ಮಂತ್ರಿ ಗ್ರೂಪ್ ಎಂಡಿ ಬಂಧನ: ಸಾವಿರಾರು ಮಂದಿಯಿಂದ ಹಣ ಪಡೆದು ಫ್ಲ್ಯಾಟ್ ನೀಡದೆ ವಂಚನೆ
ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಆರೋಪದ ಮೇರೆಗೆ ರಿಯಲ್ ಎಸ್ಟೇಟ್ ಕಂಪನಿಯಾದ ಮಂತ್ರಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಪಾಂಡುರಂಗ್ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು (ಜೂ.26): ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಆರೋಪದ ಮೇರೆಗೆ ರಿಯಲ್ ಎಸ್ಟೇಟ್ ಕಂಪನಿಯಾದ ಮಂತ್ರಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಪಾಂಡುರಂಗ್ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಸಾವಿರಾರು ಮಂದಿಗೆ ಫ್ಲಾಟ್ ನೀಡುವ ಆಶ್ವಾಸನೆ ನೀಡಿ ಕೋಟ್ಯಂತರ ರು. ಪಡೆದು ಅದನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಆರೋಪದ ಮೇರೆಗೆ ಇ.ಡಿ. ಅಧಿಕಾರಿಗಳು ಶುಕ್ರವಾರ ವಿಚಾರಣೆಗೆ ಕರೆದಿದ್ದರು.
ವಿಚಾರಣೆ ವೇಳೆ ಸಮಂಜಸ ಉತ್ತರ ನೀಡದ ಹಿನ್ನೆಲೆಯಲ್ಲಿ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಶನಿವಾರವೂ ಸಹ ಸೂಕ್ತ ಉತ್ತರ ಲಭ್ಯವಾಗದ ಹಿನ್ನೆಲೆಯಲ್ಲಿ ಬಂಧಿಸಿ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ 10 ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡರು. ಹಣ ಪಡೆದು ಫ್ಲಾಟ್ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಂಚನೆಗೊಳಗಾದವರು ಪೊಲೀಸರಿಗೆ ವಂಚನೆ ಪ್ರಕರಣದ ದೂರು ನೀಡಿದ್ದರು. ಮಂತ್ರಿ ಡೆವಲಪರ್ಸ್ ಕಂಪನಿಯ ವಿರುದ್ಧ 2020ರಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು. ಅಲ್ಲದೇ, ಇ.ಡಿ.ಗೂ ದೂರು ದಾಖಲಿಸಲಾಗಿತ್ತು.
ಗುಜರಾತ್ ಭಯೋತ್ಪಾದನಾ ನಿಗ್ರಹದಳದಿಂದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧನ!
ಕೋಟ್ಯಂತರ ರು. ಅಕ್ರಮವಾಗಿ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸಹ ದಾಳಿ ನಡೆಸಿದ್ದರು. ಐಟಿ ಇಲಾಖೆಯಿಂದಲೂ ಇಡಿಗೆ ಅಕ್ರಮದ ಮಾಹಿತಿ ಒದಗಿಸಲಾಗಿತ್ತು. ಕಂಪನಿಯು ಸಾವಿರಾರು ಖರೀದಿದಾರರಿಂದ ಸುಮಾರು ಒಂದು ಸಾವಿರ ಕೋಟಿ ರು.ನಷ್ಟು ಮುಂಗಡವಾಗಿ ಸಂಗ್ರಹಿಸಿ ವಂಚಿಸಲಾಗಿದ್ದು, ಕೋಟ್ಯಂತರ ರು. ಹಣ ಪಡೆದು 7-10 ವರ್ಷವಾದರೂ ಫ್ಲಾಟ್ ನೀಡಿಲ್ಲ ಎಂದು ಹೇಳಲಾಗಿದೆ. ತನಿಖೆ ವೇಳೆ ಬಹುತೇಕ ವ್ಯವಹಾರಗಳು ನಗದು ರೂಪದಲ್ಲಿ ನಡೆದಿರುವುದು ಪತ್ತೆಯಾಗಿತ್ತು.
ಬೆಂಗಳೂರು: ಮದುವೆ ಮನೆಯಲ್ಲಿ ಮಕ್ಕಳ ಒಡವೆ ಕದಿಯುತ್ತಿದ್ದ ಐನಾತಿ ಕಳ್ಳ ಅರೆಸ್ಟ್..!
ಅಕ್ರಮವಾಗಿ ಹಣ ವಹಿವಾಟು ನಡೆಸಿರುವುದಕ್ಕೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿತ್ತು. ಹಣಕಾಸು ವ್ಯವಹಾರದಲ್ಲಿ ಸಾಕಷ್ಟುವ್ಯತ್ಯಾಸ ಕಂಡು ಬಂದಿತ್ತು. ಸುಶೀಲ್ ಜನರಿಗೆ ದಾರಿ ತಪ್ಪಿಸುವ ಬ್ರೌಚರ್ ತೋರಿಸಿ ಯೋಜನೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಅಲ್ಲದೇ, ಬೆಂಗಳೂರಿನ ಫ್ಲಾಟ್ ಖರೀದಿದಾರರಿಂದ ಸಂಗ್ರಹಿಸಿದ ಹಣವನ್ನು ನಿರ್ಮಾಣ ಯೋಜನೆಗಳಿಗೆ ಖರ್ಚು ಮಾಡುವ ಬದಲು ತನ್ನ ವೈಯಕ್ತಿಕ ಬಳಕೆಗೆ ಬಳಸಿರುವುದು ಗೊತ್ತಾಗಿದೆ. ಅವರು ವಿವಿಧ ಹಣಕಾಸು ಸಂಸ್ಥೆಗಳಿಂದ ಐದು ಸಾವಿರ ಕೋಟಿ ರು. ಸಾಲ ಮಾಡಿದ್ದಾರೆ ಮತ್ತು ಸುಮಾರು ಒಂದು ಸಾವಿರ ಕೋಟಿ ರು.ನ ಕೆಲವು ಸಾಲವನ್ನು ಪಾವತಿಯಾಗದ ಹಣ (ಎನ್ಪಿಎ) ಎಂದು ಹೆಸರಿಸಲಾಗಿದೆ ಎಂದು ಇಡಿ ಮೂಲಗಳು ಹೇಳಿವೆ.