ಬೆಂಗಳೂರಿನ ಚಿಕ್ಕಜಾಲ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಹಂದಿ ಕದಿಯಲು ಯತ್ನಿಸಿದ್ದ ಕಳ್ಳರು

ಗಂಗಾವತಿ/ ಕಾರಟಗಿ(ಜು.23): ತಮ್ಮನ್ನು ಸೆರೆ ಹಿಡಿಯಲು ಬಂದ ಪೊಲೀಸರ ಮೇಲೆ ದರೋಡೆಕೋರರು ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿ, ಇಬ್ಬರನ್ನು ಗಾಯಗೊಳಿಸಿದ ಘಟನೆ ಕಾರಟಗಿ ತಾಲೂಕಿನ ಮೂಷ್ಟೂರು ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ಡಕಾಯಿತಿ, ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಐವರು ಆರೋಪಿಗಳನ್ನು ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಸಿಂಧನೂರು ತಾಲೂಕಿನ ಅಂಬಾಮಠದ ಅಂಬಣ್ಣ ರಾಮಣ್ಣ, ಪರಶುರಾಮ ರಾಮಣ್ಣ, ಶಂಕರ ರಮೇಶ್‌ ಹಾಗೂ ಸವದತ್ತಿ ತಾಲೂಕಿನ ಬೆಳ್ಳಟ್ಟಿಗ್ರಾಮದ ಅಡಿವೆಪ್ಪ ಬಸಪ್ಪ, ಅಶೋಕ ಎಂದು ಗುರುತಿಸಲಾಗಿದೆ.

Add Asianetnews Kannada as a Preferred SourcegooglePreferred

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಈ ಆರೋಪಿಗಳಿಗಾಗಿ ಈಶಾನ್ಯ ಡಿಸಿಪಿ ಅನೂಪ್‌ ಶೆಟ್ಟಿನೇತೃತ್ವದ ತಂಡ ಹುಡುಕಾಟ ನಡೆಸಿತ್ತು. ಆದರೆ ಪೋಲೀಸರ ಕಣ್ತಪ್ಪಿಸಿ ಓಡಾಟ ನಡೆಸಿದ್ದ ಕಳ್ಳರು ತಮ್ಮ ಬುಲೆರೋ ಗೂಡ್ಸ್‌ ವಾಹನವನ್ನು ಮರಳಿ ಗ್ರಾಮದ ಟೋಲ್‌ ಬಳಿ ನಿಲ್ಲಿಸಿ ಮಲಗಿದ್ದಾರೆ. ಅದರ ಮಾಹಿತಿ ಪಡೆದು ಪೊಲೀಸ್‌ ಅಧಿಕಾರಿಗಳು ಅಲ್ಲಿಗೆ ಆಗಮಿಸಿ ಪರಿಶೀಲಿಸಿದ್ದು, ಕ್ಯಾಬಿನ್‌ನಲ್ಲಿ ಇಬ್ಬರು ಮತ್ತು ಹಿಂದೆ ಮೂವರು ಮಲಗಿದ್ದರು.

ರೈಲ್ವೆ ಸ್ಟೇಷನ್‌ನಲ್ಲೇ ಅತ್ಯಾಚಾರ: ಕೃತ್ಯವೆಸಗಿದ 4 ಉದ್ಯೋಗಿಗಳ ಬಂಧನ

ಆರೋಪಿಗಳನ್ನು ಬಂಧಿಸಲು ನಾಲ್ವರು ಪೊಲೀಸರು ವಾಹನ ಏರಿದ್ದಾರೆ. ಎಚ್ಚರಗೊಂಡ ದರೋಡೆಕೋರರು ವಾಹನ ಓಡಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. 120, 140 ಕಿ.ಮೀ. ವೇಗದಲ್ಲಿ ನರಸಾಪುರ, ಮುಷ್ಟೂರು ಮಾರ್ಗದಲ್ಲಿ ವಾಹನ ಓಡಿಸಿದ್ದಾರೆ. ಪೊಲೀಸ್‌ ವಾಹನ ಸಹ ಇವರನ್ನು ಹಿಂಬಾಲಿಸಿಕೊಂಡು ಬಂದಿದೆ.

ಕುಂಟೋಜಿ ಗ್ರಾಮದ ಕಡೆಗೆ ತೆರಳಿದ ಖದೀಮರು ವಾಹನ ಅಪಘಾತ ಪಡಿಸುವ ಕುರಿತು ತೆಲುಗು ಭಾಷೆಯಲ್ಲಿ ಮಾತನಾಡಿದ್ದಾರೆ. ಇದಲ್ಲದೇ ಮುಖ್ಯ ಕಾನ್‌ಸ್ಟೇಬಲ್‌ ಬಸವರಾಜ ನಾಯಕ್‌ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ತಕ್ಷಣ ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರವೀಣ ಗುಂಡಿನ ದಾಳಿ ನಡೆಸಿದ್ದು, ಅಶೋಕ ಬೆಳ್ಳಟ್ಟಿಮತ್ತು ಶಂಕರ ಸಿಂಧನೂರು ಗಾಯಗೊಂಡಿದ್ದು, ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸವರಾಜ ನಾಯಕ್‌ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಏನಿದು ಪ್ರಕರಣ?:

ಬೆಂಗಳೂರಿನ ಚಿಕ್ಕಜಾಲ ಪೊಲೀಸ್‌ ಠಾಣೆಯ ವ್ಯಾಪ್ತಿಯ ಕೊಡಗಲಿ ಹತ್ತಿರ ಫಾರಂ ಒಂದರಲ್ಲಿ ಜು. 16ರಂದು ರಾತ್ರಿ 2 ಗಂಟೆ ಸುಮಾರಿಗೆ 90 ಹಂದಿಗಳನ್ನು ಕದಿಯಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಫಾರಂ ಮಾಲೀಕರಾದ ಸಂದೀಪ್‌ ಮತ್ತು ರಾಮಚಂದ್ರಪ್ಪ ಎಂಬವರ ಮೇಲೆ ಡಕಾಯಿತರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಚಿಕ್ಕಜಾಲ ಪೊಲೀಸರು ಡಕಾಯಿತರ ಪತ್ತೆಗಾಗಿ ವ್ಯಾಪಾಕ ಶೋಧನೆ ನಡೆಸಿದ್ದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯ ಪಿಐ ಮಂಜುನಾಥ, ಗಂಗಾವತಿ ಪಿಐ ವೆಂಕಟಸ್ವಾಮಿ ಕಾರಟಗಿ ಪಿಐ ವೀರಭದ್ರಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Bengaluru Crime News: ಕುಖ್ಯಾತ ಬೈಕ್ ಕಳ್ಳರ ಬಂಧನ: 76 ಬೈಕ್ ರಿಕವರಿ

ಹಲವು ಪ್ರಕರಣಗಳಲ್ಲಿ ಭಾಗಿ

ಗಂಗಾವತಿ: ಪೊಲೀಸರ ಗುಂಡಿನ ದಾಳಿಗೆ ಒಳಗಾದ ಇಬ್ಬರು ಸೇರಿದಂತೆ ಐವರು ಡಕಾಯಿತರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.

ಮೂಷ್ಟೂರು ಗ್ರಾಮದ ಹತ್ತಿರ ಡಕಾಯಿತರ ಮೇಲೆ ನಡೆದ ಪೊಲೀಸರ ಗುಂಡಿನ ದಾಳಿಯಿಂದ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಬೆಂಗಳೂರಿನ ಚಿಕ್ಕಜಾಲ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಹಂದಿಗಳನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಕಳ್ಳರ ಶೋಧನೆಗೆ ಪೊಲೀಸರ ತಂಡ ರಚಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಚಿಕ್ಕಜಾಲ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಇದ್ದರು.