Asianet Suvarna News Asianet Suvarna News

ಬೆಂಗಳೂರು: ವಿಡಿಯೋ ಇದೆ ಎಂದು ಪೊಲೀಸ್, ಪತ್ರಕರ್ತನ ಹೆಸರಲ್ಲಿ ಹಣ ಸುಲಿಗೆ

ರಂಧೀರ್‌, ವಿವಿಧ ಹಂತಗಳಲ್ಲಿ ₹1.12 ಲಕ್ಷ ವರ್ಗಾಯಿಸಿದ್ದಾರೆ. ಅನಾಮಧೇಯ ವ್ಯಕ್ತಿ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದಾಗ, ರಂಧೀರ್‌ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ. 

Extortion of Money in the name of Police Journalist in Bengaluru grg
Author
First Published Dec 25, 2023, 4:32 AM IST

ಬೆಂಗಳೂರು(ಡಿ.25):  ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಮಹಿಳೆಯ ಜತೆಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಇದೆ ಎಂದು ಬೆದರಿಸಿ ₹1.12 ಲಕ್ಷ ಪಡೆದು ವಂಚಿಸಿರುವ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೊಳಗಾದ ಬೇಗೂರಿನ ದೇವರಚಿಕ್ಕನಹಳ್ಳಿ ನಿವಾಸಿ ರಂಧೀರ್‌ (29) ದೂರು ನೀಡಿದ್ದಾರೆ

ದೂರುದಾರ ರಂಧೀರ್‌ ಮೊಬೈಲ್‌ಗೆ ಡಿ.3ರ ರಾತ್ರಿ 12.30ರ ಸುಮಾರಿಗೆ ಅನಾಮಧೇಯ ಸಂಖ್ಯೆಯಿಂದ ವಾಟ್ಸಾಪ್‌ ವಿಡಿಯೋ ಕರೆ ಬಂದಿದೆ. ಕರೆ ಮಾಡಿದ್ದ ಮಹಿಳೆ ನಗ್ನವಾಗಿದ್ದು, ರಂಧೀರ್‌ನನ್ನು ನಗ್ನವಾಗುವಂತೆ ಸೂಚಿಸಿದ್ದಾಳೆ. ಈ ವೇಳೆ ಭಯಗೊಂಡ ರಂಧೀರ್‌, ಕರೆ ಸ್ಥಗಿತಗೊಳಿಸಿ ಆ ಸಂಖ್ಯೆಯನ್ನು ಡಿಲೀಟ್‌ ಮಾಡಿದ್ದಾರೆ

ಕಲಬುರಗಿ: ಜೀವ ಬೆದರಿಕೆ ಹಾಕಿ ತಾಳಿಸರ ಸುಲಿಗೆ

ಬಂಧಿಸುವ ಬೆದರಿಕೆ:

ಡಿ.14ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅನಾಮಧೇಯ ಸಂಖ್ಯೆಯಿಂದ ರಂಧೀರ್‌ ಮೊಬೈಲ್‌ಗೆ ವಿಡಿಯೋ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ವಿಡಿಯೋ ಕರೆ ಮಾಡಿದ್ದ ವ್ಯಕ್ತಿ ಖಾಕಿ ಸಮವಸ್ತ್ರದಲ್ಲಿರುವುದು ಕಂಡು ಬಂದಿದೆ. ಆತ ‘ನಾನು ಪೊಲೀಸ್‌ ಅಧಿಕಾರಿಯಾಗಿದ್ದು, ನೀನು ಮಹಿಳೆ ಜತೆಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್‌ ಆಗುತ್ತಿದೆ. ಈ ಬಗ್ಗೆ ನನಗೆ ದೂರು ಬಂದಿದ್ದು, ನಿನ್ನನ್ನು ಬಂಧಿಸಬೇಕಿದೆ’ ಎಂದು ಹೆದರಿಸಿದ್ದಾನೆ.

ಮುಂದುವರೆದು, ‘ನೀನು ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ, ಕರೆ ಮಾಡು ಎಂದು ಒಂದು ಮೊಬೈಲ್‌ ಸಂಖ್ಯೆ ನೀಡಿದ್ದಾನೆ. ಅದು ಟಿವಿ ಮಾಧ್ಯಮದವರ ಸಂಖ್ಯೆ’ ಎಂದು ಹೇಳಿದ್ದಾನೆ. ಇದಾದ ಬಳಿಕ ಅದೇ ಸಂಖ್ಯೆಯಿಂದ ರಂಧೀರ್‌ಗೆ ಕರೆ ಬಂದಿದ್ದು, ‘ನಾನು ಖಾಸಗಿ ನ್ಯೂಸ್‌ ಚಾನೆಲ್‌ನವನು. ನನ್ನ ಬಳಿ ನಿನ್ನ ನಗ್ನ ವಿಡಿಯೋ ಇದ್ದು, ನೀನು ನನಗೆ ಹಣ ನೀಡಿದರೆ, ನಾನು ನಿನ್ನ ವಿಡಿಯೋ ಡಿಲೀಟ್‌ ಮಾಡುತ್ತೇನೆ’ ಎಂದು ಹೇಳಿದ್ದಾನೆ.

ಇದರಿಂದ ಆತಂಕಗೊಂಡ ರಂಧೀರ್‌, ವಿವಿಧ ಹಂತಗಳಲ್ಲಿ ₹1.12 ಲಕ್ಷ ವರ್ಗಾಯಿಸಿದ್ದಾರೆ. ಅನಾಮಧೇಯ ವ್ಯಕ್ತಿ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದಾಗ, ರಂಧೀರ್‌ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios