Asianet Suvarna News Asianet Suvarna News

ಇದೆಂತ ದುರಂತ ಪ್ರೀತಿ! ಎಣ್ಣೆ ಏಟಲ್ಲಿ ಬರ್ತಡೇ ವಿಷ್‌ ಮಾಡಲು ಗರ್ಲ್‌ ಫ್ರೆಂಡ್‌ ಮನೆಗೆ ಹೋಗಿ ಕೊಲೆಯಾದ ಯುವಕ

ಪ್ರಶಾಂತ್ ಪ್ರತಿನಿತ್ಯ ತನ್ನ ಗೆಳತಿಯೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದ. ಆದರೆ ಕಳೆದ ಎರಡು ದಿನಗಳಿಂದ ಪ್ರಶಾಂತ್ ಜೊತೆ ಮಾತನಾಡಲು ಆಕೆಯ ತಂದೆ ಅವಕಾಶ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

drunk coimbatore youth goes to girlfriend s home to wish her on her birthday murdered by her relative ash
Author
First Published Jun 6, 2023, 10:56 AM IST

ಕೊಯಮತ್ತೂರು (ಜೂನ್ 6, 2023): 21 ವರ್ಷದ ಯುವಕ ತನ್ನ ಗರ್ಲ್‌ಫ್ರೆಂಡ್‌ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹೋಗಿ ಕೊಲೆಯಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೈಲಾಡುಂಪರೈ ಎಂಬಲ್ಲಿ ನಡೆದಿದೆ. ಸೋಮವಾರ ಮಧ್ಯರಾತ್ರಿ 12.15 ರ ಸುಮಾರಿಗೆ ಆಕೆಯ ಮನೆಗೆ ತಲುಪಿದಾಗ ಆಕೆಯ ಸಂಬಂಧಿಕರು ಯುವಕನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಮೃತ ಯುವಕನನ್ನು ಕೊಯಮತ್ತೂರು ನಗರದ ಸುಂದರಪುರಂನ ಗಾಂಧಿ ನಗರದ ವಿ ಪ್ರಶಾಂತ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಂಪನಿಯಲ್ಲಿ ಲೋಡ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಮೂರು ವರ್ಷಗಳಿಂದ 18 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಪ್ರೇಮ ಪ್ರಕರಣ ಪೋಷಕರಿಗೆ ಗೊತ್ತಾಗಿದ್ದು, ಒಂದು ವರ್ಷದ ಬಳಿಕ ಮದುವೆ ಮಾಡಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನು ಓದಿ: Bengaluru Airport: ವಿಮಾನ ಪ್ರಯಾಣಿಕನ ಬ್ಯಾಗ್‌ನಿಂದ 2 ಐಫೋನ್‌ ಕದ್ದ ಕೆಂಪೇಗೌಡ ಏರ್‌ಪೋರ್ಟ್ ಸಿಬ್ಬಂದಿ

ಇನ್ನು, ಪ್ರಶಾಂತ್ ಪ್ರತಿನಿತ್ಯ ತನ್ನ ಗೆಳತಿಯೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದ. ಆದರೆ ಕಳೆದ ಎರಡು ದಿನಗಳಿಂದ ಪ್ರಶಾಂತ್ ಜೊತೆ ಮಾತನಾಡಲು ಆಕೆಯ ತಂದೆ ಅವಕಾಶ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ, ಆತ ಸೋಮವಾರ ಮಧ್ಯರಾತ್ರಿಯೇ  ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿ ತನ್ನ ಮೂವರು ಗೆಳೆಯರಾದ ಧರಣಿ ಪ್ರಶಾಂತ್, ಗುಣಶೇಖರನ್ ಮತ್ತು ಅಭಿಷೇಕ್ ಜೊತೆಗೆ ಸ್ಕೂಟರ್‌ನಲ್ಲಿ ಮೈಲಾಡುಂಪರೈನಲ್ಲಿರುವ ವಸಂತಮ್ ನಗರದಲ್ಲಿರುವ ಆಕೆಯ ನಿವಾಸಕ್ಕೆ ಹೋಗಿದ್ದ.

ಅಲ್ಲದೆ, ಈ ವೇಳೆ ಮದ್ಯದ ಅಮಲಿನಲ್ಲಿದ್ದ ಪ್ರಶಾಂತ್ ಸೇರಿ ನಾಲ್ವರು ಯುವಕರು ಕಾಂಪೌಂಡ್ ಹಾರಿ ಬಾಗಿಲು ಬಡಿದಿದ್ದಾರೆ. ಆಕೆಯ ತಂದೆ ಮತ್ತು ಆಕೆಯ ತಾಯಿಯ ಸೋದರಸಂಬಂಧಿ 29 ವರ್ಷದ ಎಂ ವಿಘ್ನೇಶ್ ಬಾಗಿಲು ತೆರೆದಿದ್ದಾರೆ. ನಂತರ ಪ್ರಶಾಂತ್‌ ತನ್ನ ಗರ್ಲ್‌ಫ್ರೆಂಡ್‌ಗೆ ಕರೆ ಮಾಡಿ ಶುಭಾಶಯ ಕೋರಿದ್ದಾನೆ. ಆದರೆ ಟ್ಯಾಕ್ಸಿ ಡ್ರೈವರ್ ಆಗಿದ್ದ ವಿಘ್ನೇಶ್, ಪ್ರಶಾಂತ್ ಮತ್ತು ಆತನ ಮೂವರು ಸ್ನೇಹಿತರೊಂದಿಗೆ ಜಗಳವಾಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದತ್ತು ಕೇಂದ್ರದಲ್ಲಿ ಮಗುವಿನ ಮೇಲೆ ಅಮಾನುಷ ಹಲ್ಲೆ; ಕೂದಲು ಹಿಡಿದು ನೆಲಕ್ಕೆ ಎಸೆದ ಪಾಪಿ ಮಹಿಳೆ: ವಿಡಿಯೋದಲ್ಲಿ ಸೆರೆ

ಅಲ್ಲದೆ, ಸಿಟ್ಟಿಗೆದ್ದ ವಿಘ್ನೇಶ್ ಕುಡುಗೋಲು ತೆಗೆದುಕೊಂಡು ಪ್ರಶಾಂತನ ಎಡ ಎದೆ ಮತ್ತು ಎಡ ಭುಜದ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಸ್ನೇಹಿತರು ಸ್ಕೂಟರ್‌ನಲ್ಲಿ ಪ್ರಶಾಂತ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದುರದೃಷ್ಟವಶಾತ್‌, ಸುಂದರಪುರಂ ಬಳಿ ಬಂದಾಗ ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಬಳಿಕ, ಅವರು 108 ಆಂಬ್ಯುಲೆನ್ಸ್ ಸೇವೆಯನ್ನು ಸಂಪರ್ಕಿಸಿ ಯುವಕನನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿನ ವೈದ್ಯರು ಪ್ರಶಾಂತ್‌ ಮೃತಪಟ್ಟಿದ್ದಾರೆ ಎಂದು  ಎಂದು ಘೋಷಿಸಿದ್ದಾರೆ. 

ಇನ್ನು, ಈ ಪ್ರಕರಣ ಸಂಬಂಧ ಚೆಟ್ಟಿಪಾಳ್ಯಂ ಪೊಲೀಸರು ಕಾಲ್‌ ಟ್ಯಾಕ್ಸಿ ಡ್ರೈವರ್‌ ವಿಘ್ನೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಅವಿವಾಹಿತ ಪುರುಷರಿಗೆ ಶಾಕಿಂಗ್ ನ್ಯೂಸ್‌: AI ಮೂಲಕ ಸೃಷ್ಟಿಯಾದ ವ್ಯಕ್ತಿಯನ್ನೇ ಮದ್ವೆಯಾದ ಮಹಿಳೆ!

18 ವರ್ಷದ ಯುವತಿಯ ಮನೆಗೆ ಆ ರೀತಿ ಕುಡಿದು ಮಧ್ಯರಾತ್ರಿಯ ವೇಳೆಗೆ ಹೋಗುವುದನ್ನು ತಪ್ಪು ಎಂದು ಹೇಳಬಹುದಾದ್ರೂ, ಈ ರೀತಿ ಯುವಕನನ್ನು ಕೊಲೆ ಮಾಡಿರುವುದು ಘೋರ ಅಪರಾಧವಾಗಿದೆ. ಆತನಿಗೆ ಬುದ್ಧಿ ಹೇಳಿ ಕಳಿಸುವ ಬದಲು ಭೀಕರವಾಗಿ ಹಲ್ಲೆ ಮಾಡಿ ಆತನ ಜೀವವನ್ನೇ ಬಲಿ ತೆಗೆದುಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. 

ಇದನ್ನೂ ಓದಿ: ಮಗನನ್ನು ಕೊಂದು ತಲೆಯ ಭಾಗವನ್ನು ಬೇಯಿಸಿ ತಿಂದ ಕ್ರೂರಿ ತಾಯಿ: ಕಾರಣ ಕೇಳಿದ ಪೊಲೀಸರೇ ಬೆಚ್ಚಿ ಬಿದ್ರು!

Follow Us:
Download App:
  • android
  • ios