ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಅದೇ ರೀತಿಯ ಅಮಾನುಷ ಘಟನೆಯೊಂದು ನಡೆದಿದೆ. ವರದಕ್ಷಿಣೆ ನೀಡಿಲ್ಲ ಎಂದು ಕೇವಲ 20 ವರ್ಷದ ಗೃಹಿಣಿಯನ್ನು ಆಕೆಯ ಪತಿ ಹಾಗೂ ಅತ್ತೆ ಮನೆಯವರು ಸಜೀವವಾಗಿ ಸುಟ್ಟಿದ್ದಾರೆ. ಕಳೆದ ವರ್ಷವಷ್ಟೇ ಈಕೆಯ ವಿವಾಹವಾಗಿತ್ತು.

ಲಕ್ನೋ: ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಎಷ್ಟು ಎಚ್ಚರಿಸಿದರೂ, ಎಷ್ಟೇ ಕಠಿಣ ಕಾನೂನುಗಳನ್ನು ತಂದರು ದೇಶದ ಹಲವೆಡೆ ಈ ವರದಕ್ಷಿಣೆ ಪಿಡುಗು ಭಯನಕವಾಗಿ ಜೀವಂತವಾಗಿದೆ. ಮದುವೆಯಾಗಿ ಗಂಡನನ್ನೇ ನಂಬಿ ತನ್ನ ಕುಟುಂಬವನ್ನೆಲ್ಲವನ್ನೂ ಬಿಟ್ಟು ಬಂದ ಹೆಣ್ಣನ್ನು ಗಂಡನ ಕಡೆಯವರು ವರದಕ್ಷಿಣೆಗಾಗಿ ಪೀಡಿಸುವ ಅನೇಕ ಘಟನೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ವರದಕ್ಷಿಣೆ ತರದೇ ಇದ್ದಿದ್ದಕ್ಕೆ, ಹೆಣ್ಣು ಹೆತ್ತಳೆಂಬ ಕಾರಣಕ್ಕೆ ಹೀಗೆ ವಿವಿಧ ರೀತಿಯಲ್ಲಿ ಮಹಿಳೆಯರನ್ನು ಹಿಂಸಿದಲಾಗುತ್ತಿದೆ. ಇದೇ ಕಾರಣಕ್ಕೆ ಗ್ರಾಮೀಣ ಭಾಗದ ಕೆಲವೆಡೆಯಲ್ಲದೇ ಪಟ್ಟಣದ ವಿದ್ಯಾವಂತ ಸುಶಿಕ್ಷಿತ ಕುಟುಂಬದಲ್ಲೂ ಮಹಿಳೆಯರು ಸಂಕಷ್ಟಕ್ಕೀಡಾದ ತಮ್ಮ ಪ್ರಾಣವನ್ನೇ ಕಳೆದುಕೊಂಡ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ.

Add Asianetnews Kannada as a Preferred SourcegooglePreferred

ಈಗ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಅದೇ ರೀತಿಯ ಅಮಾನುಷ ಘಟನೆಯೊಂದು ನಡೆದಿದೆ. ವರದಕ್ಷಿಣೆ ನೀಡಿಲ್ಲ ಎಂದು ಕೇವಲ 20 ವರ್ಷದ ಗೃಹಿಣಿಯನ್ನು ಆಕೆಯ ಪತಿ ಹಾಗೂ ಅತ್ತೆ ಮನೆಯವರು ಸಜೀವವಾಗಿ ಸುಟ್ಟಿದ್ದಾರೆ. ಕಳೆದ ವರ್ಷವಷ್ಟೇ ಈಕೆಯ ವಿವಾಹವಾಗಿತ್ತು. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಚಿಂತಗರ್ಹಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ. ಪತಿ ಅತ್ತೆ ಹಾಗೂ ಮಾವ ಮೂವರು ಸೇರಿ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ. 

ನಿಕ್ಕಿ ಗಲ್ರಾನಿ ಮದುವೆಯಾಗಲು ಆದಿ ಪಿನಿಸೆಟ್ಟಿ ಪಡೆದ ವರದಕ್ಷಿಣೆ ಎಷ್ಟು ಗೊತ್ತಾ?

ಬುಧವಾರ (ಜೂನ್‌ 8) ಸಂತ್ರಸ್ತೆಯ ತಂದೆ ಹೀರಾಲಾಲ್ ಸಿಂಗ್ (Hiralal Singh), ಚಂದಪ ಪೊಲೀಸ್ ಠಾಣೆಯಲ್ಲಿ (Chandapa police station) ನೀಡಿದ ದೂರಿನ ಆಧಾರದ ಮೇಲೆ ಪತಿ ಅನಿಲ್ ಕುಮಾರ್ ಸಿಂಗ್ (Anil Kumar Singh), ಮಾವ ಮಹೇಂದ್ರ ಸಿಂಗ್ (Mahendra Singh) ಮತ್ತು ಅತ್ತೆ ಯಶೋದಾ (Yasoda)ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಂತ್ರಸ್ತೆಯ ತಂದೆ ಹೀರಾಲಾಲ್ ಸಿಂಗ್, ಚಂದಪ ಪೊಲೀಸ್ ಠಾಣೆಯಲ್ಲಿ ಕೊಲೆಯ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ.

ಕೇರಳ ವೈದ್ಯ ವಿಸ್ಮಯ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಪ್ರಕರಣದಲ್ಲಿ ಪತಿ ದೋಷಿ: ಕೋರ್ಟ್‌

ಸಂತ್ರಸ್ತ ಮಹಿಳೆಯನ್ನು ಪಾಯಲ್ (Payal) ಎಂದು ಗುರುತಿಸಲಾಗಿದೆ. ಈಕೆ ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಬರ್ಹಾಮ್ ಪೊಲೀಸ್ ಠಾಣಾ (Barham police station) ವ್ಯಾಪ್ತಿಯ ನಾಗ್ಲ ವೀರದ (Nagla Veera) ನಿವಾಸಿ. ಈಕೆಯನ್ನು ಕಳೆದ ವರ್ಷ ಮೇ 24 ರಂದು ಚಂದಪಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂತಗರ್ಹಿ ಗ್ರಾಮದ ಅನಿಲ್ ಕುಮಾರ್ ಸಿಂಗ್ (25) ಗೆ ವಿವಾಹ ಮಾಡಿಕೊಡಲಾಗಿತ್ತು. 

ಮದುವೆಯಾದಾಗಿನಿಂದಲೂ ಪಾಯಲ್‌ಗೆ ಆಕೆಯ ಪತಿ ಹಾಗೂ ಅತ್ತೆ ಮಾವಂದಿರು ವರದಕ್ಷಿಣೆ ನೀಡುವಂತೆ ಚಿತ್ರಹಿಂಸೆ ನೀಡುತ್ತಿದ್ದರು. ದೊಡ್ಡ ಮೊತ್ತದ ಹಣ ನೀಡುವಂತೆ ಕೇಳುತ್ತಿದ್ದರು. ಈ ಮಧ್ಯೆ ಚಿಂತಗರ್ಹಿ ಗ್ರಾಮಸ್ಥರಿಂದ ಘಟನೆಯ ಸುದ್ದಿ ತಿಳಿದು ಪಾಯಲ್ ಮನೆಗೆ ಧಾವಿಸಿದೆ ಎಂದು ಪಾಯಲ್ ತಂದೆ ಹೀರಾಲಾಲ್ ಅವರು ಹೇಳಿದರು. ಅಲ್ಲಿಗೆ ತಲುಪಿದಾಗ ಆಕೆಯ ಮೃತ ದೇಹವು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದೆ ಎಂದು ತಿಳಿಸಲಾಯಿತು.
ಮತ್ತೊಂದೆಡೆ ಪಾಯಲ್ ಅವರ ಗಂಡನ ಮನೆಯವರು ಪಾಯಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಸಾವನ್ನಪ್ಪಿದ್ದಾರೆ ಎಂದು ಹೇಳಿದರು ಎಂದು ಹೀರಾಲಾಲ್‌ ದುಃಖ ತೋಡಿಕೊಂಡಿದ್ದಾರೆ. 

ಏತನ್ಮಧ್ಯೆ, ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳದಿಂದ ಮೃತರ ಸುಟ್ಟ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ವರದಕ್ಷಿಣೆ ಕಿರುಕುಳ ಮತ್ತು ಮರಣದ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.