ಮಂತ್ರಿ ಗ್ರೂಪ್ನ ಕೋಟ್ಯಾಂತರ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಿದ ED
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂತ್ರಿ ಗ್ರೂಪ್ ನ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ .ಬೆಂಗಳೂರು
ಬೆಂಗಳೂರು, (ಆಗಸ್ಟ್. 12): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂತ್ರಿ ಗ್ರೂಪ್ ಆಸ್ತಿಯನ್ನು ಇಡಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಖ್ಯಾತ ರಿಯಲ್ ಎಸ್ಟೇಟ್ ಕಂಪನಿಯಾದ ಮಂತ್ರಿ ಗ್ರೂಪ್ ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಗೆ ಸೇರಿದ 300.4 ಕೋಟಿ ರೂಪಾಯಿ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಆಕರ್ಷಕ ಬೆಲೆಯಲ್ಲಿ ಪ್ಲ್ಯಾಟ್ ನಿರ್ಮಿಸಿಕೊಡುವುದಾಗಿ ನಂಬಿಸಿ ಕಂಪನಿಯು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದಿತ್ತು. ಏಳು ವರ್ಷವಾದರೂ ಪ್ಲ್ಯಾಟ್ ನಿರ್ಮಿಸದೆ ಹಣ ಇತರ ಉದ್ದೇಶಗಳಿಗೆ ಹಣ ವರ್ಗಾವಣೆ ಸಂಬಂಧ ಕಂಪನಿ ವಿರುದ್ಧ ಸುಬ್ರಮಣ್ಯನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿತ್ತು.
ಮಂತ್ರಿ ಗ್ರೂಪ್ ಎಂಡಿ ಬಂಧನ: ಸಾವಿರಾರು ಮಂದಿಯಿಂದ ಹಣ ಪಡೆದು ಫ್ಲ್ಯಾಟ್ ನೀಡದೆ ವಂಚನೆ
ಈ ಸಂಬಂಧ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆವ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು.ತನಿಖಾ ಹಂತದಲ್ಲಿ ಅಕ್ರಮ ಎಸಗಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದರಿಂದ ಕಳೆದ ಜೂನ್ 24ರಂದು ಮಾಲೀಕ ಹಾಗೂ ಎಂಡಿಯಾಗಿರುವ ಸುಶೀಲ್ ಪಾಂಡುರಂಗನನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ಆಕರ್ಷಕ ಬೆಲೆಗೆ ಪ್ಲ್ಯಾಟ್ ನಿರ್ಮಿಸಿಕೊಡುವುದಾಗಿ ಜಾಹೀರಾತು ಪ್ರಕಟಿಸಿ ಗ್ರಾಹಕರನ್ನು ಸೆಳೆಯುತ್ತಿದ್ದರು. ಕಂತು ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣ ಪಾವತಿಸಿಕೊಂಡು ಏಳು ವರ್ಷ ಮುಗಿದರೂ ಪ್ಲ್ಯಾಟ್ ನಿರ್ಮಿಸಿಕೊಡದೆ ವಂಚನೆ ಎಸಗಿರುವುದು ಕಂಡುಬಂದಿತ್ತು. ಸಾರ್ವಜನಿಕರ ಹಣವನ್ನ ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಮೋಸ ಮಾಡಕೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಂತ್ರಿ ಗ್ರೂಪ್ ಗೆ ಸೇರಿದ 300.4 ಕೋಟಿ ರೂಪಾಯಿ ಸ್ತಿರಾಸ್ತಿ ಜಪ್ತಿ ಮಾಡಿಕೊಂಡಿದೆ.
ಅಕ್ರಮವಾಗಿ ಹಣ ವಹಿವಾಟು ನಡೆಸಿರುವುದಕ್ಕೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿತ್ತು. ಹಣಕಾಸು ವ್ಯವಹಾರದಲ್ಲಿ ಸಾಕಷ್ಟುವ್ಯತ್ಯಾಸ ಕಂಡು ಬಂದಿತ್ತು. ಸುಶೀಲ್ ಜನರಿಗೆ ದಾರಿ ತಪ್ಪಿಸುವ ಬ್ರೌಚರ್ ತೋರಿಸಿ ಯೋಜನೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಅಲ್ಲದೇ, ಬೆಂಗಳೂರಿನ ಫ್ಲಾಟ್ ಖರೀದಿದಾರರಿಂದ ಸಂಗ್ರಹಿಸಿದ ಹಣವನ್ನು ನಿರ್ಮಾಣ ಯೋಜನೆಗಳಿಗೆ ಖರ್ಚು ಮಾಡುವ ಬದಲು ತನ್ನ ವೈಯಕ್ತಿಕ ಬಳಕೆಗೆ ಬಳಸಿರುವುದು ಗೊತ್ತಾಗಿದೆ. ಅವರು ವಿವಿಧ ಹಣಕಾಸು ಸಂಸ್ಥೆಗಳಿಂದ ಐದು ಸಾವಿರ ಕೋಟಿ ರು. ಸಾಲ ಮಾಡಿದ್ದಾರೆ ಮತ್ತು ಸುಮಾರು ಒಂದು ಸಾವಿರ ಕೋಟಿ ರು.ನ ಕೆಲವು ಸಾಲವನ್ನು ಪಾವತಿಯಾಗದ ಹಣ (ಎನ್ಪಿಎ) ಎಂದು ಹೆಸರಿಸಲಾಗಿದೆ ಎಂದು ಇಡಿ ಮೂಲಗಳು ಹೇಳಿವೆ.