಡ ಯುವತಿ ಉಪ್ಪಳದಲ್ಲಿ ಮಂಗಳೂರು ತೆರಳುವ ರೈಲನ್ನೇರಿದ್ದಳು. ಉಪ್ಪಳ ದಾಟಿ ರೈಲು ಸೋಮೇಶ್ವರದ ಉಳ್ಳಾಲ ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲಿನಿಂದ ಇಳಿದು ನಿಲ್ದಾಣದಲ್ಲೇ ಕುಳಿತಿದ್ದಳು. ಅಲ್ಲೇ ರಿಕ್ಷಾ ಚಾಲಕರಾಗಿದ್ದ ಮಂಗಳೂರಿನ ಕುಂಪಲ ನಿವಾಸಿಯೊಬ್ಬ ಯುವತಿ ಅಳುತ್ತಾ ಇರುವುದನ್ನು ಗಮನಿಸಿ ಕಷ್ಟಸುಖ ಮಾತನಾಡಿಸಿ, ಕೆಲಸ ಕೊಡಿಸುವುದಾಗಿ ನಂಬಿಸಿರುವ ಮಾಹಿತಿಯಿದೆ. ಅದರಂತೆ ಯುವತಿಯನ್ನು ರಿಕ್ಷಾದಲ್ಲಿ ಕರೆತಂದು ಮುನ್ನೂರು ರಾಣಿಪುರದ ಋಷಿವನ ಮಾರ್ಗವಾಗಿ ನೇತ್ರಾವತಿ ನದಿ ತೀರದತ್ತ ಕೊಂಡೊಯ್ದಿದ್ದಾರೆ.
ಅಲ್ಲಿ ತನ್ನ ಗೆಳೆಯರನ್ನು ಕರೆಸಿದ ರಿಕ್ಷಾ ಚಾಲಕ ಕಾರಿನಲ್ಲಿ ಯುವತಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಸಾಮೂಹಿಕವಾಗಿ ಬಲಾತ್ಕಾರ ನಡೆಸಿದ್ದಾರೆ. ಬಳಿಕ ಯುವತಿಯನ್ನು ಅಲ್ಲೇ ಬಿಟ್ಟ ಗ್ಯಾಂಗ್ ವಾಪಸ್ಸು ತೆರಳಿದೆ. ಅಸ್ವಸ್ಥಳಾಗಿದ್ದ ಯುವತಿ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ ಹಿನ್ನೆಲೆಯಲ್ಲಿ ಹೊಟ್ಟೆಯುರಿ ತಡೆದುಕೊಳ್ಳಲಾರದೆ, ತಡರಾತ್ರಿ 1.30 ಸುಮಾರಿಗೆ ಮನೆಗಳನ್ನು ಹುಡುಕುತ್ತಾ ನೆರೆಯ ಮನೆಯೊಂದಕ್ಕೆ ತೆರಳಿ ನೀರು ಕೇಳಿದ್ದಾಳೆ. ಯುವತಿಯನ್ನು ಉಪಚರಿಸಿ ನೀರು ಕುಡಿಸಿ ಹರಿದ ಬಟ್ಟೆಗಳ ಮೇಲೆ ಶಾಲನ್ನು ಹೊದಿಸಿದ್ದಾರೆ. ಅಲ್ಲದೆ ಕುತ್ತಿಗೆ ಮತ್ತು ಕೈಗಳ ಭಾಗದಲ್ಲಿ ಗಾಯಗಳನ್ನು ಗಮನಿಸಿದ್ದಾರೆ. ಮೇಲ್ನೋಟಕ್ಕೆ ಸಾಮೂಹಿಕ ಬಲಾತ್ಕಾರ ಎಂಬುದಾಗಿ ಗಮನಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವತಿ ರಿಕ್ಷಾ ಚಾಲಕನಿಗೆ ಗೂಗಲ್ ಪೇ ಮಾಡಿದ ಸಾಕ್ಷ್ಯಾಧಾರದ ಮೇಲೆ ಆಟೋ ಚಾಲಕ ಪ್ರಭುರಾಜ್ ಬಂಧನವಾಗಿದೆ.
ಯುವತಿ ದೂರಿನಂತೆ ಗ್ಯಾಂಗ್ ರೇಪ್: ಇನ್ನು ಘಟನೆ ಬಗ್ಗೆ ಮಂಗಳೂರು ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿಕೆ ನೀಡಿದ್ದಾರೆ. ನಿನ್ನೆ ರಾತ್ರಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಮಧ್ಯರಾತ್ರಿ 1.30 ಸುಮಾರಿಗೆ 112 ಒಂದು ಕರೆ ಬಂದಿರುತ್ತದೆ. ಒಂದು ಹುಡುಗಿ ಕೂಗಾಡುತ್ತಿದ್ದಾಳೆ, ಆಕೆಗೆ ಹಲ್ಲೆ ಮಾಡಿದ್ದಾರೆ ಎಂಬ ದೂರು ಸ್ವೀಕೃತವಾಗಿದೆ. ತಕ್ಷಣವೇ ಹೊಯ್ಸಳ ಘಟನಾ ಸ್ಥಳಕ್ಕೆ ತೆರಳಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅವಳು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ಅವಳ ಹೇಳಿಕೆ ಪ್ರಕಾರ ನಿನ್ನೆ ರಾತ್ರಿ ಯಾರೋ ಅವಳಿಗೆ ಮದ್ಯಪಾನ ಮಾಡಿಸಿದ್ದಾರೆ. ಆನಂತರ ಪ್ರಜ್ಞೆ ತಪ್ಪಿದ್ದು, ಕಾರಲ್ಲಿ ಮೂರು ಜನ ಇದ್ದಿದ್ದಾಗಿ ಯುವತಿ ತಿಳಿಸಿದ್ದಾಳೆ.
ಪ್ರಜ್ಞೆ ಬಂದ ನಂತರ ಅವಳ ಒಳ ಉಡುಪು ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾಳೆ. ಪ್ರಜ್ಞೆ ಬಂದು ಅವಳು ಕೂಗಾಡಲು ಶುರು ಮಾಡಿದಾಗ ಅವರು ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಆ ಬಳಿಕ ಸ್ಥಳೀಯರ ಸಹಾಯದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಅವಳ ದೂರಿನ ಆಧಾರದಲ್ಲಿ ಬಲಾತ್ಕಾರ ಪ್ರಕರಣ ದಾಖಲಿಸಿದ್ದೇವೆ. ನಿನ್ನೆ ಬೆಳಿಗ್ಗೆ ತನ್ನ ಗೆಳೆಯನ ಜೊತೆಗೆ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದಳು. ಪಶ್ಚಿಮ ಬಂಗಾಳದ ಕುಚ್ ಬಿಹಾರ್ ಮೂಲದವಳಾದ ಯುವತಿ 2-3 ವರ್ಷಗಳಿಂದ ಕೇರಳದ ಫ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮಂಗಳೂರಿನಲ್ಲಿ ಬೇರೆ ಸಂಸ್ಥೆಯಲ್ಲಿ ಕೆಲಸದ ಅವಕಾಶವಿದ್ದ ಕಾರಣ ಗೆಳೆಯನ ಜೊತೆ ಮಂಗಳೂರಿಗೆ ಬಂದಿದ್ದಳು.
ಈ ವೇಳೆ ಗೆಳೆಯನ ಜೊತೆಗೆ ಜಗಳವಾಗಿ ಆತ ಈಕೆಯ ಮೊಬೈಲಿಗೆ ಹಾನಿ ಮಾಡಿದ್ದ. ಹಾಗಾಗಿ ಮೊಬೈಲ್ ರಿಪೇರಿಗೆಂದು ಆಟೋ ಹಿಡಿದು ಮೊಬೈಲ್ ಅಂಗಡಿಗೆ ತೆರಳಿದ್ದಾಳೆ. 5-6 ಗಂಟೆಗಳ ಕಾಲ ಆಕೆ ಆಟೋ ಡ್ರೈವರ್ ಜೊತೆಗೇ ಇದ್ದು, ಅವನ ಜೊತೆಗೆ ಗೆಳೆತನ ಆಗಿದೆ. ಮೊಬೈಲ್ ರಿಪೇರಿ ಹಣ ಕೂಡಾ ಆತನೇ ಪಾವತಿಸಿದ್ದ. ಆ ಬಳಿಕ ಆಕೆ ರಾತ್ರಿ ವೇಳೆ ಪ.ಬಂಗಾಳ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡಲು ಆಟೋ ಡ್ರೈವರಿಗೆ ಹೇಳುತ್ತಾಳೆ. ಆದರೆ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಹೋಗದೇ ಆಟೋ ಡ್ರೈವರ್ ಮತ್ತಿಬ್ಬರ ಗೆಳೆಯರನ್ನು ಕರೆಸಿ ಬೇರೊಂದು ಜಾಗಕ್ಕೆ ಹೋಗುತ್ತಾರೆ. ಆ ಜಾಗದಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಆಕೆ ಪ್ರಜ್ಞೆ ತಪ್ಪಿದ್ದು , ಪ್ರಜ್ಞೆ ಬಂದಾಗ ಬಲಾತ್ಕಾರ ನಡೆದಿರುವುದು ಆಕೆ ಗಮನಕ್ಕೆ ಬಂದಿದೆ.
ವಾಸನೆ ಸಹಿತ ಹಳದಿ ಬಣ್ಣ ಕೊಳಚೆ ನೀರೇ ಕಟ್ಟೆಹಾಡಿ ಜನರಿಗೆ ಜೀವಜಲ!
ಸದ್ಯ ಈ ಪ್ರಕರಣದ ತನಿಖೆ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮುಲ್ಕಿ ನಿವಾಸಿ 10 ವರ್ಷಕ್ಕಿಂತ ಹೆಚ್ಚು ಕಾಲ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪ್ರಭುರಾಜ್ (38),. ನಿನ್ನೆ ಮಧ್ಯಾಹ್ನ 2.30 ಸುಮಾರಿಗೆ ಆಕೆಯನ್ನು ಆಟೋದಲ್ಲಿ ಪ್ರಭುರಾಜ್ ಪಿಕಪ್ ನಡೆಸಿದ್ದನು. ಆ ಬಳಿಕ ಪ್ರಭುರಾಜ್ ಕುಂಪಲ ನಿವಾಸಿ ಇಲೆಕ್ಟೀಷಿಯನ್ ಕಾರ್ಯನಿರ್ವಹಿಸುವ ಮಿಥುನ್ (30) ಹಾಗೂ ಮಂಗಳೂರಿನಲ್ಲಿ ವಾಸ ಮಾಡುವ ಮತ್ತೋರ್ವ ಗೆಳೆಯ ಮಣಿ ಎಂಬಾತನನ್ನು ಕರೆದಿರುತ್ತಾರೆ. ಈ ಮೂವರು ಆಕೆಗೆ ಚೆನ್ನಾಗಿ ಕುಡಿಸಿ ಅವರು ಚೆನ್ನಾಗಿ ಕುಡಿದು ಬಲಾತ್ಕಾರ ಎಸಗಿದ್ದಾರೆ. ಯುವತಿ ತನ್ನ ಹೇಳಿಕೆಯಲ್ಲಿ ತನ್ನ ಮೇಲೆ ಬಲಾತ್ಕಾರ ಆಗಿರುವುದಾಗಿ ಹೇಳಿದ್ದಾಳೆ. ವೈದ್ಯಕೀಯ ವರದಿ ಬಂದ ಬಳಿಕ ಬಲಾತ್ಕಾರ ಆಗಿದೆ ಇಲ್ಲವೋ ಅನ್ನುವುದು ದಢಪಡಿಸಲಾಗುವುದು ಎಂದಿದ್ದಾರೆ.